ಉತ್ತರ ಕನ್ನಡ; ಹೊಸ ವರ್ಷದ ವಿಶೇಷ ಆಚರಣೆಗೆ ನಿಷೇಧ
ಕಾರವಾರ, ಡಿಸೆಂಬರ್ 23: ಹೊಸ ಸ್ವರೂಪದ ಕೋವಿಡ್ ಸೋಂಕು ಪತ್ತೆಯಾಗಿರುವ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಹೊಸ ವರ್ಷದ ಸ್ವಾಗತಕ್ಕೆ ಈ ಬಾರಿ ಸಾಮಾನ್ಯ ಜನಜೀವನ ಹೊರತುಪಡಿಸಿ ವಿಶೇಷ ಆಚರಣೆಗೆ ಜಿಲ್ಲೆಯಲ್ಲಿ ಎಲ್ಲೂ ಅವಕಾಶ ನೀಡಿಲ್ಲ.
ಹೊಸ ಸ್ವರೂಪದ ಕೋವಿಡ್ ಸೋಂಕು ಅತಿ ವೇಗವಾಗಿ ಹರಡುತ್ತದೆ ಎನ್ನುವ ವರದಿಯು ಆತಂಕ ಸೃಷ್ಟಿ ಮಾಡಿದೆ. ಇನ್ನು ಬ್ರಿಟನ್ನಿಂದ ಭಾರತಕ್ಕೆ ಹಲವಾರು ಜನರು ಬಂದಿದ್ದಾರೆ. ಕರ್ನಾಟಕಕ್ಕೂ ಹಲವರು ಬಂದಿಳಿದಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಯಾವುದೇ ರೀತಿಯಲ್ಲೂ ಈ ಸೋಂಕು ಹರಡದಂತೆ ಜಿಲ್ಲಾಡಳಿತ ಮುಂಜಾಗ್ರತೆ ಕೈಗೊಳ್ಳುತ್ತಿದೆ.
ಜುಲೈ 1ರ ಬಳಿಕ ಮೊದಲ ಬಾರಿ 20 ಸಾವಿರಕ್ಕಿಂತ ಕಡಿಮೆ ಕೋವಿಡ್ ಸೋಂಕಿತರು ಪತ್ತೆ
"ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಹಲವರು ಗುಂಪು ಗುಂಪಾಗಿ ಸೇರುವ ಸಾಧ್ಯತೆ ಇದೆ. ಇದರಿಂದ ಸೋಂಕು ಮತ್ತೆ ಹರಡಬಹುದು. ಈ ಹಿನ್ನಲೆಯಲ್ಲಿ ಮುಂಜಾಗ್ರತೆ ವಹಿಸುವುದು ಅನಿವಾರ್ಯ. ಸಾಮಾನ್ಯ ಜನಜೀವನಕ್ಕೆ ನಾವು ಎಲ್ಲೂ ತೊಂದರೆ ಮಾಡುವುದಿಲ್ಲ. ಬದಲಾಗಿ ವಿಶೇಷ ಪಾರ್ಟಿ, ಇನ್ನಿತರ ಆಚರಣೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ" ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶ ಕುಮಾರ್ ಹೇಳಿದ್ದಾರೆ.
ಹೊಸ ವರ್ಷ, ಕ್ರಿಸ್ಮಸ್ ಆಚರಣೆಗೆ ನಿರ್ಬಂಧ ವಿಧಿಸಿರುವ ರಾಜ್ಯಗಳ ಪಟ್ಟಿ
ಐರೋಪ್ಯ ರಾಷ್ಟ್ರಗಳು ಮಾತ್ರವಲ್ಲ ಜಿಲ್ಲೆಗೆ ಬರುವ ಎಲ್ಲಾ ವಿದೇಶಿಯರನ್ನು ಪರೀಕ್ಷಿಸಲಾಗುವುದು. ವಿದೇಶದಿಂದ ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣ ಜಿಲ್ಲಾಡಳಿತಕ್ಕೆ ಅವರ ಮಾಹಿತಿ ಲಭ್ಯವಾಗಲಿದ್ದು, ಜಿಲ್ಲೆಗೆ ಆಗಮಿಸುತ್ತಿದ್ದಂತೆ ಅವರನ್ನು ಪರೀಕ್ಷೆಗೊಳಪಡಿಸಲು ತೀರ್ಮಾನಿಸಲಾಗಿದೆ.
ಹೊಸ ವೈರಾಣು ಬಗ್ಗೆ ಆತಂಕ ಬೇಕಿಲ್ಲ: ಸಚಿವ ಸುಧಾಕರ್ ಅಭಯ
ವಿದೇಶದಿಂದ ಬಂದವರಲ್ಲಿ ಸೋಂಕಿನ ಲಕ್ಷಣ ಕಂಡು ಬಂದರೆ ಅಂಥವರ ಗಂಟಲು ದ್ರವದ ಮಾದರಿಯನ್ನ ಬೆಂಗಳೂರಿನ ನ್ಯಾಷನಲ್ ಇನ್ಸ್ಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿ ಹೊಸ ಸ್ವರೂಪದ ಕೋವಿಡ್ ಲಕ್ಷಣ ಇದೆಯೇ? ಎಂದು ಮಾಹಿತಿ ಪಡೆಯಲಾಗುತ್ತದೆ.
ವರದಿ ಬರುವ ತನಕ ಅವರನ್ನು ಸಾಂಸ್ಥಿಕ ಕ್ವಾರಂಟೈನ್ ಅಥವಾ ಆಸ್ಪತ್ರೆಗಳಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಇಡುತ್ತೇವೆ. ಒಂದೊಮ್ಮೆ ಹೊಸ ಸ್ವರೂಪದ ಕೋವಿಡ್ ಲಕ್ಷಣ ದೃಢಪಟ್ಟರೆ ಚಿಕಿತ್ಸೆ ಕೊಡುತ್ತೇವೆ ಎಂದು ಜಿಲ್ಲಾಡಳಿತ ಹೇಳಿದೆ.
ಇದುವರೆಗೆ ಇಂಗ್ಲೆಂಡ್ನಿಂದ ರಾಜ್ಯಕ್ಕೆ ಬಂದಿರುವ ವಿಮಾನದಲ್ಲಿ ಉತ್ತರ ಕನ್ನಡ ಜಿಲ್ಲೆ ಮೂಲದವರು ಯಾರೂ ಇಲ್ಲ ಎಂಬ ಮಾಹಿತಿ ದೊರೆತಿದೆ. ಮುಂಜಾಗ್ರತೆ ವಹಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಜನರು ಜಾಗೃತಿ ವಹಿಸುವುದು ಅಗತ್ಯವಿದೆ ಎಂದು ಜಿಲ್ಲಾಡಳಿತ ಹೇಳಿದೆ.