ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಜಿಲ್ಲಾಡಳಿತ ಸಜ್ಜು
ಕಾರವಾರ, ಮಾರ್ಚ್ 11: ಚುನಾವಣಾ ಆಯೋಗದ ನಿರ್ದೇಶನದಂತೆ ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 1,437 ಮತಗಟ್ಟೆಗಳನ್ನು ರಚಿಸಲಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ಹಾಗೂ ಕಿತ್ತೂರು ಕ್ಷೇತ್ರದಲ್ಲಿ ಒಟ್ಟು 485 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಈ ವರ್ಷದ ಜ.1ರಿಂದ ಜ.16ರ ವರೆಗೆ ಸಿದ್ಧಗೊಂಡ ಮತದಾರರ ಪಟ್ಟಿಯ ಪ್ರಕಾರ 7,78,350 ಗಂಡು, 7,55,678 ಹೆಣ್ಣು, ಎಂಟು ಇತರೆ ಸೇರಿ 15,34,036 ಮಂದಿ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.
ಲೋಕಸಭಾ ಚುನಾವಣೆ: ಸಿಇಟಿ ಪರೀಕ್ಷೆ ಮುಂದೂಡಿಕೆ ಸಾಧ್ಯತೆ
ಶೇ.100ರಷ್ಟು ಭಾವಚಿತ್ರ ಇರುವ ಮತದಾರರ ಪಟ್ಟಿಯನ್ನು ಪ್ರಸ್ತುತ ಚುನಾವಣೆಗೆ ಬಳಸಲಾಗುತ್ತದೆ. ಪ್ರಸ್ತುತ ಚುನಾವಣೆಯಲ್ಲಿ ಖಾಲಿ ವೋಟರ್ ಸ್ಲಿಪ್ ಗಳನ್ನು ಮಸ್ಟರಿಂಗ್ ದಿನಾಂಕದಂದು ವಿತರಿಸಲಾಗುತ್ತದೆ.
ಭಾರತದ ಚುನಾವಣಾ ಆಯೋಗದ ಆದೇಶದ ಪ್ರಕಾರ 1) ಪಾಸ್ಪೋರ್ಟ್, 2) ಚಾಲನಾ ಪರವಾನಗಿ, 3) ಕೇಂದ್ರ/ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಪಿಎಸ್ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ತಮ್ಮ ಸಿಬ್ಬಂದಿಗೆ ನೀಡಿರುವ ಫೋಟೋ ಗುರುತಿನ ಚೀಟಿ, 4) ಬ್ಯಾಂಕ್ / ಪೋಸ್ಟ್ ಆಫೀಸ್ ಫೋಟೋವುಳ್ಳ ಪಾಸ್ ಬುಕ್, 5) PAN ಹೊಂದಿರುವ ಕಾರ್ಡ್, 6) ಎನ್ಪಿಆರ್ ಅಡಿ ಅರ್ಜಿ ನೀಡಿರುವ ಸ್ಮಾರ್ಟ್ ಕಾರ್ಡ್, 7) ಎಂನರೇಗಾ ಜಾಬ್ ಕಾರ್ಡ್, 8) ಕಾರ್ಮಿಕರ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, 9) ಫೋಟೋವುಳ್ಳ ಪಿಂಚಣಿ ದಾಖಲೆ, 10) ಚುನಾವಣಾ ಆಯೋಗದ ವತಿಯಿಂದ ನೀಡುವ ದೃಢೀಕೃತ ಫೋಟೋ ವೋಟರ್ ಸ್ಲಿಪ್ಸ್, 11) ಆಧಾರ್ ಕಾರ್ಡ್ ಇವುಗಳಲ್ಲಿ ಯಾವುದಾದರೂ ಗುರುತಿನ ಚೀಟಿ ಬಳಸಿ ಮತದಾನ ಮಾಡಬಹುದು ಎಂದು ತಿಳಿಸಿದರು.
ಅಂದಹಾಗೆ ಜಿಲ್ಲಾಧಿಕಾರಿಗಳು ಕರೆದಿದ್ದ ಸುದ್ದಿಗೋಷ್ಠಿಯ ಪ್ರಮುಖಾಂಶಗಳು ಇಂತಿದೆ.
