ಕಾರವಾರ; ವೇಗ ಪಡೆದುಕೊಂಡ ಸುರಂಗ ಮಾರ್ಗ ಕಾಮಗಾರಿ
ಕಾರವಾರ, ಅಕ್ಟೋಬರ್ 27: ಕೊರೊನಾ ಸಂದರ್ಭದಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಇದೀಗ ಚುರುಕುಗೊಂಡಿದ್ದು, ಈ ಕಾಮಗಾರಿಯ ಭಾಗವಾದ ಕಾರವಾರದ ಬಳಿ ಸುರಂಗ ಮಾರ್ಗದ ನಿರ್ಮಾಣ ಕಾರ್ಯ ಕೂಡ ವೇಗ ಪಡೆದುಕೊಂಡಿದೆ. ಕರಾವಳಿ ಭಾಗದಲ್ಲಿ ಮೊದಲ ಹೆದ್ದಾರಿ ಸುರಂಗಮಾರ್ಗ ಎನ್ನಲಾಗಿರುವ ಈ ಸುರಂಗ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.
ಕರಾವಳಿಯಲ್ಲಿ ಕೇವಲ ಕೊಂಕಣ ರೈಲ್ವೇ ಮಾರ್ಗದಲ್ಲಿ ಕಾಣಸಿಗುತ್ತಿದ್ದ ಸುರಂಗ ಸಂಚಾರ ಇದೀಗ ಹೆದ್ದಾರಿ ಸವಾರರಿಗೂ ಲಭ್ಯವಾಗಲಿದೆ. ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣದ ಭಾಗವಾಗಿ ಕಾರವಾರ ತಾಲೂಕಿನ ಎರಡೂ ಕಡೆ ಪ್ರಥಮ ಬಾರಿಗೆ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತಿದೆ. ತಾಲೂಕಿನ ಬಿಣಗಾ ಗ್ರಾಮ ಹಾಗೂ ಆಲಿಗದ್ದಾ ಗ್ರಾಮದ ಬಳಿ ಎರಡು ಟನಲ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಬಹುತೇಕ ಪೂರ್ಣಗೊಳ್ಳುತ್ತಿದೆ. ಮುಂದೆ ಓದಿ...
ಇದೇ ಮೊದಲ ಬಾರಿಗೆ ಹೆದ್ದಾರಿಗೆ ಟನಲ್ ನಿರ್ಮಾಣ
ಕಾಮಗಾರಿ ಗುತ್ತಿಗೆ ಪಡೆದಿರುವ ಐ.ಆರ್.ಬಿ ಕಂಪನಿ ಬಿಣಗಾ ಗ್ರಾಮದ ಬಳಿ 346 ಮೀಟರ್ ಉದ್ದದ ಟನಲ್ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಎರಡು ಟನಲ್ಗಳ ನಿರ್ಮಾಣ ಕಾರ್ಯ ಮುಗಿದಿದೆ. ಇದಲ್ಲದೇ ಅಲಿಗದ್ದಾ ಗ್ರಾಮದ ಬಳಿ 350 ಮೀಟರ್ ಉದ್ದದ ಟನಲ್ ನಿರ್ಮಿಸುತ್ತಿದ್ದು, ಇದರಲ್ಲಿ ಈಗಾಗಲೇ ಒಂದು ಟನಲ್ ಪೂರ್ಣಗೊಂಡಿದೆ. ಇದೇ ಮೊದಲ ಬಾರಿಗೆ ಹೆದ್ದಾರಿಗೆ ಟನಲ್ ನಿರ್ಮಾಣವಾಗಿದ್ದು, ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಇನ್ನು ಕಾರವಾರ ತಾಲೂಕಿನ ಆಲಿಗದ್ದಾ ಹಾಗೂ ಬಿಣಗಾ ಗ್ರಾಮದಲ್ಲಿ ಸುರಂಗಮಾರ್ಗ ನಿರ್ಮಾಣ ಮಾಡುವುದರಿಂದ ಹೆದ್ದಾರಿ ಸಂಚಾರದಲ್ಲಿ ಸುಮಾರು 5 ಕಿಲೋ ಮೀಟರ್ ಕಡಿಮೆಯಾಗಲಿದೆ.
