ಮರೆಯಾಗುತ್ತಿದೆಯೇ ದೇಶಪಾಂಡೆ ಖದರ್; ಮಾತು ಕೇಳುತ್ತಿಲ್ಲ ಅಧಿಕಾರಿಗಳು!
ಕಾರವಾರ, ಫೆಬ್ರವರಿ 7: ಮಾಜಿ ಸಚಿವ, ಹಳಿಯಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್. ವಿ. ದೇಶಪಾಂಡೆ ತಮ್ಮ ಕ್ಷೇತ್ರದಲ್ಲಿ ಹಿಡಿತ ಕಳೆದುಕೊಳ್ಳುತ್ತಿದ್ದಾರೆಯೇ?. ಹೀಗೊಂದು ಸಂಶಯ ಹಲವರಿಗೆ ಈವರೆಗೆ ಕಾಡುತ್ತಿತ್ತು. ಇದಕ್ಕೆ ಹಳಿಯಾಳದಲ್ಲಿ ಇತ್ತೀಚಿಗೆ ನಡೆದ ಸಭೆಯೊಂದು ಇಂಬು ನೀಡಿದ್ದು, ಸ್ವತಃ ದೇಶಪಾಂಡೆ ಅವರೇ "ಕೆಲ ಅಧಿಕಾರಿಗಳು ನನ್ನ ಮಾತು ಕೇಳುತ್ತಿಲ್ಲ" ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಹಳಿಯಾಳ ಕ್ಷೇತ್ರದಿಂದ 8 ಬಾರಿ ಶಾಸಕರಾಗಿ ಆಯ್ಕೆಯಾಗಿ ಹಲವು ವರ್ಷಗಳ ಕಾಲ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದೇಶಪಾಂಡೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತಲೂ ಮುಂಚೆ ಹಾಗೂ ಶಿವರಾಮ ಹೆಬ್ಬಾರ್ ಜಿಲ್ಲಾ ಉಸ್ತುವಾರಿಯಾಗುವ ಮೊದಲಿನವರೆಗೂ ಜಿಲ್ಲೆ ಹಾಗೂ ತಮ್ಮ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಇಟ್ಟುಕೊಂಡಿದ್ದರು.
ಯಲ್ಲಾಪುರ ಕ್ಷೇತ್ರದಲ್ಲಿ ಪ್ರಶಾಂತ್ ದೇಶಪಾಂಡೆ ಪರೇಡ್!
ಸಚಿವರಾಗಿದ್ದ ಸಂದರ್ಭಲ್ಲಿ ಅವರು ತೆಗೆದುಕೊಳ್ಳುತ್ತಿದ್ದ ಸಭೆಗಳು ಅಧಿಕಾರಿಗಳಿಗೆ ನಡುಕ ಹುಟ್ಟಿಸುತ್ತಿತ್ತು. ಈ ಹಿನ್ನಲೆಯಲ್ಲಿ ಸಭೆಗೆ ಬರುವ ಅಧಿಕಾರಿಗಳು ಎಲ್ಲಾ ಮಾಹಿತಿ, ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡು ಸಭೆಗೆ ಹಾಜರಾಗುತ್ತಿದ್ದರು.
ಯಲ್ಲಾಪುರ ಉಪ ಚುನಾವಣೆ: ಶಿವರಾಂ ಹೆಬ್ಬಾರ್ ಗೆಲುವು
ಆದರೆ, ಶುಕ್ರವಾರ ಹಳಿಯಾಳ ತಹಶೀಲ್ದಾರ್ ಕಚೇರಿಯಲ್ಲಿ ದೇಶಪಾಂಡೆ ಸಭೆ ಕರೆದಿದ್ದರೂ ಕೆಲ ಅಧಿಕಾರಿಗಳು ಚಕ್ಕರ್ ಹಾಕಿದ್ದಾರೆ. ಅವರು ಸಚಿವರಾಗಿದ್ದ ಸಮಯದಲ್ಲಿ ಅಧಿಕಾರಿಗಳ ಸಭೆ ಹಮ್ಮಿಕೊಂಡಿದ್ದರೆ ಸಭೆಯ ಆರಂಭಕ್ಕೂ ಗಂಟೆಗೆ ಮುನ್ನವೇ ಅಧಿಕಾರಿಗಳು ಅವರ ಬರುವಿಕೆಗಾಗಿ ಕಾಯುತ್ತಿದ್ದರು.
