ತ್ಯಾಜ್ಯ ಎಸೆಯುವುದು ತಡೆಯಲು 'ಸರ್ಪಾಸ್ತ್ರ' ಪ್ರಯೋಗ!
ಕಾರವಾರ, ಮಾರ್ಚ್ 01: ಎಲ್ಲೆಂದರಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆಯುವ ಜನರಿಂದ ಕಾರವಾರ ನಗರಸಭೆ ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ಇದನ್ನು ತಡೆಯಲು ವಿನೂತನ ಪ್ರಯೋಗಕ್ಕೆ ಅವರು ಮುಂದಾಗಿದ್ದಾರೆ. ಕಸ ಎಸೆಯುವವರ ವಿರುದ್ಧ 'ಸರ್ಪಾಸ್ತ್ರ' ಪ್ರಯೋಗಿಸಲು ನಿರ್ಧರಿಸಲಾಗಿದೆ.
ಎಲ್ಲೆಂದರಲ್ಲಿ ಕಸ ಹಾಕದಂತೆ ನಗರಸಭೆಯ ಆದೇಶ, ಸೂಚನೆ, ಎಚ್ಚರಿಕೆಗಳಿಗೆ ಹೆದರದ ಜನರು ನಾಗರಹಾವಿನ ಭಯಕ್ಕಾದರೂ ಸರಿಯಾಗಿ ಕಸ ವಿಲೇವಾರಿ ಮಾಡಬಹುದು ಎಂದು ನಗರ ಸಭೆ ನಿರೀಕ್ಷಿಸಿದೆ. ಇದಕ್ಕಾಗಿ ನಾಗರಹಾವಿನ ಚಿತ್ರಗಳುಳ್ಳ ಸೂಚನಾ ಫಲಕಗಳನ್ನು ಸಿದ್ಧಗೊಳಿಸಲಾಗಿದೆ.
ಚಿಕ್ಕಮಗಳೂರು; ಗಿರಿಸ್ವಚ್ಚತಾ ಅಭಿಯಾನ, ರಾಶಿ-ರಾಶಿ ಕಸ ಸಂಗ್ರಹ
'ನಾಗದೇವ'ರ ಬಗ್ಗೆ ಜನರಿಗೆ ಇರುವ ಭಯ ಹಾಗೂ ಭಕ್ತಿಯನ್ನು ಉಪಯೋಗಿಸಿಕೊಂಡು ಕಾರವಾರ ನಗರಸಭೆ ಕಸದ ಸಮಸ್ಯೆ ಬಗೆಹರಿಸಲು ಮುಂದಾಗಿದೆ. 'ತ್ಯಾಜ್ಯ ವಸ್ತುಗಳನ್ನು ಎಸೆಯಬೇಡಿ' 'ಇಲ್ಲಿ ನಾಗರಹಾವು ಇದೆ' ಎಂಬ ವಿಶೇಷ ಫಲಕಗಳನ್ನು ಸಿದ್ಧಪಡಿಸಲಾಗಿದೆ. ತ್ಯಾಜ್ಯ ಎಸೆದರೆ ನಾಗರಾಜನ ಶಾಪಕ್ಕೆ ತುತ್ತಾಗುವ ಭೀತಿಯಿಂದಾದರೂ ಜನರು ತ್ಯಾಜ್ಯವನ್ನು ಪ್ರತಿ ವಾರ್ಡ್ನ ಪ್ರತಿ ಬೀದಿಗೆ ದಿನವೂ ಬರುವ ಕಸ ಸಂಗ್ರಹಣೆ ವಾಹನಗಳಿಗೆ ನೀಡಲಿ ಎಂಬ ಸದುದ್ದೇಶ ಈ ಫಲಕಗಳ ಹಿಂದೆ ಅಡಗಿದೆ.
ಹುಬ್ಬಳ್ಳಿ; ಅವಳಿ ನಗರದಲ್ಲಿ ಕಸ ಸುರಿದರೆ ದಂಡ
ಈ ಫಲಕಗಳನ್ನು ನಗರಸಭಾ ಪ್ರಭಾರ ಪೌರಾಯುಕ್ತ ಆರ್. ಪಿ. ನಾಯ್ಕ ಟ್ವೀಟ್ ಮಾಡಿದ್ದು, "ತ್ಯಾಜ್ಯಗಳನ್ನು ಕಂಡಲ್ಲಿ ಎಸೆಯುವುದನ್ನು ತಡೆಯಲು ಕಾರವಾರ ನಗರಸಭೆಯ ಪ್ರಯತ್ನ" ಎಂದು ಬರೆದುಕೊಂಡಿದ್ದಾರೆ.
