ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊನ್ನಾವರದ ಬಾಲಕಿ ಮೇಲೆ ಚೂರಿ ಇರಿತ ಪ್ರಕರಣಕ್ಕೆ ಟ್ವಿಸ್ಟ್‌!

By ಡಿ.ಪಿ.ನಾಯ್ಕ
|
Google Oneindia Kannada News

ಕಾರವಾರ, ಡಿಸೆಂಬರ್ 17: ಹೊನ್ನಾವರದ ಮಾಗೋಡಿನ ಶಾಲಾ ಬಾಲಕಿ ಕಾವ್ಯಾ ಶೇಖರ್ ನಾಯ್ಕಳ ಮೇಲೆ ಚಾಕುವಿನಿಂದ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಬಾಲಕಿಯೇ ಕೈಗೆ ಮುಳ್ಳನ್ನು ಚುಚ್ಚಿಕೊಂಡು ಸುಳ್ಳು ಸುದ್ದಿ ಹರಿಡಿದ್ದಾಳೆ ಎಂದು ಇದೀಗ ತಿಳಿದು ಬಂದಿದೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಅವರು ನೀಡಿರುವ ಹೇಳಿಕೆಯ ಪ್ರಕಾರ, 'ಬಾಲಕಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿವಿಧ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ರಚಿಸಿ ತನಿಖೆ ಮಾಡಲಾಗಿದೆ. ನೊಂದ ಶಾಲಾ ಬಾಲಕಿಯನ್ನು ಮಹಿಳಾ ಸಾಂತ್ವನ ಕೇಂದ್ರದ ನುರಿತ ಆಪ್ತ ಸಮಾಲೋಚಕರ ಸಮಕ್ಷಮದಲ್ಲಿ ವಿಚಾರಣೆ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ' ಎಂದು ತಿಳಿಸಿದ್ದಾರೆ.

Twist to a knife stab incident on Honnavar's girl!

"ಬಾಲಕಿಯು ಮನೆಯಿಂದ ಸುಮಾರು 8 ಕಿ.ಮೀ. ದೂರದ ಸಂಶಿ ಶಾಲೆಗೆ ಕಾಡಿನ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಳು. ಈ ವೇಳೆ ಅದೇ ಗ್ರಾಮದ ಗಣೇಶ ಈಶ್ವರ ನಾಯ್ಕ ಎಂಬಾತ ಕಳೆದ 5- -6 ತಿಂಗಳಿಂದ ನಿರಂತರವಾಗಿ ರಸ್ತೆಯಲ್ಲಿ ಬಂದು ಅಡ್ಡಗಟ್ಟುತ್ತಿದ್ದ. ತನ್ನ ಜತೆ ಬರುವಂತೆ ಆತ ಪೀಡಿಸುತ್ತಿದ್ದ. ಇದರಿಂದ ಬಾಲಕಿ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದಳು," ಎಂದು ತಿಳಿಸಿದ್ದಾರೆ.

"ಇತ್ತೀಚಿಗೆ ಶಾಲೆಗೆ ಹೋಗುವಾಗ ದಾರಿ ಮಧ್ಯದಲ್ಲಿ ಬಾಲಕಿಯನ್ನು ಅಡ್ಡ ಹಾಕಿದ್ದ ಆತ, 'ನಿನಗೆ ತುಂಬಾ ಸೊಕ್ಕು. ನನ್ನ ಬೈಕಿನಲ್ಲಿ ಕರೆದರೆ ಬರಲಿಕ್ಕೆ ಆಗುವುದಿಲ್ವಾ? ನಿನಗೆ ಏನಾದರು ಆದರೆ ತಾನಾಗಿಯೇ ನನ್ನ ಜೊತೆ ಬೈಕಿನಲ್ಲಿ ಬರುತ್ತೀಯಾ' ಎಂದು ಬೆದರಿಕೆ ಹಾಕಿದ್ದ. ಆತನಿಂದ ತೊಂದರೆಗೆ ಒಳಗಾದರೆ ತಂದೆ-- ತಾಯಿ ಮರ್ಯಾದೆ ಹಾಳಾಗುತ್ತದೆ. ಶಿಕ್ಷಣ ಹಾಳಾಗುತ್ತದೆ ಎಂದು ಆತಂಕಗೊಂಡ ಆಕೆ ಈ ವಿಷಯವನ್ನು ತನ್ನ ತಾಯಿಗೆ ತಿಳಿಸಿದ್ದಳು," ಎಂದು ಎಸ್ಪಿ ವಿವರ ನೀಡಿದ್ದಾರೆ.