ಹಳಿಯಾಳ ಕ್ಷೇತ್ರದಲ್ಲಿ ಮತ್ತೆ ಅಧಿಕಾರ ಪಡೆದ ಆರ್.ವಿ.ದೇಶಪಾಂಡೆ
ಉಸ್ತುವಾರಿ ಸಚಿವರು ಬದಲು
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಬದಲಾಗಿದ್ದಾರೆ. ದೇಶಪಾಂಡೆ ತಮ್ಮ ಗತ್ತು-ಗೈರತ್ತುಗಳನ್ನು ಜಿಲ್ಲೆಯಲ್ಲಿ, ಅದರಲ್ಲೂ ತಮ್ಮ ಕ್ಷೇತ್ರದಲ್ಲೇ ಕಳೆದುಕೊಳ್ಳಲಾರಂಭಿಸಿದ್ದಾರೆ. ಇದು ರಾಜಕೀಯವಾಗಿಯೂ ಅವರಿಗೆ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. ಮುಂಬರುವ ಚುನಾವಣೆಯಲ್ಲಿ ಕೂಡ ಇದು ವ್ಯತಿರಿಕ್ತ ಪರಿಣಾಮ ಬೀರಿದರೆ ಜಿಲ್ಲೆ ಕಾಂಗ್ರೆಸ್ ಮುಕ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಅಸಹಾಕಾರ ತೋರುತ್ತಿದ್ದಾರೆ
ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ವ್ಯಕ್ತಪಡಿಸಿರುವ ದೇಶಪಾಂಡೆ, "ಆಳುವ ಸರಕಾರಗಳಿಗೆ ಕಾರ್ಯಾಂಗದ ಮೇಲೆ ಸೂಕ್ತ ಮತ್ತು ಸಮಯೋಚಿತ ನಿಯಂತ್ರಣ ಇಲ್ಲದೇ ಇರುವುದರಿಂದ ಶಾಸಕನಾಗಿರುವ ನನಗೂ ಕೂಡ ಕೆಲ ಅಧಿಕಾರಿಗಳು ಅಸಹಕಾರ ತೋರಿಸುತ್ತಿದ್ದಾರೆ. ನನ್ನೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಪ್ರಸ್ತುತ ಆಡಳಿತದಲ್ಲಿ ಲಂಗು- ಲಗಾಮು ಇಲ್ಲದ ಸ್ಥಿತಿ ನಿರ್ಮಾಣ ಆಗಿದೆ" ಎಂದು ಹೇಳಿದ್ದಾರೆ.
ಅಸಹನೆ ಮೂಡಿಸುತ್ತಿದೆ
ಆರ್. ವಿ. ದೇಶಪಾಂಡೆ ಅವರು, "ಬಹುತೇಕ ಅಧಿಕಾರಿಗಳು ನಾವು ಯಾರಿಗೂ ಉತ್ತರದಾಯಿಗಳಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇಂತಹ ಸ್ಥಿತಿ ಹಳಿಯಾಳದಲ್ಲಿ ಮಾತ್ರವಲ್ಲ, ಈವರೆಗಿನ ನನ್ನ ರಾಜಕೀಯ ಸಂಪರ್ಕಕ್ಕೆ ದಕ್ಕಿರುವ ಬಹುತೇಕ ಕಡೆಯೂ ಕಂಡುಬಂದಿದೆ. ಈ ಸ್ಥಿತಿ ಸುಗಮ ಹಾಗೂ ಜನಪರ ಆಡಳಿತ ನಡೆಸುವುದಕ್ಕೆ ತುಂಬಾ ಪ್ರತಿಕೂಲವಾಗಿದೆ ಮತ್ತು ಅಸಹನೆ ಮೂಡಿಸುತ್ತಿದೆ" ಎಂದು ತಿಳಿಸಿದ್ದಾರೆ.
ಕ್ಷೇತ್ರವೊಂದು, ಮೂವರು ನಾಯಕರು
ಜಿಲ್ಲೆಯ ಬೇರೆ ಎಲ್ಲಾ ಕ್ಷೇತ್ರಗಳಿಗೆ ಹೋಲಿಸಿದರೆ ಹಳಿಯಾಳ ಕ್ಷೇತ್ರದ ರಾಜಕೀಯವೇ ವಿಭಿನ್ನ. ಜಿಲ್ಲೆಯ ಉಳಿದ ಐದು ತಾಲೂಕುಗಳಲ್ಲಿ ಬಿಜೆಪಿ ಶಾಸಕರಿದ್ದು, ಸದ್ಯ ಬಿಜೆಪಿ ಸರ್ಕಾರವೇ ಆಡಳಿತದಲ್ಲಿರುವುದರಿಂದ ಶಾಸಕರ ಮಾತೇ ಅಂತಿಮವಾಗಿದೆ. ಆದರೆ, ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆರ್. ವಿ. ದೇಶಪಾಂಡೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅಧಿಕಾರಿಗಳು ಒಂದು ಕಡೆ ದೇಶಪಾಂಡೆ ಮಾತು ಕೇಳಬೇಕಾಗಿದೆ. ಇನ್ನೊಂದೆಡೆ ಬಿಜೆಪಿ ಸರ್ಕಾರ ಆಡಳಿತದಲ್ಲಿರುವುದರಿಂದ ಮಾಜಿ ಶಾಸಕ, ಬಿಜೆಪಿ ಮುಖಂಡ ಸುನಿಲ್ ಹೆಗಡೆ ಮಾತನ್ನೂ ಅಧಿಕಾರಿಗಳು ತೆಗೆದು ಹಾಕುವಂತಿಲ್ಲ.
ಅಧಿಕಾರಿಗಳು ಹೈರಾಣ
ವಿಧಾನ ಪರಿಷತ್ ಸದಸ್ಯರಾಗಿ ಕ್ಷೇತ್ರದಿಂದಲೇ ಆಯ್ಕೆಯಾಗಿರುವ ಎಸ್. ಎಲ್. ಘೋಟ್ನೇಕರ್ ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಹಿನ್ನಲೆಯಲ್ಲಿ ತಾವು ಕೂಡ ಹಿಡಿತ ಸಾಧಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಘೋಟ್ನೇಕರ್ ಅವರಿಗೆ ಆತ್ಮೀಯರಾಗಿರುವುದರಿಂದಲೂ ಅಧಿಕಾರಿಗಳು ಇವರ ಮಾತಿಗೂ ತಲೆ ಬಾಗಲೇ ಬೇಕಿದೆ. ಹೀಗಾಗಿ ಕೆಲ ಅಧಿಕಾರಿಗಳು ಈ ಮೂವರ ನಡುವಿನ ಪ್ರತಿಷ್ಠೆಯಿಂದ ಹೈರಾಣಾಗಿದ್ದಾರೆ.