ಅವಿಸ್ಮರಣೀಯ 2020: ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಹೊಡೆತ ಕೊಟ್ಟ ಕೊರೊನಾ
ಕಾರವಾರ: 2019ರ ಕಹಿ ಘಟನೆಗಳನ್ನು ಮರೆತು, ಹಲವು ನಿರೀಕ್ಷೆಗಳನ್ನು ಹೊತ್ತು 2020ನ್ನು ವಿಜೃಂಭಣೆಯಿಂದ ಜನತೆ ಸ್ವಾಗತಿಸಿದ್ದರು. ಆದರೆ, ನಿರೀಕ್ಷೆಗೂ ಮೀರಿದ ಘಟನೆಗಳು ಈ ವರ್ಷ ಘಟಿಸಿದ್ದು, ಈ ನೆನಪುಗಳು ಜನರ ಮನಸ್ಸಲ್ಲಿ ಅಚ್ಚಳಿಯದಂತೆ ಮಾಡಿದೆ.
2019ರ ಅಂತ್ಯದ ವೇಳೆಗೆ ವಿದೇಶಗಳಲ್ಲಿ ದಾಳಿ ಇಟ್ಟಿದ್ದ ಮಹಾಮಾರಿ ಕೊರೊನಾ, ರಾಜ್ಯದಲ್ಲಿ ಮೊದಲ ಬಾರಿಗೆ ಕಲಬುರಗಿಯಲ್ಲಿ ಪತ್ತೆಯಾಗಿತ್ತು. ತಬ್ಲಿಘ್-ಎ-ಜಮಾತ್ ಗೆ ಹೋಗಿ ಬಂದಿದ್ದ ಎನ್ನಲಾಗಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿತ್ತಲ್ಲದೇ, ಆತ ಮೃತಪಟ್ಟಿದ್ದ ಕೂಡ. ಇದರಿಂದಾಗಿ ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಹೆಚ್ಚಿನ ಆತಂಕ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಉಂಟಾಗಿತ್ತು. ಕಾರಣ, ಹೆಚ್ಚು ಮುಸಲ್ಮಾನ ಧರ್ಮೀಯರಿರುವ ಕಾರಣ ಅವರು ಕೂಡ ಜಮಾತ್ ಗೆ ಹೋಗಿ ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ವಿಶೇಷ ಸುದ್ದಿ: ನೆಚ್ಚಿನ ಗೋಕರ್ಣದಲ್ಲಿ ತರಕಾರಿ ಬೆಳೆದು ಮಾದರಿಯಾದ ವಿದೇಶಿ ಜೋಡಿ
ಆದರೆ, ಇಡೀ ಜಿಲ್ಲೆಯಾದ್ಯಂತ ಜಮಾತ್ ಗೆ ಹೋಗಿ ಬಂದವರು ಕೇವಲ 15 ಜನರಾಗಿದ್ದರು. ಈ ಪೈಕಿ ಯಾರೊಬ್ಬರಿಗೂ ಸೋಂಕು ತಗುಲಿಲ್ಲ ಎನ್ನುವುದನ್ನು ಜಿಲ್ಲಾಡಳಿತ, ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದರಿಂದ ಕೊಂಚ ನೆಮ್ಮದಿ ಸಿಕ್ಕರೂ, ಮಹಾಮಾರಿಯ ಭಯ ಹಾಗೆಯೇ ಇತ್ತು. ಯಾವತ್ತು, ಹೇಗೆ ಬೇಕಾದರೂ ದಾಳಿ ಇಡಬಹುದು ಎಂಬ ಆತಂಕ ಅಷ್ಟು ಬೇಗ ಅಳಿಸಿ ಹೋಗುವಂಥದ್ದಾಗಿರಲಿಲ್ಲ.
