ಸೌದಿಯಲ್ಲಿ ವಾಸಿಸುತ್ತಿದ್ದ ಉತ್ತರ ಕನ್ನಡ ಜನ ಮರಳಿ ತವರಿಗೆ!
ಕಾರವಾರ, ಜುಲೈ 07: ಸೌದಿ ಅರೇಬಿಯಾ ಸರ್ಕಾರ ತನ್ನ ಅರ್ಥಿಕ ಹೊಂದಾಣಿಕೆ ಕಾರ್ಯಕ್ರಮದ ಭಾಗವಾಗಿ ಪರಿಚಯಿಸಿರುವ ನೂತನ ವಿದೇಶಿ ಅವಲಂಬಿತ ಶುಲ್ಕ ನೀತಿ ಇದೀಗ ಅಲ್ಲಿ ವಾಸಿಸುತ್ತಿರುವ ಇತರ ದೇಶಗಳ ಲಕ್ಷಾಂತರ ಜನರ ಮೇಲೆ ಅಡ್ಡ ಪರಿಣಾಮ ಬೀರಿದೆ.
ದಶಕಗಳಿಂದ ಸೌದಿಯಲ್ಲಿ ವಾಸಿಸುತ್ತಿದ್ದ ಜಿಲ್ಲೆಯ ಭಟ್ಕಳ, ಕುಮಟಾ, ಹೊನ್ನಾವರ, ಶಿರಸಿ ಭಾಗದ ನೂರಾರು ಜನ ಇದೀಗ ಈ ನೀತಿಯಿಂದಾಗಿ ತಮ್ಮ ತವರು ನೆಲಕ್ಕೆ ಹಿಂದಿರುಗುತ್ತಿದ್ದಾರೆ.
ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆ ಇಂದಿಗೂ ಪಂಜರ ಹಕ್ಕಿ
1980ರ ದಶಕದಿಂದ ಭಟ್ಕಳಿನ ನೂರಾರು ಜನರು ತಮ್ಮ ಜೀವನೋಪಾಯಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಹಲವರು ಅಲ್ಲಿಯೇ ನೆಲೆಸಿದ್ದರು.
ನಾಲ್ಕೈದು ವರ್ಷಗಳ ಹಿಂದಿನ ಅವಧಿಗೆ ಹೋಲಿಸಿದರೆ ಕಳೆದ ಮೂರು ವರ್ಷಗಳಿಂದ ಸೌದಿಯಲ್ಲಿ ವಲಸಿಗರ ತೆರಿಗೆ (ಲೇವಿ) ಮೂರು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷದಿಂದ ಸೌದಿ ಸರ್ಕಾರ ಈ ನೂತನ ವಲಸಿಗರ ಸುಂಕವನ್ನು ಪರಿಚಯಿಸಿದ್ದು, ಅದರಲ್ಲಿ ಪ್ರತಿ ತಿಂಗಳು ಸೌದಿ ಸರ್ಕಾರಕ್ಕೆ ಅವಲಂಬಿತರು (ಸೌದಿಯಲ್ಲಿ ವಾಸಿಸುವ ಇತರ ದೇಶದವರು) ದೊಡ್ಡ ಮೊತ್ತದ ಹಣವನ್ನು ಪಾವತಿಸಬೇಕಾಗಿದೆ.
ಈ ಹಿಂದೆ ಒಂದು ತಿಂಗಳಿಗೆ ಪ್ರತಿ ಕೆಲಸಗಾರನಿಗೆ 200 (ರೂ.3,668) ಸೌದಿ ರಿಯಾಲ್ ಹಾಗೂ 100 ಸೌದಿ ರಿಯಾಲ್ (ರೂ.1834) (ಇದು ಕುಟುಂಬ ತೆರಿಗೆ ಎಂದು ಕರೆಯಲಾಗುತ್ತದೆ) ಪ್ರತಿ ಅವಲಂಬಿತರಿಗೆ ಸೌದಿ ಸರ್ಕಾರ ವಿಧಿಸುತ್ತಿತ್ತು.
ಜಿಡಿಪಿ ಬೆಳವಣಿಗೆಯಲ್ಲಿ ಏರಿಕೆ: ನೋಟು ರದ್ದತಿ ಬಳಿಕ ಇದು ಅತ್ಯಧಿಕ
ಆದರೆ, ಜುಲೈನಿಂದ ಪ್ರತಿ ಅವಲಂಬಿತರು ತಿಂಗಳಿಗೆ 200 ಸೌದಿ ರಿಯಾಲ್ ಮತ್ತು ಕೆಲಸದ ವ್ಯಕ್ತಿ 300ರಿಂದ 400 ಸೌದಿ ರಿಯಾಲ್ ಅನ್ನು ತಿಂಗಳಿಗೆ ಪಾವತಿಸಬೇಕಾಗಿದೆ. ಅಂದರೆ, ವಾರ್ಷಿಕವಾಗಿ ಪ್ರತಿಯೊಬ್ಬ ಕೆಲಸಗಾರನು 88,000 ರೂ. ಮತ್ತು ಪ್ರತಿ ಅವಲಂಬಿತರಿಗೆ 44,000 ರೂ. ಪಾವತಿಸಬೇಕಾಗಿದೆ.
ಕಳೆದ ಮೂರು ದಶಕಗಳಿಂದ ಭಟ್ಕಳ ಮೂಲದ ಹಫೀಜ್ ಆಸ್ಕ್ರಿರಿ (51) ಅವರ ಪತ್ನಿ ಮತ್ತು ಐದು ಮಕ್ಕಳೊಂದಿಗೆ ಸೌದಿಯ ಜೆದ್ದಾದಲ್ಲಿದ್ದ ವಾಸವಾಗಿದ್ದರು. ಫೋರ್ಡ್ ಕಾರ್ ಶೋರೂಂ ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಅವರು, 'ಸೌದಿ ಆರ್ಥಿಕತೆ ಕುಸಿದ ನಂತರ ಸರ್ಕಾರ ಕಳೆದ 4 ವರ್ಷಗಳಲ್ಲಿ ವಿವಿಧ ತೆರಿಗೆಗಳನ್ನು ವಲಸಿಗರಿಗೆ ಪರಿಚಯಿಸಿದೆ' ಎನ್ನುತ್ತಾರೆ.
'ಮೊದಲೆಲ್ಲ ನಾವು ಹೇಗಾದರೂ ಹೊಂದಾಣಿಕೆ ಮಾಡಿಕೊಂಡು ಇದ್ದೆವು. ಆದರೆ, ಕಳೆದ ವರ್ಷದಿಂದ ವಲಸಿಗರ ತೆರಿಗೆ ಪರಿಚಯಿಸಿರುವುದು ನಮ್ಮ ಮೇಲೆ ಭಾರವಾದ ಹೊರೆ ಇಟ್ಟಂತಾಗಿದೆ. ಹಾಗಾಗಿ ನನ್ನ ಕೆಲಸವನ್ನು ಬಿಟ್ಟು ನಾನು ಭಟ್ಕಳಕ್ಕೆ ಮರಳಿದೆ' ಎಂದು ಅವರು ಹೇಳಿದರು.