"ಬಳಿಕ ತಾಯಿಯು ಈ ವಿಚಾರವನ್ನು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಊರ ಮುಖಂಡರೊಬ್ಬರ ಗಮನಕ್ಕೆ ತಂದಿದ್ದರು. ಅವರು ವಿಚಾರಣೆ ನಡೆಸಿ ಯುವಕನಿಗೆ ಎಚ್ಚರಿಕೆ ನೀಡುವುದಾಗಿ ಭರವಸೆ ನೀಡಿದ್ದರು," ಎಂದು ಅವರು ಹೇಳಿದ್ದಾರೆ.

"ಬಳಿಕ ಹೊನ್ನಾವರ ಗಲಾಟೆಯ ಹಿನ್ನಲೆಯಲ್ಲಿ ಆಕೆ ಸುಮಾರು 3- 4 ದಿನ ಶಾಲೆಗೆ ರಜೆ ಮಾಡಿದ್ದಳು. ಬುಧವಾರ ಸಂಜೆ ಬಾಲಕಿಯು ತನ್ನ ಸ್ನೇಹಿತೆಗೆ ಫೋನ್ ಮಾಡಿದಾಗ ಗುರುವಾರ (ಡಿ.14) ಶಾಲೆಯಲ್ಲಿ ಕನ್ನಡ, ಗಣಿತ, ಹಿಂದಿ, ಡ್ರಾಯಿಂಗ್ ಪರೀಕ್ಷೆ ಇದೆ ಎಂದು ತಳಿದು ಬಂದಿದೆ. ಆ ಯುವಕನ ಪೀಡನೆಯಿಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ದ ಆಕೆ ಸರಿಯಾಗಿ ಅಭ್ಯಾಸ ಮಾಡದೇ ಇದ್ದುದರಿಂದ ಪರೀಕ್ಷೆಯ ಬಗ್ಗೆ ಆತಂಕಗೊಂಡಿದ್ದಳು," ಎಂಬುದಾಗಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.

"ಅಲ್ಲದೇ ಗುರುವಾರ ಶಾಲೆಗೆ ಹೋಗುವಾಗ ಆತ ತನಗೆ ಮಾನಭಂಗ ಮಾಡಿದಲ್ಲಿ ಮನೆಯವರ ಮರ್ಯಾದೆ ಹೋಗುತ್ತದೆ ಎಂಬ ಭಯದಿಂದ ತಾನು ಬದುಕಬಾರದು ಎಂದುಕೊಂಡು, ಗುರುವಾರ ಬೆಳಿಗ್ಗೆ ಮನೆಯಿಂದ ಶಾಲೆಗೆ ಹೋಗುವಾಗ ದಾರಿ ಮಧ್ಯದಲ್ಲಿ ನಿಂಬೆ ಹಣ್ಣಿನ ಗಿಡದ ಮುಳ್ಳಿನಿಂದ ತನ್ನ ಎರಡು ಕೈಗಳ ಮೇಲೆ ತಾನಾಗಿಯೇ ಗಾಯ ಮಾಡಿಕೊಂಡಿದ್ದಾಳೆ. ಆದರೆ ನಂತರ ತಾನು ಮಾಡುತ್ತಿರುವುದು ತಪ್ಪು ಎಂದು ಅರಿವಾದ ಬಾಲಕಿಯು ಹಾಗೇ ಶಾಲೆಗೆ ಹೋಗಲು ತೀರ್ಮಾನಿಸಿದಳು. ಮಾಗೋಡಿಗೆ ಬಂದ ನಂತರ ತನ್ನ ಸ್ನೇಹಿತೆಯ ಮೂಲಕ ಕೈಗೆ ಸುತ್ತಿಕೊಳ್ಳಲು ಬ್ಯಾಂಡೇಜ್ ತರುವಂತೆ ಅಂಗಡಿಗೆ ಕಳುಹಿಸಿದಳು. ಆಕೆಯ ಸ್ನೇಹಿತೆ ಚಿಕ್ಕ ಬ್ಯಾಂಡೇಡ್ ಪಟ್ಟಿ ತಂದಿದ್ದು, ಅದು ಗಾಯಕ್ಕೆ ಸಾಕಾಗಾವುದಿಲ್ಲವೆಂದು ಅದನ್ನು ವಾಪಸ್ಸು ನೀಡಿ ದೊಡ್ಡ ಬ್ಯಾಂಡೇಜ್ ಬಟ್ಟೆಯನ್ನು ತರುವಂತೆ ಹೇಳಿ ಕಳುಹಿಸಿದ್ದಳು," ಎಂದು ಪೂರ್ತಿ ವಿವರ ನೀಡಿದ್ದಾರೆ.

