ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿಯುವ ಸಂಪ್ರದಾಯ ಮುಂದುವರಿಕೆ
ಕಾರವಾರ, ಆಗಸ್ಟ್ 13: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಸಂಚಾರ ಎನ್ನುವುದು ಮಳೆಗಾಲದಲ್ಲಿ ವಾಹನ ಸವಾರರಿಗೆ ಕೈಯಲ್ಲಿ ಜೀವ ಹಿಡಿದುಕೊಂಡು ಪ್ರಯಾಣಿಸಿದಂತೆ. ಯಾವಾಗ ತಮ್ಮ ಮೇಲೆ ಗುಡ್ಡ ಕುಸಿಯುತ್ತದೆಯೋ ಎಂಬ ಭಯದಿಂದಲೇ ಸಂಚರಿಸುವ ಪರಿಸ್ಥಿತಿ ಕಳೆದ ಆರೂವರೆ ವರ್ಷಗಳಿಂದಲೂ ಮುಂದುವರಿದಿದೆ.
Recommended Video
ರಾಷ್ಟ್ರೀಯ ಹೆದ್ದಾರಿ-66ರ ಅಗಲೀಕರಣ ಕಾರ್ಯವನ್ನು ಐ.ಆರ್.ಬಿ ಕಂಪನಿ ಮಾಡಿದ್ದು, ಈಗಾಗಲೇ ಶೇ.75ಕ್ಕೂ ಅಧಿಕ ಕಾಮಗಾರಿ ಮುಗಿದಿದೆ ಎಂದು ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಕಾಮಗಾರಿ ಪ್ರಾರಂಭದ ಹಂತದಿಂದಲೂ ಅಗಲೀಕರಣಕ್ಕಾಗಿ ಅರ್ಧ ತೆಗೆದ ಗುಡ್ಡಗಳ ಕುಸಿತದಿಂದ ಹೆದ್ದಾರಿಯಲ್ಲಿ ಸಾಕಷ್ಟು ಸಮಸ್ಯೆ ಸೃಷ್ಟಿ ಮಾಡಿತ್ತು. ಪ್ರತಿ ವರ್ಷ ಸಮಸ್ಯೆ ಆದಾಗ ಮುಂದಿನ ವರ್ಷದಿಂದ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವ ಭರವಸೆಯನ್ನು ಐ.ಆರ್.ಬಿ ಹಾಗೂ ಜಿಲ್ಲಾಡಳಿತ ನೀಡುತ್ತಾ ಮುಂದೆ ಬಂದಿದೆ.
ತೆರವು ಮಾಡಿರುವ ಗುಡ್ಡ ಸಹ ಕುಸಿದಿದೆ
ಸದ್ಯ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಹೆದ್ದಾರಿಯ ಕೆಲವೆಡೆ ಗುಡ್ಡ ಕುಸಿತ ಪ್ರಾರಂಭವಾಗಿದೆ. ಎರಡು ದಿನದ ಹಿಂದೆ ಕುಮಟಾ ತಾಲೂಕಿನ ತಂಡ್ರಕುಳಿ ಬಳಿ ರಸ್ತೆಯ ಮೇಲೆ ಗುಡ್ಡ ಕುಸಿದು ಅಪಾರ ಪ್ರಮಾಣದಲ್ಲಿ ಮಣ್ಣು ಬಿದ್ದಿತ್ತು. ಇದಲ್ಲದೇ ಮಿರ್ಜಾನ್ ಗ್ರಾಮದಿಂದ ಶಿರಸಿ ಮಾರ್ಗವಾಗಿ ತೆರಳುವಾಗ ತೆರವು ಮಾಡಿರುವ ಗುಡ್ಡ ಸಹ ಕುಸಿದು ಪರ್ಯಾಯ ರಸ್ತೆ ಮಾರ್ಗವನ್ನು ಮಾಡಲಾಗಿದೆ. ಇನ್ನು ಕಾರವಾರ ತಾಲೂಕಿನ ಅರಗ ಗ್ರಾಮದಿಂದ ಬಿಣಗಾ ಗ್ರಾಮದವರೆಗೆ ಬರುವಾಗ, ಹೊನ್ನಾವರ ಹಾಗೂ ಕುಮಟಾ ತಾಲೂಕಿನ ಹಲವೆಡೆ ಗುಡ್ಡ ಯಾವಾಗ ರಸ್ತೆಯ ಮೇಲೆ ಕುಸಿಯುತ್ತದೆಯೋ ಅನ್ನುವ ಆತಂಕದಲ್ಲಿಯೇ ವಾಹನ ಸವಾರರು ಓಡಾಡಬೇಕಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಲ್ಲದ ಮಳೆ; ತಗ್ಗು ಪ್ರದೇಶಗಳಿಗೆ ಹರಿದ ನೀರು
ಅಂಕೋಲಾ ಹಾಗೂ ಕುಮಟಾ ತಾಲ್ಲೂಕಿನಲ್ಲಿ ಟೋಲ್ ಸಂಗ್ರಹ
ಈ ಹಿಂದೆ 2017 ರಲ್ಲಿ ತಂಡ್ರಕುಳಿ ಗ್ರಾಮದಲ್ಲಿ ಅವೈಜ್ಞಾನಿಕ ರಸ್ತೆ ಅಗಲೀಕರಣದಿಂದ ಗುಡ್ಡ ಕುಸಿತವಾಗಿ ಮೂವರು ಮೃತಪಟ್ಟಿದ್ದರು. ಆದರೂ ಆ ಭಾಗದಲ್ಲಿ ಮುಂದೆ ಸಮಸ್ಯೆ ಆಗದಂತೆ ಸರಿಪಡಿಸುವ ಬದಲು ಕಾಮಗಾರಿ ಮುಂದುವರೆಸಿದ ಪರಿಣಾಮ ಎರಡು ದಿನದ ಹಿಂದೆ ಮತ್ತೆ ಗುಡ್ಡ ಕುಸಿದಿದೆ. ಪ್ರತಿ ವರ್ಷ ಹೀಗೆ ರಸ್ತೆಯಲ್ಲಿ ಗುಡ್ಡ ಕುಸಿಯುತ್ತಿದ್ದರೆ, ಯಾವಾಗ ಇದರಿಂದ ಮುಕ್ತಿ. ಹೆದರಿಕೊಂಡೇ ಇನ್ನು ಎಷ್ಟು ವರ್ಷ ಸಾಗಬೇಕು ಅನ್ನುವುದು ವಾಹನ ಸವಾರರ ದೂರು.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಸದ್ಯ ಅಂಕೋಲಾ ಹಾಗೂ ಕುಮಟಾ ತಾಲ್ಲೂಕಿನಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ.