11 ಮಂದಿಗೆ ಮೊದಲ ಬಾರಿಗೆ ಸೋಂಕು ದೃಢ
ಇನ್ನು, ಜಿಲ್ಲೆಯಲ್ಲಿ ಯಾವುದೇ ಸೋಂಕಿತರು ಪತ್ತೆಯಾಗದಿದ್ದರೂ ಸಹ ಅರಬ್ ದೇಶಗಳಲ್ಲಿ, ಐರೋಪ್ಯ ರಾಷ್ಟ್ರಗಳಲ್ಲಿ, ಅಮೆರಿಕಾದಂಥ ದೈತ್ಯ ರಾಷ್ಟ್ರಗಳಲ್ಲಿ ಕೊರೊನಾ ಲಗ್ಗೆ ಇಟ್ಟಿತ್ತು. ಇದರಿಂದಾಗಿ ಅಲ್ಲಿನ ಜನ ತತ್ತರಿಸಿದ್ದರು. ಇತ್ತ ಉದ್ಯೋಗಕ್ಕಾಗಿ ಆ ರಾಷ್ಟ್ರಗಳಲ್ಲಿ ನೆಲೆಸಿದ್ದ ಉತ್ತರ ಕನ್ನಡಿಗರು, ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ ಕಂಗೆಟ್ಟು ಮರಳಿ ತಾಯ್ನೆಲಕ್ಕೆ ಬರಲಾರಂಭಿಸಿದ್ದರು. ಹೀಗೆ ಬರಲಾರಂಭಿಸಿದವರಲ್ಲಿ ಮೊದಲ ಬಾರಿಗೆ ಮಾರ್ಚ್ ತಿಂಗಳಲ್ಲಿ ಭಟ್ಕಳ ಮೂಲದ ವ್ಯಕ್ತಿಯೊಬ್ಬರಲ್ಲಿ ಮಂಗಳೂರಿನಲ್ಲಿ ಸೋಂಕು ದೃಢಪಟ್ಟಿತ್ತು. ಉತ್ತರ ಕನ್ನಡ ಮೂಲದವರಲ್ಲಿ ಹಾಗೂ ದಕ್ಷಿಣ ಕನ್ನಡದಲ್ಲಿ ಪತ್ತೆಯಾದ ಮೊದಲ ಕೊರೊನಾ ಪ್ರಕರಣವಿದು. ಬಳಿಕ ಆತನನ್ನು ಮಂಗಳೂರು ಆಸ್ಪತ್ರೆಯಲ್ಲೇ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ವಿದೇಶಗಳಿಂದ ವಾಪಸ್ಸಾದವರಲ್ಲಿ ಸೋಂಕು ದೃಢಪಡುವುದು ಮುಂದುವರಿಯಿತು. ಭಟ್ಕಳದಲ್ಲಿ 10 ದಿನಗಳ ಅಂತರದಲ್ಲಿ 11 ಮಂದಿಗೆ ಮೊದಲ ಬಾರಿಗೆ ಸೋಂಕು ದೃಢಪಟ್ಟಿತ್ತು.
ಐಎನ್ಎಚ್ಎಸ್ ಪತಂಜಲಿ ನೌಕಾಸ್ಪತ್ರೆಗೆ ಸೋಂಕಿತರು
ಇದಕ್ಕೂ ಮುಂಚೆಯೇ ಎಚ್ಚೆತ್ತುಕೊಂಡಿದ್ದ ಉತ್ತರ ಕನ್ನಡ ಜಿಲ್ಲಾಡಳಿತ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಅಂದಿನ ಜಿಲ್ಲಾ ಪಂಚಾಯತಿ ಸಿಇಒ ಮೊಹಮ್ಮದ್ ರೋಶನ್ ನೇತೃತ್ವದಲ್ಲಿ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೋವಿಡ್ ಆಸ್ಪತ್ರೆ ಸಿದ್ಧಪಡಿಸಲಾರಂಭಿಸಲಾಗಿತ್ತು. ಆದರೆ, ಆಸ್ಪತ್ರೆ ಸಿದ್ಧಗೊಳ್ಳುವುದರೊಳಗೆ ಸೋಂಕಿತರಾದ 11 ಮಂದಿಯನ್ನು ನೌಕಾಪಡೆಯೊಂದಿಗೆ ಮಾತುಕತೆ ನಡೆಸಿ ಕಾರವಾರದ ಐಎನ್ಎಚ್ಎಸ್ ಪತಂಜಲಿ ನೌಕಾಸ್ಪತ್ರೆಗೆ ದಾಖಲಿಸಲಾಯಿತು.
‘ಕೊರೊನಾ ಮುಕ್ತ' ಜಿಲ್ಲೆಯತ್ತ ಉತ್ತರ ಕನ್ನಡ!
