ಉತ್ತರಾಖಂಡದಲ್ಲಿ ‘ಉತ್ತರ ಕನ್ನಡದ ಸಮಸ್ಯೆ ಮತ್ತು ಪರಿಹಾರೋಪಾಯ’
ಕಾರವಾರ, ಫೆಬ್ರವರಿ 4: ಉತ್ತರ ಕನ್ನಡ ಬಹುಪಾಲು ಅರಣ್ಯ ಪ್ರದೇಶವನ್ನು ಹೊಂದಿರುವ ಜಿಲ್ಲೆ. ಇಲ್ಲಿನ ಅನೇಕ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಬೆಟ್ಟ-ಗುಡ್ಡ, ಹರಿಯುವ ನದಿಗಳನ್ನೂ ದಾಟಿಕೊಂಡು ಹೋಗುವ ಅನಿವಾರ್ಯತೆ ಇದೆ.
ಇಂಥ ಸಮಸ್ಯೆಗಳು ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗಿ ಪ್ರಕಟಗೊಂಡು, ಯಾವುದೋ ರಾಜ್ಯ, ಜಿಲ್ಲೆಗಳಿಂದ ಇಲ್ಲಿಗೆ ಅಧಿಕಾರಿಯಾಗಿ ಬರುವವರ ಗಮನ ಸೆಳೆದು ಪರಿಹಾರ ಕಂಡುಕೊಳ್ಳುವ ಕಾರ್ಯಗಳು ನಡೆಯುತ್ತಿರುತ್ತವೆ. ಆದರೆ, ಭೌಗೋಳಿಕವಾಗಿ ವಿಶಾಲವಾಗಿರುವ ಈ ಜಿಲ್ಲೆಯನ್ನು ಬಹು ಕಡಿಮೆ ಸಮಯದಲ್ಲಿ ಅರ್ಥ ಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸವೇ ಸರಿ.
ಉ.ಕ ಜಿಲ್ಲಾ ಪಂಚಾಯತಿ ಅಖಾಡಕ್ಕೆ ಎಂಎಲ್ಎ ಸಹೋದರಿ?
ಜಿಲ್ಲೆಯ ಸ್ಪಷ್ಟ ಚಿತ್ರಣ ಮೊದಲೇ ದೊರೆಯಲಿದೆ
ಹೀಗಾಗಿ, ಇಲ್ಲಿಗೆ ಬರುವುದಕ್ಕಿಂತಲೂ ಮೊದಲೇ ಉತ್ತರ ಕನ್ನಡದ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ಪ್ರೊಬೆಷನರಿ ಐಎಎಸ್ ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಡುವ ಕಾರ್ಯ ಇಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ಸದ್ಯ ಹಾವೇರಿ ಜಿ.ಪಂ ಸಿಇಒ ಆಗಿರುವ ಮೊಹಮ್ಮದ್ ರೋಶನ್ ಅವರು ಮಾಡಿದ್ದಾರೆ. ಇದರಿಂದಾಗಿ ಐಎಎಸ್ ಅಧಿಕಾರಿಯಾಗಿ ಉತ್ತರ ಕನ್ನಡಕ್ಕೆ ಬರುವವರಿಗೆ ಈ ಜಿಲ್ಲೆಯ ಸ್ಪಷ್ಟ ಚಿತ್ರಣ ಮೊದಲೇ ದೊರೆಯಲಿದ್ದು, ಶೀಘ್ರವೇ ಸಮಸ್ಯೆಗಳಿಗೆ ಸ್ಪಂದಿಸಲು ಕೂಡ ಇದು ಅನುಕೂಲವಾಗಲಿದೆ.
ಅಧಿಕಾರಿಗಳೊಂದಿಗೆ ಪಿಪಿಟಿ ಮೂಲಕ ಸಮಾಲೋಚನೆ
ಉತ್ತರಾಖಂಡದ ಮಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ನಲ್ಲಿ ಇತ್ತೀಚಿಗೆ ಕಾರ್ಯಾಗಾರ ನಡೆಸಿರುವ ಸಿಇಒ ರೋಶನ್, ಉತ್ತರ ಕನ್ನಡದ ಸಮಸ್ಯೆಗಳು ಮತ್ತು ಪರಿಹಾರದ ಕುರಿತು 2020ರ ಬ್ಯಾಚ್ನ ಸುಮಾರು 180 ಪ್ರೊಬೆಷನರಿ ಐಎಎಸ್ ಅಧಿಕಾರಿಗಳೊಂದಿಗೆ ಪಿಪಿಟಿ ಮೂಲಕ ಸಮಾಲೋಚನೆ ನಡೆಸಿದ್ದಾರೆ.
ಉತ್ತರ ಕನ್ನಡಕ್ಕೆ ಶೀಘ್ರವೇ ಅಧ್ಯಯನ ಪ್ರವಾಸ
ಈ ವೇಳೆ ಶೈಕ್ಷಣಿಕ ಕಾರ್ಯಕ್ರಮಗಳಿಗೆ, ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಹೆಚ್ಚು ಕೇಂದ್ರೀಕರಿಸಲಾಗಿತ್ತು. ಜಿಲ್ಲೆಯಲ್ಲಿ ಯಾವ್ಯಾವ ಯೋಜನೆಗಳನ್ನು ಕಾರ್ಯಗೊಳಿಸಲಾಗಿದೆ ಎಂಬುದರ ಬಗ್ಗೆಯೂ ವಿವರಿಸಲಾಗಿದೆ. ಇನ್ನು, ಈ ವೇಳೆ ಹಾಜರಿದ್ದವರ ಪೈಕಿ 30ಕ್ಕೂ ಹೆಚ್ಚು ಪ್ರೊಬೆಷನರಿ ಐಎಎಸ್ ಅಧಿಕಾರಿಗಳು ಉತ್ತರ ಕನ್ನಡಕ್ಕೆ ಶೀಘ್ರವೇ ಅಧ್ಯಯನ ಪ್ರವಾಸ ಕೂಡ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಪ್ರವಾಸೋದ್ಯಮಕ್ಕಾಗಿ ಸಂಪದ್ಭರಿತ ವಾತಾವರಣ
ಉತ್ತರ ಕನ್ನಡ ಸ್ವರ್ಗವಿದ್ದಂತೆ. ಪ್ರವಾಸೋದ್ಯಮಕ್ಕಾಗಿ ಸಂಪದ್ಭರಿತ ವಾತಾವರಣ ಹೊಂದಿದೆ. ನೈಸರ್ಗಿಕವಾಗಿ ಬಹಳ ಸುಂದರವಾಗಿರುವ ಈ ಜಿಲ್ಲೆಯಲ್ಲಿ ಹೆಚ್ಚಿರುವ ಕಾಡು-ಗುಡ್ಡಗಳು, ಹರಿಯುವ ನದಿಗಳೇ ಸಾಕಷ್ಟು ಸಮಸ್ಯೆಗಳಿಗೂ ಕಾರಣವಾಗಿವೆ. ಹೀಗಾಗಿ ಯಾವ ರೀತಿಯಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಬಗ್ಗೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅನುಭವದ ಮೇರೆಗೆ ಪ್ರೊಬೆಷನರಿ ಐಎಎಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದು ಜಿ.ಪಂ ಸಿಇಒ ಮೊಹಮ್ಮದ್ ರೋಶನ್ ಅವರು ಹೇಳಿದ್ದಾರೆ.
Recommended Video