ಹೊಸಪೇಟೆ ಹೆದ್ದಾರಿಯ ಸುರಂಗ ಮಾರ್ಗದಲ್ಲಿ ಬಿರುಕು
ಜನವರಿ ಅಂತ್ಯಕ್ಕೆ ಸಂಚಾರಕ್ಕೆ ಲಭ್ಯ
ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ಐಆರ್.ಬಿ ಕಂಪನಿ ಮಾಡುತ್ತಿದ್ದು, ಟನಲ್ ನಿರ್ಮಾಣ ಕಾರ್ಯವನ್ನು ಮುಂಬೈನ ಚಂದ್ರಶೇಖರ್ ಇನ್ಫ್ರಾ ಕಂಪನಿ ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಟನಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕೊರೊನಾ ಕಾರಣದಿಂದಾಗಿ ಸುರಂಗ ನಿರ್ಮಾಣ ಕೊಂಚ ನಿಧಾನಗತಿಯಲ್ಲಿ ಸಾಗಿತ್ತು. ಇದೀಗ ಕಾಮಗಾರಿ ವೇಗ ಪಡೆದುಕೊಳ್ಳುತ್ತಿದ್ದು, ಸುರಂಗ ನಿರ್ಮಾಣ ಕಾರ್ಯ ಇನ್ನೇನು ಪೂರ್ಣಗೊಳ್ಳುವ ಹಂತ ತಲುಪಿದೆ. ಜನವರಿ ಅಂತ್ಯದ ವೇಳೆಗೆ ಹೆದ್ದಾರಿ ಟನಲ್ನ ಒಂದು ಬದಿಯ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸ್ವಲ್ಪ ದಿನದಲ್ಲಿ ಫ್ಲೈ ಓವರ್ ಕಾಮಗಾರಿಯೂ ಪೂರ್ಣ
ಹೆದ್ದಾರಿಗೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಹೆದ್ದಾರಿ ನಿರ್ಮಾಣ ಕಾರ್ಯ ಕೊಂಚ ತಡವಾಗಿದ್ದು, ಈಗಾಗಲೇ ಹೆದ್ದಾರಿಗೆ ಇದ್ದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಟನಲ್ ಕಾಮಗಾರಿ ಜೊತೆಗೆ ಫ್ಲೈಓವರ್ ಕಾಮಗಾರಿ ಸಹ ಜನವರಿ ವೇಳೆಗೆ ಪೂರ್ಣಗೊಂಡು ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Recommended Video
ತ್ವರಿತ ಗತಿಯಲ್ಲಿ ಸಾಗುತ್ತಿರುವ ಕಾಮಗಾರಿ
ಸದ್ಯ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ವೇಗವಾಗಿ ಕಾಮಗಾರಿಯನ್ನು ಗುತ್ತಿಗೆ ಪಡೆದ ಕಂಪನಿಯವರು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕರಾವಳಿ ಭಾಗದಲ್ಲಿ ಇದೇ ಪ್ರಥಮ ಭಾರಿಗೆ ಕಾರವಾರದಲ್ಲಿ ನಿರ್ಮಿಸುತ್ತಿರುವ ಸುರಂಗ ಮಾರ್ಗ ಮುಕ್ತಾಯ ಹಂತಕ್ಕೆ ಬಂದಿದ್ದು, ಈ ಸುರಂಗ ಮಾರ್ಗ ಕಾರವಾರದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವಂತಾಗಲಿ ಎನ್ನುವುದು ಕಾರವಾರಿಗರ ಅಭಿಪ್ರಾಯವಾಗಿದೆ.