ರೆಡ್ ಝೋನ್ ಜಿಲ್ಲೆಯಲ್ಲಿ ಉತ್ತರ ಕನ್ನಡ
ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡಿ, ಗುಣಪಡಿಸಿ ವಾಪಸ್ಸು ಮನೆಗೆ ಕಳುಹಿಸಿಕೊಡುವಷ್ಟರಲ್ಲಿ ಮತ್ತೆ ಒಂದೇ ಕುಟುಂಬದ ಸುಮಾರು 20 ಮಂದಿಗೆ ಸೋಂಕು ತಗುಲಿತ್ತು. ಅದಾಗಲೇ ಅಂತಿಮ ಹಂತದಲ್ಲಿದ್ದ ಕೋವಿಡ್ ಆಸ್ಪತ್ರೆಗೆ ಈ ಎಲ್ಲರನ್ನೂ ದಾಖಲಿಸಿ, ಸಿಇಒ ರೋಶನ್ ನೇತೃತ್ವದಲ್ಲಿ ಮೇಲ್ವಿಚಾರಣೆ ನಡೆಸಿ ಅವರನ್ನೂ ಗುಣಪಡಿಸಲಾಗಿತ್ತು. ಆದರೆ, ಇಷ್ಟಕ್ಕೇ ಕೊರೊನಾ ಮುಗಿದಿರಲಿಲ್ಲ.
ಕೊನೆಗೆ ಕೋವಿಡ್ ಅತಿ ಹೆಚ್ಚು ಪ್ರಕರಣಗಳಿರುವ ಜಿಲ್ಲೆಗಳ ಪಟ್ಟಿಗಳಲ್ಲಿ ಉತ್ತರ ಕನ್ನಡ ಕೂಡ ಸ್ಥಾನ ಪಡೆಯುವಂತಾಯಿತು. ದೇಶದಲ್ಲಿ 'ಹಾಟ್ ಸ್ಪಾಟ್' ಜಿಲ್ಲೆ, "ರೆಡ್ ಝೋನ್' ಜಿಲ್ಲೆ ಎಂದು ಉತ್ತರ ಕನ್ನಡ ಗುರುತಾಗುವಂತಾಯಿತು.
121 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ
ಹೀಗೆ ವಾರಕ್ಕೆ 10, 20ರಷ್ಟು ಪತ್ತೆಯಾಗುತ್ತಿದ್ದ ಪ್ರಕರಣಗಳ ಸಂಖ್ಯೆ ಬರಬರುತ್ತಾ 100, 200ಕ್ಕೆ ತಲುಪಿತಾದರೂ, ಜಿಲ್ಲಾಡಳಿತದ ಸಮಯಪ್ರಜ್ಞೆ, ಅಧಿಕಾರಿಗಳ ಶ್ರಮದಿಂದಾಗಿ ಸದ್ಯ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಮಂಗಳವಾರ (ಡಿ.15)ದ ಹೊತ್ತಿಗೆ 14,070ಕ್ಕೆ ತಲುಪಿದೆ. ಈ ಪೈಕಿ ಈಗಾಗಲೇ 13,766 ಮಂದಿ ಗುಣಮುಖರಾಗಿದ್ದು, ಕೇವಲ 121 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. 183 ಮಂದಿ ಕೋವಿಡ್ ಗೆ ಬಲಿಯಾದರು.
ಜಿಲ್ಲೆಯತ್ತ ಸುಳಿಯದ ಪ್ರವಾಸಿಗರು
ಇನ್ನು, ಕೊರೋನಾದಿಂದಾಗಿ ವಿದೇಶಗಳಲ್ಲಿ ದುಡಿಯುತ್ತಿದ್ದವರು ವಾಪಸ್ಸು ಜಿಲ್ಲೆಗೆ ಬಂದು ನಿರುದ್ಯೋಗಿಗಳಾದರೆ, ದೇಶದಲ್ಲಿ ಘೋಷಿಸಲಾಗಿದ್ದ ಲಾಕ್ ಡೌನ್ ನಿಂದಾಗಿ ಸಣ್ಣಪುಟ್ಟ ಅಂಗಡಿ, ಮಳಿಗೆಗಳನ್ನು ತೆರೆದುಕೊಂಡಿದ್ದವರು, ಫಾಸ್ಟ್ ಫುಡ್ ಸೆಂಟರ್, ಹೋಟೆಲ್ ಗಳನ್ನು ನಡೆಸುತ್ತ ಜೀವನ ನಿರ್ವಹಣೆ ಮಾಡಿಕೊಳ್ಳುತ್ತಿದ್ದವರು ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತಾಯಿತು. ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಲ್ಲದೇ ಭಣಗುಟ್ಟಿದವು. ಪ್ರವಾಸಿಗರನ್ನೇ ನಂಬಿ ವ್ಯಾಪಾರ- ವಹಿವಾಟಿನಲ್ಲಿ ತೊಡಗಿದವರು ಆರೇಳು ತಿಂಗಳ ಕಾಲ ಕೆಲಸವಿಲ್ಲದೇ ಖಾಲಿ ಕೂರುವಂತಾಯಿತು. ಐದಾರು ತಿಂಗಳ ಬಳಿಕ ಅನ್ ಲಾಕ್ ಘೋಷಣೆಯಾದರೂ ಪ್ರವಾಸಿಗರು ಜಿಲ್ಲೆಯತ್ತ ಸುಳಿಯದ ಕಾರಣ ಸಾಕಷ್ಟು ಕುಟುಂಬಗಳು ಆರ್ಥಿಕ ಮುಗ್ಗಟ್ಟು ಎದುರಿಸುವಂತಾಯಿತು.
