ಯಲ್ಲಾಪುರದಲ್ಲಿ ಕೆಮಿಕಲ್ ತುಂಬಿದ್ದ ಲಾರಿ ಪಲ್ಟಿ: ಹೊತ್ತಿ ಉರಿದ ಟ್ಯಾಂಕರ್; ಹೆದ್ದಾರಿ ಸಂಚಾರ ಅಸ್ತವ್ಯಸ್ತ
ಕಾರವಾರ, ಅಕ್ಟೋಬರ್ 13: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ- 63ರ ಆರ್ತಿಬೈಲ್ ಕ್ರಾಸ್ನ ಇಡಗುಂದಿ ಸಮೀಪ ಬೆಳ್ಳಂಬೆಳಿಗ್ಗೆ ಕೆಮಿಕಲ್ ತುಂಬಿಕೊಂಡು ಸಂಚರಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿತು.
ಮಂಗಳೂರಿನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಓಎನ್ಜಿಸಿ) ಪೆಟ್ರೋಕೆಮಿಕಲ್ಸ್ ವಿಭಾಗದಿಂದ ಬೆಂಜಿನ್ ಪೆಟ್ರೋಕೆಮಿಕಲ್ ಅನ್ನು ತುಂಬಿಕೊಂಡು ಗುಜರಾತ್ ರಾಜ್ಯದ ಅಹಮದಾಬಾದ್ಗೆ ಟ್ಯಾಂಕರ್ ತೆರಳುತ್ತಿತ್ತು. ಆದರೆ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ- 63ರ ಆರ್ತಿಬೈಲ್ ಕ್ರಾಸ್ನ ಇಡಗುಂದಿ ಸಮೀಪ ಬೆಳ್ಳಂಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಹೆದ್ದಾರಿಯಲ್ಲೇ ಪಲ್ಟಿಯಾಗಿದೆ.
ಬೆಂಜಿನ್ನಲ್ಲಿ ಗ್ಯಾಸೋಲಿನ್ ಒಳಗೊಂಡಿತ್ತು
ಬೆಂಜಿನ್ನಲ್ಲಿ ಗ್ಯಾಸೋಲಿನ್ (ಪೆಟ್ರೋಲ್) ಅನ್ನು ಒಳಗೊಂಡಿರುವ ಕಾರಣ ಟ್ಯಾಂಕರ್ ಪಲ್ಟಿಯಾಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಟ್ಯಾಂಕರ್ ಪಲ್ಟಿಯಾದ ತಕ್ಷಣ ಚಾಲಕ ಮತ್ತು ಕ್ಲೀನರ್ ಟ್ಯಾಂಕರ್ನಿಂದ ಹೊರ ಬಂದು ಜೀವ ಉಳಿಸಿಕೊಂಡಿದ್ದಾರೆ. ಬೆಳ್ಳಂಬೆಳಿಗ್ಗೆ ಈ ಘಟನೆ ಸಂಭವಿಸಿದ ಕಾರಣ ಹೆಚ್ಚಿನವರಿಗೆ ಅಪಘಾತದ ಮಾಹಿತಿಯೇ ದೊರೆತಿರಲಿಲ್ಲ.
ಕೆಲ ಹೊತ್ತಿನ ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಆದರೆ ಅಷ್ಟರಲೇ ಟ್ಯಾಂಕರ್ ಬಹುತೇಕ ಬೆಂಕಿಗಾಹುತಿಯಾಗಿದೆ. ಈ ಅಗ್ನಿ ಅವಘಡದಿಂದ ಕಿಲೋಮೀಟರ್ಗಟ್ಟಲೇ ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದವು.