"ಆದರೆ ಅಂಗಡಿಯವನೇ ಗಾಯಗೊಂಡ ಬಾಲಕಿಯನ್ನು ಕರೆದು ಗಾಯವನ್ನು ಪರೀಕ್ಷಿಸಿ, ಗಾಯ ಹೇಗೆ ಉಂಟಾಗಿದೆ ಎಂಬ ಮಾಹಿತಿಯನ್ನು 'ನಿನ್ನೆ ಯಾರೋ ಇಬ್ಬರೂ ಅಪರಿಚಿತರು ರಾತ್ರಿ ವೇಳೆಯಲ್ಲಿ ಕೊಡ್ಲಗದ್ದೆಯ ಕಡೆಗೆ ಹೋಗುವುದನ್ನು ನಾನು ನೋಡಿದ್ದೇನೆ. ಅದರಲ್ಲಿ ಒಬ್ಬನಿಗೆ ಗಡ್ಡ ಇತ್ತು. ಇನ್ನೂಬ್ಬ ಸಪೂರವಾಗಿದ್ದ. ಅವರೇ ಚಾಕುವಿನಿಂದ ಈ ಗಾಯ ಮಾಡಿದ್ದಾರೆ' ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ಬಳಿಕ ಅಲ್ಲಿಗೆ ಬಂದವರು ಕೂಡ ಅದೇ ಸುದ್ದಿಯನ್ನು ಮತ್ತಷ್ಟು ತಿರುಚಿ, ಇದು ಅನ್ಯಕೋಮಿನವರೇ ಮಾಡಿದ್ದಾರೆ ಎಂದು ಪ್ರಚಾರ ನೀಡಿದ್ದಾರೆ. ಈ ವೇಳೆ ನೆರೆದಿದ್ದ ಜನರನ್ನು ನೋಡಿ ಭಯಗೊಂಡ ಆಕೆಯು, ಜನರು ಹೇಳಿರುವುದನ್ನೇ ಮತ್ತಷ್ಟು ತಿರುಚಿ ಆಸ್ಪತ್ರೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಳು," ಎಂದು ತಿಳಿಸಿದ್ದಾರೆ.

"ಈ ಬಗ್ಗೆ ಬಾಲಕಿಯೇ ತಪ್ಪೊಪ್ಪಿಕೊಂಡು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾಳೆ. ಬಾಲಕಿಗೆ ಪೀಡಿಸುತ್ತಿದ್ದ ಗಣೇಶ್ ಎಂಬುವವನು ನಾಪತ್ತೆಯಾಗಿದ್ದು, ಆತನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆತನಿಗಾಗಿ ತೀವ್ರ ಶೋಧ ಮುಂದುವರಿದಿದೆ," ಎಂದು ತಿಳಿಸಿದ್ದಾರೆ.

"ಕೆಲವು ಕಿಡಿಗೇಡಿಗಳು ಶಾಂತಿ ಕದಡುವ, ಕೋಮು ಸಾಮರಸ್ಯವನ್ನು ಹಾಳು ಮಾಡುವ ದುರುದ್ದೇಶದಿಂದ ಜನರನ್ನು ಭಾವೋದ್ರೇಕಗೊಳಿಸಿ, ಗಲಭೆ ಉಂಟಾಗುವಂತೆ ಪ್ರಚೋದಿಸುವ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮುಖಾಂತರ ಹಬ್ಬಿಸುತ್ತಿದ್ದಾರೆ. ಸಾರ್ವಜನಿಕರು ಆ ಬಗ್ಗೆ ಗಮನ ಕೊಡಬಾರದು," ಎಂದು ಉತ್ತರ ಕನ್ನಡ ಎಸ್ಪಿ ವಿನಾಯಕ ಪಾಟೀಲ್ ಹೇಳಿಕೆ ನೀಡಿದ್ದಾರೆ.

English summary
A twist has been found in the alleged knife attack on Kavya Shekhar Naik, a school girl in Magodi, Honnavar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X