ತಮ್ಮ ದೇಶಕ್ಕೆ ಮರಳದೆ ಇಲ್ಲೇ ಉಳಿದಿದ್ದಾರೆ
ಇನ್ನು, ಲಾಕ್ ಡೌನ್ ನಿಂದಾಗಿ ರೈಲು ಸಂಚಾರ, ವಿಮಾನಗಳ ಹಾರಾಟವೂ ಸ್ಥಗಿತಗೊಂಡವು. ಇದರಿಂದಾಗಿ, ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಪ್ರವಾಸಿಗರು ಇಲ್ಲೇ ಸಿಲುಕಿಕೊಂಡರು. ಜಿಲ್ಲಾಡಳಿತ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕೆಲವು ದೇಶಗಳಿಗೆ ವಿಶೇಷ ವಿಮಾನ ಸೌಲಭ್ಯದಲ್ಲಿ ಹಲವರನ್ನು ಅವರ ತಾಯ್ನಾಡಿಗೆ ಕಳುಹಿಸಿಕೊಟ್ಟಿತ್ತಾದರೂ, ಇನ್ನೂ ಕೆಲವರು ಈವರೆಗೂ ತಮ್ಮ ದೇಶಕ್ಕೆ ಮರಳದೆ ಇಲ್ಲೇ ಉಳಿದಿದ್ದಾರೆ.
Recommended Video
ಮೊದಲಿನಂತೆ ಜೀವನ ನಡೆಸುವ ನಿರೀಕ್ಷೆ
ಒಟ್ಟಾರೆ, ಕೋವಿಡ್ ನಿಂದಾದ ಪರಿಣಾಮ ಅಷ್ಟಿಷ್ಟಲ್ಲ. ಬರೆಯ ಹೊರಟರೆ ಪುಟಗಟ್ಟಲೆ ತುಂಬಬಹುದೇನೋ! ಇಡೀ ಜಗತ್ತಿನ ಮೇಲೆಯೇ ಕೊರೊನಾ ಭೀಕರ ಪರಿಣಾಮಗಳನ್ನು ಉಂಟು ಮಾಡಿದೆ ಅಂದಮೇಲೆ ಉತ್ತರ ಕನ್ನಡ ಜಿಲ್ಲೆ ಇನ್ಯಾವ ಲೆಕ್ಕ.?
2020ನ್ನು "ಕೊರೋನಾ ವರ್ಷ' ಅಂತಲೇ ಗುರುತಿಸಲಾಗಿದೆ. ಈ ವರ್ಷದಲ್ಲಿ ಎಲ್ಲಾ ಕ್ಷೇತ್ರ, ಬಡವ- ಶ್ರೀಮಂತ ಎನ್ನದೆ ಎಲ್ಲರೂ ಸಂಕಷ್ಟಗಳನ್ನು ಅನುಭವಿಸಿದ್ದಾರೆ. 2021ರ ಹೊತ್ತಿಗಾದರೂ ಸಂಪೂರ್ಣ ಕೊರೊನಾ ಮುಕ್ತವಾಗಿ, ಈ ಹಿಂದಿನಂತೆ ಎಲ್ಲಾ ಕ್ಷೇತ್ರಗಳು ಚೇತರಿಕೆಗೊಳ್ಳಲಿ. ಎಲ್ಲರೂ ಮೊದಲಿನಂತೆ ಜೀವನ ನಡೆಸುವಂತಾಗಲಿ ಎಂಬ ನಿರೀಕ್ಷೆ ಎಲ್ಲರದ್ದಾಗಿದೆ.