ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಪಲ್ಟಿ: ಪತ್ನಿ ಸಾವು
ಅಂಕೋಲಾ,ಜನವರಿ 11: ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಕಾರು ಪಲ್ಟಿಯಾಗಿ ಅವರ ಪತ್ನಿ ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯಗಳಾಗಿದೆ.
ಸೋಮವಾರ ಯಲ್ಲಾಪುರ ತಾಲೂಕಿನ ಗಂಟೆ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಗೋಕರ್ಣಕ್ಕೆ ತೆರಳುವಾಗ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಕಾರು ಪಲ್ಟಿಯಾಗಿದೆ.
ಕಾರಿನಲ್ಲಿದ್ದ ಸಚಿವರು ಸೇರಿ ನಾಲ್ವರಿಗೆ ಗಾಯವಾಗಿದ್ದು, ಸಚಿವರ ಪತ್ನಿ ವಿಜಯಾ ನಾಯಕ್ ಗಂಭೀರವಾಗಿ ಗಾಯಗೊಂಡು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನ ಸಾವನ್ನಪ್ಪಿದ್ದಾರೆ. ಗಾಯಗೊಂಡವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಅಪಘಾತದಲ್ಲಿ ಕೇಂದ್ರ ಸಚಿವರ ಪತ್ನಿ ಸಾವು; ಸಿಎಂ ಯಡಿಯೂರಪ್ಪ ಸಂತಾಪ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಬಿಜೆಪಿ ಪಕ್ಷದ ಮುಖಂಡರು ದೌಡಾಯಿಸಿದ್ದು, ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕು ಸರ್ಕಾರಿ ಆಸ್ಪತ್ರೆಗೆ ಮೂವರನ್ನು ದಾಖಲಿಸಲಾಗಿತ್ತು, ಅದರಲ್ಲಿ ಒಬ್ಬರು ಮೃತಪಟ್ಟಿದ್ದು, ಸಚಿವರನ್ನು ಗೋವಾದ ಬಾಂಬೋಲಿಯಮ್ ಆಸ್ಪತ್ರೆಗೆ ರವಾನಿಸಲಾಗಿದೆ, ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆಪ್ತ ಕಾರ್ಯದರ್ಶಿ ದೀಪಕ್ ರಾಮದಾಸ್ ಕೂಡಾ ಮೃತಪಟ್ಟಿದ್ದಾರೆ.