ಉತ್ತರ ಕನ್ನಡ: ವಾಟ್ಸಾಪ್ ಬಳಸಿ ಪ್ರಚೋದನಾಕಾರಿ ಸಂದೇಶ, 28 ಕೇಸ್
ಕಾರವಾರ, ಡಿಸೆಂಬರ್ 14: ವಾಟ್ಸಾಪ್ ಮತ್ತು ಫೇಸ್ಬುಕ್ಗಳಲ್ಲಿ ಪ್ರಚೋದನಾಕಾರಿ ಅಪ್ಡೇಟ್ಸ್ ಪೋಸ್ಟ್ ಮಾಡಿದವರ ವಿರುದ್ಧ ತಾಲೂಕು ದಂಡಾಧಿಕಾರಿಗಳು ಹಾಗೂ ಉತ್ತರಕನ್ನಡ ಪೊಲೀಸ್ ಇಲಾಖೆಯಿಂದ ಜಿಲ್ಲಾದ್ಯಂತ 28 ಪ್ರಕರಣಗಳನ್ನು ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆ್ಯಪ್, ಫೇಸ್ಬುಕ್, ಟ್ವಿಟ್ಟರ್ಗಳಲ್ಲಿ ಯಾವುದೇ ಪ್ರಚೋದನಾಕಾರಿ ಮಾಹಿತಿ ರವಾನೆ ಮಾಡದಂತೆ ಇತ್ತೀಚೆಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.
ಆದರೂ, ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಕೆಲವರು ವಾಟ್ಸಾಪ್, ಟ್ವಿಟ್ಟರ್ ಹಾಗೂ ಫೇಸ್ಬುಕ್ಗಳಲ್ಲಿ ಪ್ರಚೋದನಾಕಾರಿ ಅಪ್ಡೇಟ್ಸ್ ಹಾಕಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳಿಂದ 13 ಹಾಗೂ ಪೊಲೀಸ್ ಇಲಾಖೆಯಿಂದ 15 ಪ್ರಕರಣಗಳನ್ನು ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಕಾರವಾರ ತಾಲೂಕು ದಂಡಾಧಿಕಾರಿಗಳು 7 ಪ್ರಕರಣಗಳನ್ನು ದಾಖಲಿಸಿದರೆ ಹೊನ್ನಾವರ ತಾಲೂಕು ದಂಡಾಧಿಕಾರಿ 6 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇದಲ್ಲದೆ, ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕವಾಗಿ 15 ಪ್ರಕರಣಗಳನ್ನು ಈವರೆಗೆ ದಾಖಲಿಸಿಕೊಳ್ಳಲಾಗಿದೆ.
ಅಲ್ಲದೆ, ಫೇಸ್ಬುಕ್ ಪೋಸ್ಟ್ ಅಥವಾ ಕಾಮೆಂಟ್ ಮಾಡಿದವರ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತಿದ್ದು, ಪೊಲೀಸ್ ಇಲಾಖೆ ಅಂತಹವರ ಮೇಲೆ ತೀವ್ರ ನಿಗಾ ಇರಿಸಿದೆ.