ಕಾಮಗಾರಿ ಮುಗಿಯದಿದ್ದರೂ ದುಬಾರಿ ಟೋಲ್
ಕಾರವಾರದಿಂದ ಅಂಕೋಲಾದವರೆಗೆ ಇನ್ನು ಸಾಕಷ್ಟು ಕಾಮಗಾರಿ ಉಳಿದಿದ್ದರೂ ವಾಹನ ಸವಾರರಿಂದ ದುಬಾರಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಅಲ್ಲದೇ ಕುಮಟಾದಿಂದ ಅಂಕೋಲಾದ ನಡುವೆಯೂ ಇನ್ನೂ ಸಾಕಷ್ಟು ಕಾಮಗಾರಿ ಉಳಿದಿದ್ದು, ಸರಿಯಾದ ಕಾಮಗಾರಿ ಮುಗಿಯದಿದ್ದರೂ ಅನಾವಶ್ಯಕವಾಗಿ ಟೋಲ್ ಕಟ್ಟಿ ಓಡಾಡಬೇಕಾಗಿದೆ.
ವರುಣನ ಅಬ್ಬರಕ್ಕೆ ಕಡಲ ಕೊರೆತಕ್ಕೊಳಗಾದ ಠಾಗೋರ್ ತೀರ
ಇನ್ನು ಐ.ಆರ್.ಬಿ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಹಲವು ಬಾರಿ ಸ್ಥಳೀಯರು ಪ್ರತಿಭಟಿಸಿದರು ಯಾರಿಗೂ ಕ್ಯಾರೆ ಎನ್ನದೇ, ಆನೆ ನಡೆದದ್ದೆ ದಾರಿ ಎನ್ನುವಂತೆ ಸಾಗುತ್ತಿದೆ. ಸದ್ಯ ಹೆದ್ದಾರಿಯಲ್ಲಿ ಅಪಾಯದ ಪರಿಸ್ಥಿತಿ ಕೆಲವೆಡೆ ಇದ್ದರೂ, ಯಾರೂ ಈ ಬಗ್ಗೆ ಪ್ರಶ್ನಿಸದಂತಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
910 ದಿನಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ
ಜಿಲ್ಲೆಯಲ್ಲಿನ ಗೋವಾ ಗಡಿಯಿಂದ ಭಟ್ಕಳದ ಬೆಳ್ಕೆ ಗಡಿಯವರೆಗಿನ ದ್ವಿಪಥವನ್ನು ಚತುಷ್ಪಥಗೊಳಿಸುವ ಕಾಮಗಾರಿಯು ಕಳೆದ ಆರೂವರೆ ವರ್ಷದಿಂದ ನಡೆಯುತ್ತಿದೆ.
2014ರ ಮಾರ್ಚ್ 3 ರಂದು ಆರಂಭವಾಗಿದ್ದ ಈ ಕಾಮಗಾರಿ 910 (ಮೂರೂವರೆ ವರ್ಷ) ದಿನಗಳಲ್ಲಿ ಮುಗಿಯಬೇಕಿತ್ತು. ಆದರೆ, ಕಾಮಗಾರಿ ಆರಂಭದಿಂದಲೇ ಮಳೆಗಾಲ, ಭೂಸ್ವಾಧೀನ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿದ ಐ.ಆರ್.ಬಿ ಕಂಪನಿ, ಅದಾಗಲೇ ಹೆಚ್ಚುವರಿಯಾಗಿ ಮೂರು ವರ್ಷ ಕಳೆದಿದೆ. ಕುಂಟುತ್ತ ಸಾಗಿರುವ ಕಾಮಗಾರಿಯಿಂದ ಈವರೆಗೆ ರಸ್ತೆ ಅಪಘಾತ, ಗುಡ್ಡ ಕುಸಿತ, ಬಂಡೆಗಲ್ಲುಗಳ ಉರುಳುವಿಕೆ ಸೇರಿದಂತೆ ಅನೇಕ ಘಟನೆಗಳು ಸಂಭವಿಸಿ, ಸಾವು- ನೋವುಗಳು ಉಂಟಾಗಿರುವುದು ಸಾರ್ವಜನಿಕರಲ್ಲಿ ಕಂಪನಿಯ ವಿರುದ್ಧ ಆಕ್ರೋಶ ಹುಟ್ಟಿಸಿದೆ.