ಕೇಂದ್ರ ಬಜೆಟ್2021: ಉತ್ತರ ಕನ್ನಡ ಜಿಲ್ಲೆಯ ನಿರೀಕ್ಷೆಗಳೇನು?
ಕಾರವಾರ, ಜನವರಿ 30: ಕೇಂದ್ರ ಸರ್ಕಾರ ಫೆ.1ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಈ ನಡುವೆ ಕೋವಿಡ್ ನಿಂದಾಗಿ ಎಲ್ಲ ಕ್ಷೇತ್ರದ ವ್ಯಾಪಾರ-ವಹಿವಾಟುಗಳಲ್ಲಿ ವ್ಯತ್ಯಯವಾಗಿದೆ.
ಎಲ್ಲ ಕ್ಷೇತ್ರಗಳಂತೆ ಶೈಕ್ಷಣಿಕ ಚಟುವಟಿಕೆಗಳು ಹಿನ್ನಡೆಯಾಗಿರುವ ಈ ವರ್ಷ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಜನರು ಹಲವು ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದು, ಮುಂದೆ ಓದೋಣ ಬನ್ನಿ...
ಫೆಬ್ರವರಿಯಿಂದ ಬದಲಾಗಲಿವೆ ಈ 5 ಪ್ರಮುಖ ನಿಯಮಗಳು
ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗದ ಸ್ಪಷ್ಟನೆಗೆ ಬೇಡಿಕೆ
ಹಲವು ದಶಕಗಳ ಬೇಡಿಕೆಯಾಗಿರುವ ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗದ ಯೋಜನೆ ಸದ್ಯ ಒಂದು ಹಂತಕ್ಕೆ ಬಂದು ತಲುಪಿತ್ತು. ಅಷ್ಟರಲ್ಲೇ ಪರಿಸರದ ಕಾರಣವೆತ್ತಿ ಹಲವರು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಸದ್ಯ ಯೋಜನೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ಹೀಗಾಗಿ ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಒಂದು ಸ್ಪಷ್ಟನೆ ಸಿಗಬೇಕಿದೆ. ಪ್ರತಿ ಬಾರಿಯೂ ಈ ಯೋಜನೆಗೆ ಕೋರ್ಟ್ ಗಳಿಂದ ತಡೆಯಾಜ್ಞೆ ಬರುತ್ತಿದ್ದು, ಈ ಬಗ್ಗೆ ಸರ್ಕಾರ ಜನರ ಅವಶ್ಯಕತೆಗಳ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ನಿರ್ಧಾರ ಕೈಗೊಳ್ಳಬೇಕೆಂಬ ಆಗ್ರಹವೂ ಇದೆ.
ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಬೇಕು
ಕೋವಿಡ್ ಕಾರಣದಿಂದ ಈ ಬಾರಿ ಯಾವುದೇ ಶೈಕ್ಷಣಿಕ ಚಟುವಟಿಕೆಗಳು ಅಷ್ಟೊಂದು ಪರಿಣಾಮಕಾರಿಯಾಗಿ ನಡೆದಿಲ್ಲ. ಹೀಗಾಗಿ ಪಾಲಕರು ಹಾಗೂ ಮಕ್ಕಳು ಕೂಡ ಸಾಂಪ್ರದಾಯಿಕ ಶಿಕ್ಷಣದ ಮೇಲಿನ ಒಲವು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಯುವಕ- ಯುವತಿಯರಿಗೆ ಉದ್ಯೋಗ ದೊರಕಿಸಿಕೊಡುವಂಥ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಈ ಹಿಂದೆ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಅವರು ಪ್ರತಿನಿಧಿಸುವ ಉತ್ತರ ಕನ್ನಡದಲ್ಲೇ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲು ಈ ಬಾರಿ ಬಜೆಟ್ ನಲ್ಲಿ ಘೋಷಿಸಬೇಕು ಎಂಬ ಆಗ್ರಹವಿದೆ.
ವಿಶೇಷ ಲೇಖನ; ಕೇಂದ್ರ ಬಜೆಟ್, ಕೋಲಾರ ಜಿಲ್ಲೆಯ ನಿರೀಕ್ಷೆಗಳು
ಮೀನುಗಾರ ಸಮುದಾಯದಿಂದ ಹೆಚ್ಚಿನ ನಿರೀಕ್ಷೆ
ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿ ಕೋವಿಡ್ ನಿಂದಾಗಿ ಮತ್ಸ್ಯೋದ್ಯಮಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ಈ ಬಾರಿ ಮೀನುಗಾರ ಸಮುದಾಯ ಕೇಂದ್ರ ಸರ್ಕಾರದ ಬಜೆಟ್ ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಮತ್ಸ್ಯೋದ್ಯಮ, ಮೀನುಗಳ ರಫ್ತಿಗೆ, ಮೀನು ಶೈತ್ಯಾಗಾರ, ಮೀನುಗಾರರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಮೀನುಗಾರರು ನಿರೀಕ್ಷಿಸಿದ್ದಾರೆ. ಇನ್ನು, ಬಂದರು-ರೈಲು ಹಾಗೂ ರಸ್ತೆ ಮಾರ್ಗವನ್ನು ಸಂಪರ್ಕಿಸುವ ಸಾಗರಮಾಲಾ ಹಾಗೂ ಭಾರತಮಾಲಾ ಯೋಜನೆಗಳು ಈಗಾಗಲೇ ಘೋಷಣೆಯಾಗಿ ಮೊದಲ ಹಂತದ ಕಾಮಗಾರಿಗಳು ಪ್ರಾರಂಭವಾಗಿದ್ದವು. ಆದರೆ ಸಾಗರಮಾಲಾ ವಿರುದ್ಧ ಮೀನುಗಾರರು ಕೋರ್ಟಿಗೆ ಹೋಗಿದ್ದು, ಭಾರತಮಾಲಾ ಯೋಜನೆ ಶೀಘ್ರವಾಗಿ ಪ್ರಗತಿ ಸಾಧಿಸಬೇಕಿದೆ.
ರಾ.ಹೆ 63ರ ವಿಸ್ತರಣೆ ನಿರೀಕ್ಷೆ
ಪ್ರತಿನಿತ್ಯ ನೂರಾರು ಬೃಹತ್ ಸಾಗಾಣಿಕಾ ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ 63ರ ಅಂಕೋಲಾ-ಹುಬ್ಬಳ್ಳಿ ಮಾರ್ಗ ಕಿರಿದಾಗಿದೆ. ಹೀಗಾಗಿ ಈ ರಸ್ತೆಯನ್ನು ಚತುಷ್ಪಥಗೊಳಿಸಬೇಕೆಂಬ ಆಗ್ರಹ ಕೂಡ ಕೆಲವರದ್ದಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಉಂಟಾಗುವ ಅಪಘಾತ ಪ್ರಕರಣಗಳು ಕಡಿಮೆಯಾಬಹುದು ಎಂಬುದು ಈ ಭಾಗದ ಜನರ ನಿರೀಕ್ಷೆಯಾಗಿದೆ.