ಅಂಧರಿಗಾಗಿ ಬ್ರೈಲ್ ಲಿಪಿಯ ಸೌಲಭ್ಯ
ಪ್ರತಿಯೊಂದು ಮತಗಟ್ಟೆಗೂ ಕುಡಿಯುವ ನೀರು, ಪ್ರತ್ಯೇಕ ಶೌಚಾಲಯ, ವಿದ್ಯುತ್, ಮತದಾನಕ್ಕೆ ಅಗತ್ಯ ಪೀಠೋಪಕರಣಗಳನ್ನು ಒದಗಿಸಲಾಗುತ್ತಿದೆ. ಪ್ರತಿಯೊಂದೂ ವಿಧಾನಸಭಾ ಕ್ಷೇತ್ರದಲ್ಲಿ ಅಂಗವಿಕಲರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಮತಗಟ್ಟೆಯನ್ನು ಮಾದರಿ ಮತಗಟ್ಟೆಯನ್ನಾಗಿ ಗುರುತಿಸಲಾಗಿದೆ. ಸದರಿ ಮತಗಟ್ಟೆಯನ್ನು ವಿಶೇಷವಾಗಿ ನೀಲಿ ಬಣ್ಣದಿಂದ ಸಜ್ಜುಗೊಳಿಸಲಾಗುವುದು. ಒಟ್ಟು 12913 ವಿಕಲಚೇತರರನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಲಾಗಿದೆ. ಅಂಧರಿಗಾಗಿ ಬ್ರೈಲ್ ಲಿಪಿಯ ಸೌಲಭ್ಯವನ್ನು ಒದಗಿಸಲಾಗುವುದು. ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ ಮತ್ತು ಕ್ಯಾಂಪ್ ಸೌಲಭ್ಯ ಕಲ್ಪಿಸಲಾಗುವುದು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸ್ಪರ್ಧಿಸುವ ಕ್ಷೇತ್ರ ಅಂತಿಮ
ಪ್ರಥಮ ಚಿಕಿತ್ಸಾ ಸೌಲಭ್ಯ
ಕುಡಿಯುವ ನೀರಿನ ವ್ಯವಸ್ಥೆ ಮತ್ತು ಪ್ರಥಮ ಚಿಕಿತ್ಸಾ ಸೌಲಭ್ಯ ಸಹ ಕಲ್ಪಿಸಲಾಗುವುದು. ಮತಗಟ್ಟೆಗಳ ಪ್ರವೇಶಕ್ಕೆ ಆದ್ಯತೆ ನೀಡಲಾಗುವುದು. ವಾಹನ ನಿಲುಗಡೆಗೆ ವಿಶೇಷ ಸ್ಥಳಾವಕಾಶ ಕಲ್ಪಿಸಲಾಗುವುದು. ಮಾದರಿ ಮತಗಟ್ಟೆಗಳಿಗೆ ವಿಕೇತನ ಅಧಿಕಾರಿಗಳನ್ನು ಮತಗಟ್ಟೆ ಅಧಿಕಾರಿಗಳನ್ನಾಗಿ ನೇಮಿಸಲು ಪ್ರಾಶಸ್ತ್ಯ ನೀಡಲಾಗುವದು ಎಂದು ಜಿಲ್ಲಾಧಿಕಾರಿ ಹರೀಶ್ ಕುಮಾರ್ ವಿವರಿಸಿದರು.
ಮೈಸೂರಿನಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೂ ನಮ್ಮ ಬೆಂಬಲವಿದೆ:ಜಿಟಿಡಿ
ಸಖಿ' ಗುಲಾಬಿ ಮಾದರಿ ಮತಗಟ್ಟೆಗಳು
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 2 ರಂತೆ ಸಖಿ' ಗುಲಾಬಿ ಮಾದರಿ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 12 ಮತಗಟ್ಟೆಗಳನ್ನು ಆಯ್ಕೆ ಮಾಡಲಾಗಿದೆ ಎಂದ ಹರೀಶ್ ಕುಮಾರ್, ಈ ಮತಗಟ್ಟೆಗಳಿಗೆ ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸಲು ಉದದೇಶಿಸಲಾಗಿದ್ದು, ಸದರಿ ಮತಗಟ್ಟೆಗಳನ್ನು ಸಂಪೂರ್ಣವಾಗಿ ಗುಲಾಬಿ ಬಣ್ಣದಿಂದ ಸಜ್ಜುಗೊಳಿಸಲಾಗುವುದು ಎಂದರು.
ಈ ಬಾರಿ ಹೆಚ್ಚುವರಿ ಸಿಬ್ಬಂದಿ ನೇಮಕ
ಪ್ರಸ್ತುತ ಚುನಾವಣೆಯಲ್ಲಿ ವಿವಿ ಪ್ಯಾಟುಗಳನ್ನು ಬಳಸಲಾಗುತ್ತಿರುವುದರಿಂದ ಓರ್ವ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕಮಾಡಲಾಗುತ್ತಿದೆ. ಅದರಂತೆ ಪ್ರತಿ ಮತಗಟ್ಟೆಗೆ ತಲಾ ನಾಲ್ಕು ಮತಗಟ್ಟೆ ಸಿಬ್ಬಂದಿಗಳ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಶೇ. 30 ರಷ್ಟು ಹೆಚ್ಚುವರಿ ಸಿಬ್ಬಂದಿಗಳು ಒಳಗೊಂಡಂತೆ ಒಟ್ಟು 7,472ಅಧಿಕಾರಿಗಳನ್ನು ಲ್ಯಾಂಡಮೈಸೇಶನ್ ಮೂಲಕ ನೇಮಕ ಮಾಡಲಾಗುವುದು.