ಸಾಂಸ್ಕೃತಿಕ ನಗರಿಯಲ್ಲಿ ಇನ್ನು ಉಗುಳಿದರೆ, ಕಸ ಎಸೆದರೆ ದಂಡ ಖಚಿತ
ನಗರಸಭೆಯ ಈ ಪ್ರಯತ್ನಕ್ಕೆ ಹಾಗೂ ಸಾಮಾಜಿಕ ಕಳಕಳಿಗೆ ಸಾರ್ವಜನಿಕರಿಂದ ಸಾಕಷ್ಟು ಶ್ಲಾಘನೆ ಕೇಳಿ ಬಂದಿದೆ. ಮನುಷ್ಯರ ಮಾತು ಕೇಳದ ಮಾನವರು ಹಾವಿನ ಭಯದಿಂದಲಾದರೂ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡಬಹುದು ಎಂಬ ಅಭಿಪ್ರಾಯ ಜನರಲ್ಲಿದೆ.
ಕೆಲವು ತಮಾಷೆಯ ಪ್ರತಿಕ್ರಿಯೆಗಳು ಸಹ ಜನರಿಂದ ಬಂದಿವೆ. ಇಂಥ ಫಲಕಗಳನ್ನು ಬೀದಿ ಬೀದಿಯಲ್ಲಿ ನಿಲ್ಲಿಸಿದರೆ ಹೊರಗಿನಿಂದ ಬರುವ ಜನ ಕಾರವಾರದಲ್ಲಿ ಮನುಷ್ಯರಿಗಿಂತ ನಾಗರಹಾವಿನ ಸಂಖ್ಯೆಯೇ ಹೆಚ್ಚಾಗಿದೆ. ಬೀದಿಬೀದಿಗಳಲ್ಲಿ ನಾಗರಹಾವು ಇದೆ ಎಂದು ಭಾವಿಸುವ ಸಾಧ್ಯತೆಯೂ ಇದೆ ಎಂಬ ಮಾತು ಕೇಳಿ ಬಂದಿದೆ.
ಮನೆಗಳ ಮುಂದೆ 'ಇಲ್ಲಿ ನಾಯಿ ಇದೆ' ಎಂಬ ಫಲಕ ಕಾಣಸಿಗುತ್ತಿತ್ತು. ಈಗ ಕಂಡ ಕಂಡಲ್ಲಿ ನಾಗರಹಾವು ಇದೆ ಎಂಬ ಬೋರ್ಡ್ ನಿಲ್ಲಿಸಿದರೆ ಹಾವಿಗೂ ಮುಜುಗರವಾಗಿ ಕಾಡಿನ ದಾರಿ ಹಿಡಿಯಬಹುದು. ಹಾವಿನ ಭಯವಾದರೂ ನಗರವನ್ನು ಸ್ವಚ್ಛವಾಗಿಡಲಿದೆಯೇ? ಕಾದು ನೋಡಬೇಕು.
ಮೊದಲ ಪ್ರಯತ್ನವಲ್ಲ; ಕಾರವಾರ ನಗರ ವ್ಯಾಪ್ತಿಯ ಖಾಸಗಿ ಜಾಗದ ಗೋಡೆಗಳಿಗೆ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದನ್ನು ತಪ್ಪಿಸಲೆಂದು ಈ ಹಿಂದೆ ಖಾಸಗಿ ವ್ಯಕ್ತಿಯೊಬ್ಬರು ಗೋಡೆಗಳಿಗೆ ದೇವರ ಚಿತ್ರವಿದ್ದ ಟೈಲ್ಸ್ ಗಳನ್ನು ಅಂಟಿಸಿದ್ದರು.
ಆದರೆ, ಇದು ಅಷ್ಟೇನು ಪರಿಣಾಮ ಬೀರಿರಲಿಲ್ಲ. ಟೈಲ್ಸ್ಗಳ ನಡುವಿನ ಅಂತರದಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ನಂತರ ಕೆಲವರು ಇದರಿಂದ ಬೇಸರಗೊಂಡು ದೇವರ ಚಿತ್ರವಿದ್ದ ಟೈಲ್ಸ್ ಕಿತ್ತುಹಾಕಿದರು.
ಕರಾವಳಿಯ ಜನರ ನಂಬಿಕೆ; ನಾಗದೇವರ ಹುಟ್ಟು ಕರಾವಾಳಿಯಲ್ಲಾಗಿದ್ದು ಎಂಬ ನಂಬಿಕೆ ಇದೆ. ಹೀಗಾಗಿ ದಕ್ಷಿಣ ಕನ್ನಡದಿಂದ ಹಿಡಿದು ಉತ್ತರ ಕನ್ನಡದವರೆಗೆ ಕರಾವಳಿ ಭಾಗದಲ್ಲಿ ನಾಗಾರಾಧನೆ ವಿಶೇಷವಾಗಿ ನಡೆಯುತ್ತದೆ. ಇಲ್ಲಿನ ಜನರಿಗೆ ನಾಗನೆಂದರೆ ಭಯ, ಭಕ್ತಿ ಇತರ ದೇವರುಗಳಿಗೆ ಹೋಲಿಸಿದರೆ ತುಸು ಜಾಸ್ತಿ. ಹೀಗಾಗಿ ಇದನ್ನೇ ನಗರಸಭೆ ಜಾಗೃತಿ ಮೂಡಿಸಲು ಬಳಸಿಕೊಂಡಿದೆ.