ಉದ್ಧವ್ ಠಾಕ್ರೆ ಹೇಳಿಕೆ; ಪ್ರತಿಕೃತಿ ದಹನ, ಕರವೇಯಿಂದ ಎಚ್ಚರಿಕೆ
ಕಾರವಾರ, ಜನವರಿ 19: " ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ" ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಮುಖ್ಯಮಂತ್ರಿಗಳ ಪ್ರತಿಕೃತಿ ದಹನ ಮಾಡಿದ್ದು, ಅವರಿಗೆ ಎಚ್ಚರಿಕೆಯನ್ನು ನೀಡಿದೆ.
ಕಾರವಾರದಲ್ಲಿ ಮಂಗಳವಾರ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದಿಂದ ಪ್ರತಿಭಟನೆ ನಡೆಯಿತು. ಠಾಕ್ರೆ ಪ್ರತಿಕೃತಿ ದಹನ ಮಾಡಿ, ಹೇಳಿಕೆ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು.
ಗಡಿ ತಂಟೆಗೆ ಬಂದರೆ ಎಚ್ಚರ: ಉದ್ಧವ್ ಠಾಕ್ರೆ ವಿರುದ್ಧ ಗುಡುಗಿದ ಶಾಸಕಿ ರೂಪಾಲಿ
ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ನೇತೃತ್ವದಲ್ಲಿ ಸದಸ್ಯರು ಸುಭಾಷ್ ವೃತ್ತದಲ್ಲಿ ಉದ್ಧವ್ ಠಾಕ್ರೆ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ, ಮೆರವಣಿಗೆ ನಡೆಸಿದರು. ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು, ಕಾಲಿನಿಂದ ಒದ್ದು, ಘೋಷಣೆಗಳನ್ನು ಕೂಗಿದರು. ನಂತರ ಪ್ರತಿಕೃತಿಗೆ ಬೆಂಕಿ ಹಚ್ಚಲಾಯಿತು.
ಗಡಿ ವಿವಾದ ಕೆದಕಿದ ಠಾಕ್ರೆ; ಕಾಂಗ್ರೆಸ್ನತ್ತ ಕೈ ತೋರಿಸಿದ ಸಿಟಿ ರವಿ
ಭಾಸ್ಕರ ಪಟಗಾರ ಮಾತನಾಡಿ, "ಉದ್ಧವ್ ಠಾಕ್ರೆ ಉದ್ಧಟತನದ ಹೇಳಿಕೆಯನ್ನು ಆಗಾಗ ನೀಡುತ್ತಾರೆ. ಇದು ಅವರಿಗೆ ತೆವಲು. ತೆವಲು ತೀರಿಸಿಕೊಳ್ಳಲು ಅವರು ಈ ರೀತಿ ಹೇಳಿಕೆ ನೀಡುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಮರಾಠಿಗರಿದ್ದಾರೆ. ನಾವು ಅವರೊಂದಿಗೆ ಅನ್ಯೋನ್ಯತೆಯಿಂದ ಇದ್ದೇವೆ" ಎಂದರು.
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
"ಠಾಕ್ರೆ ಎಂಇಎಸ್ ನಂಥ ಸಂಘಟನೆಗಳ ಪುಂಡರಿಗೆ ಪುಷ್ಠಿ ನೀಡುವ ಕಾರ್ಯ ಮಾಡುತ್ತಿದ್ದಾರೆ. ಗಡಿ ಭಾಗದ ಈ ಸಮಸ್ಯೆ ನ್ಯಾಯಾಲಯದಲ್ಲಿದೆ. ಈ ಸಂದರ್ಭದಲ್ಲಿ ಉದ್ಧಟತನದ ಹೇಳಿಕೆ ನೀಡುವ ನಿಮಗೆ ಪರಿಜ್ಞಾನ ಇಲ್ಲವಾ? ಇಂಥ ಹೇಳಿಕೆಗಳ ಮೂಲಕ ಕನ್ನಡಿಗರನ್ನು ಕೆರಳಿಸುತ್ತಿದ್ದೀರಿ" ಎಂದು ಕಿಡಿಕಾರಿದರು.