ಬೆಂಕಿ ನಂದಿಸಿದ ಅಗ್ನಿಶಾಮಕ ದಳ
ಅಲ್ಲದೇ ಘಟ್ಟದಲ್ಲಿ ಟ್ಯಾಂಕರ್ಗೆ ಬೆಂಕಿ ತಗುಲಿದ್ದರಿಂದ ಆತಂಕದ ವಾತಾವರಣ ಸಹ ನಿರ್ಮಾಣವಾಗಿತ್ತು. ಸದ್ಯ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸಿರುವ ಹಿನ್ನೆಲೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಪುನಃ ಪ್ರಾರಂಭವಾಗಿದ್ದು, ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಟ್ಯಾಂಕರ್ ಪಲ್ಟಿಯಾದ ರಭಸಕ್ಕೆ ಟ್ಯಾಂಕರ್ನಲ್ಲಿದ್ದ ಬೆಂಜಿನ್ ಹೆದ್ದಾರಿ ಪಕ್ಕದ ಅರಣ್ಯ ಪ್ರದೇಶಕ್ಕೆ ಚಿಮ್ಮಿದೆ. ಹೀಗಾಗಿ ಕಿಲೋಮೀಟರ್ನವರೆಗೂ ಬೆಂಕಿ ವ್ಯಾಪಿಸಿಕೊಂಡಿತ್ತು. ಈ ಪ್ರದೇಶದಲ್ಲಿ ಜನವಸತಿ ಕಡಿಮೆ ಇರುವ ಕಾರಣ ಯಾವುದೇ ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ. ಆದರೂ ಈ ಘಟನೆ ಹೆದ್ದಾರಿಯಲ್ಲಿ ಸಾಗುತ್ತಿದ್ದವರ ಆತಂಕಕ್ಕೆ ಕಾರಣವಾಯಿತು. ಅಲ್ಲದೇ ಹೆದ್ದಾರಿಯಲ್ಲಿ ಪದೇ ಪದೇ ಈ ರೀತಿ ಟ್ಯಾಂಕರ್ಗಳು ಪಲ್ಟಿಯಾಗುತ್ತಿರುವುದು ಹೆದ್ದಾರಿ ಪಕ್ಕದಲ್ಲಿ ಮನೆ ಮಾಡಿಕೊಂಡಿರುವವರಲ್ಲೂ ಭಯದ ವಾತಾವರಣ ಸೃಷ್ಟಿಗೆ ಕಾರಣವಾಗಿದೆ.
ಇನ್ನೂ ಕಣ್ಮುಂದಿದೆ ಬರ್ಗಿಯ ದುರಂತ
ಕಳೆದ ಆರು ವರ್ಷದ ಹಿಂದೆ ಕುಮಟಾದ ಬರ್ಗಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಹೆದ್ದಾರಿ ಸಮೀಪದ ಮನೆಗಳ ಮೇಲೆ ಬಿದ್ದು ಸ್ಫೋಟಗೊಂಡಿತ್ತು. ಮನೆಗಳು ಸಂಪೂರ್ಣ ಹೊತ್ತಿ ಉರಿದು 13 ಜನ ಸಾವನ್ನಪ್ಪಿದ್ದರು. ಹೀಗಾಗಿ ಪ್ರತಿ ಸಾರಿ ಜಿಲ್ಲೆಯಲ್ಲಿ ಎಲ್ಲೇ ಟ್ಯಾಂಕರ್ ಪಲ್ಟಿಯಾದರೂ ಈ ಬರ್ಗಿಯ ದುರಂತ ಜನರಿಗೆ ಒಮ್ಮೆ ಕಣ್ಮುಂದೆ ಹಾದು ಹೋಗುತ್ತದೆ.
ಟ್ಯಾಂಕರ್ಗಳ ಸಂಚಾರ ನಿರ್ಬಂಧವಿದೆ
ಕುಮಟಾದ ಬರ್ಗಿ ಸಮೀಪದ ನಡೆದಿದ್ದ ಈ ಗ್ಯಾಸ್ ಟ್ಯಾಂಕರ್ ದುರಂತದ ಬಳಿಕ ರಾತ್ರಿ 11ರಿಂದ ಬೆಳಗಿನ ಜಾವ 5ರ ಅವಧಿಯಲ್ಲಿ ಗ್ಯಾಸ್ ಟ್ಯಾಂಕರ್ಗಳ ಸಂಚಾರ ನಿರ್ಬಂಧಿಸಲಾಗಿತ್ತು. ಆದರೆ ಇದರ ಪಾಲನೆ ಸರಿಯಾಗಿ ಆಗುತ್ತಿಲ್ಲ ಎನ್ನಲಾಗಿದೆ. ಜನ ಹಾಗೂ ವಾಹನಗಳ ಓಡಾಟ ಕಡಿಮೆ ಇರುವ ಸಮಯದಲ್ಲಿ ಟ್ಯಾಂಕರ್ಗಳು ಪಲ್ಟಿಯಾಗಿ ಉಂಟಾಗುವ ಅನಾಹುತಗಳನ್ನು ತಡೆಗಟ್ಟಲು ರಕ್ಷಣಾ ತಂಡಗಳಿಗೆ ಸಮಸ್ಯೆ ಉಂಟಾಗಬಹುದು ಎಂದು ಈ ನಿಯಮ ಹೇರಲಾಗಿತ್ತು. ಆದರೆ ಅದರ ಪಾಲನೆ ಅಷ್ಟಕ್ಕಷ್ಟೇ ಇದೆ.
Recommended Video