"ಕರಾವಳಿಯ ಮಂಗಳೂರಿನಿಂದ ಹಿಡಿದು ಉತ್ತರ ಕನ್ನಡದವರೆಗಿನ ಅನೇಕ ಉದ್ಯಮಿಗಳು ಮುಂಬೈನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದ ಕೆಲ ಭಾಗಗಳೂ ನಮ್ಮದು ಎನ್ನುತ್ತೇವೆ. ಲಕ್ಷಾಂತರ ಕನ್ನಡಿಗರು ಮಹಾರಾಷ್ಟ್ರದ ಗಡಿ ಭಾಗದಲ್ಲಿದ್ದು, ಆ ಭಾಗಗಳನ್ನು ನಮಗೆ ಕೊಡಿ ಎಂದು ನಾವು ಕೂಡ ಕೇಳಬೇಕಾಗುತ್ತದೆ" ಎಂದರು.
"ಕೇಂದ್ರ ಹಾಗೂ ರಾಜ್ಯ ಸರ್ಕಾರ ಏನು ಮಾಡುತ್ತಿದೆ? ಯಾರೋ ಹೇಳಿಕೆ ಕೊಟ್ಟಾಗ ನಮ್ಮ ಮುಖ್ಯಮಂತ್ರಿಗೆ ಎಚ್ಚರ ಆಗುತ್ತದೆ. ಗಡಿ ಅಭಿವೃದ್ಧಿ ಪ್ರಾಧಿಕಾರವನ್ನು ಯಾಕೆ ಬಲಪಡಿಸುತ್ತಿಲ್ಲ. ಪ್ರಾಧಿಕಾರಕ್ಕೆ ಬಲಶಾಲಿ ಅಧ್ಯಕ್ಷರನ್ನು ಯಾಕೆ ನೇಮಕ ಮಾಡುತ್ತಿಲ್ಲ? ಈ ಗಡಿ ವಿಚಾರದಲ್ಲಿ ಮೊದಲು ನಮ್ಮ ಸಿಎಂ ಮಧ್ಯಪ್ರವೇಶಿಸಬೇಕು" ಎಂದು ಒತ್ತಾಯಿಸಿದರು.
"ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತರಬೇಕು. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ಈ ರೀತಿ ಹೇಳಿಕೆ ನೀಡುವುದನ್ನು ಮಹಾರಾಷ್ಟ್ರದ ಸಿಎಂ ನಿಲ್ಲಿಸಬೇಕು. ಇಲ್ಲದಿದ್ದರೆ ಎಲ್ಲಾ ಕನ್ನಡಪರ ಸಂಘಟನೆಗಳು ಮತಿಭ್ರಮಣೆ ಉದ್ಧವ್ ಠಾಕ್ರೆಗೆ ತಕ್ಕ ಉತ್ತರ ನೀಡುತ್ತೇವೆ. ಕಾರವಾರದ ಒಂದಿಂಚು ಜಾಗವನ್ನು ಮಹಾರಾಷ್ಟ್ರಕ್ಕೆ ಮಾತ್ರವಲ್ಲ, ಯಾವ ರಾಜ್ಯಕ್ಕೂ ಕೊಡುವುದಿಲ್ಲ. ಕನ್ನಡಿಗರ ತಾಕತ್ತು ಪ್ರದರ್ಶಿಸುತ್ತಿರುತ್ತೇವೆ" ಎಂದರು.
Recommended Video
"ಇಂತಹ ಹೇಳಿಕೆಗಳನ್ನು ಮುಂದುವರಿಸಿದರೆ ಮಹಾರಾಷ್ಟ್ರ ಪರವಾನಗಿ ಹೊಂದಿರುವ ವಾಹನಗಳನ್ನು ಗಡಿಯಲ್ಲಿ, ಕಂಡ ಕಂಡಲ್ಲಿ ತಡೆಯುತ್ತೇವೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಮಹಾರಾಷ್ಟ್ರ ನಮ್ಮದು ಎಂದು ಹೇಳಲು ಪ್ರಚೋದನೆ ನೀಡಬೇಕಾಗುತ್ತದೆ" ಎಂದು ಎಚ್ಚರಿಸಿದರು.