INS ವಿಕ್ರಮಾದಿತ್ಯದಿಂದ "ಕೊರೊನಾ ವಾರಿಯರ್ಸ್'ಗೆ ಗೌರವ
ಕಾರವಾರ, ಮೇ 3: ಯುದ್ಧನೌಕೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಶನಿವಾರ ಸಂಜೆ ಸಿಡಿಮದ್ದುಗಳನ್ನು ಸಿಡಿಸಿ ಕೊರೊನಾ ವಾರಿಯರ್ಸ್ ಗಳಿಗೆ ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಗೌರವ ಸಲ್ಲಿಸಲಾಗಿದೆ.
ಕೊರೊನಾ ವೈರಸ್ ವಿರುದ್ಧ ಹೋರಾಟಡುತ್ತಿರುವ ಕೊರೊನಾ ಯೋಧರಾದ ವೈದ್ಯರು, ಶುಶ್ರೂಷಕರು, ಪೊಲೀಸರು ಹಾಗೂ ನೈರ್ಮಲ್ಯ ಕೆಲಸಗಾರರಿಗೆ ಗೌರವ ಸಲ್ಲಿಸುವಂತೆ ಸೂಚನೆ ಬಂದಿರುವ ಕಾರಣ, ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ವಿಶೇಷವಾಗಿ ಗೌರವ ಸಲ್ಲಿಸಲಾಗಿದೆ.
ದೇಶದ ಅತಿದೊಡ್ಡ ಯುದ್ಧ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ, ಸಂಜೆಯ ವೇಳೆಗೆ ಸಿಡಿಮದ್ದುಗಳನ್ನು ಸಿಡಿಸಲಾಗಿದೆ.
ಭಾನುವಾರ ಕೂಡ ಸಂಜೆ 7.30 ಕ್ಕೆ ವಿಕ್ರಮಾದಿತ್ಯದಿಂದ ನೌಕಾನೆಲೆ ಸಿಬ್ಬಂದಿ ಸಿಡಿಮದ್ದುಗಳನ್ನು ಸಿಡಿಸಿ, ಕೊರೋರೊನಾ ವಾರಿಯರ್ಸ್ ಗಳಿಗೆ ಗೌರವ ಸಮರ್ಪಣೆ ಮಾಡಲಿದ್ದಾರೆ ಎಂದು ಸೀಬರ್ಡ್ ನೌಕಾನೆಲೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಜಯ್ ಕಪೂರ್ ತಿಳಿಸಿದ್ದಾರೆ.
ಐಎನ್ಎಸ್ ವಿಕ್ರಮಾದಿತ್ಯ ನೌಕೆಯು 44,500 ಟನ್ ತೂಕ ಇದ್ದು, 284 ಮೀಟರ್ ಉದ್ದ, 60 ಮೀಟರ್ ಎತ್ತರ ಇದೆ. 34 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್ ಗಳನ್ನು ಹೊರುವ ಸಾಮರ್ಥ್ಯವನ್ನು ಇದು ಹೊಂದಿದೆ.
ಸಾಮಾನ್ಯ ದಿನಗಳಲ್ಲಿ 1,600 ಸಿಬ್ಬಂದಿ ಇದರಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ, ಸದ್ಯ ಕನಿಷ್ಠ ಸಿಬ್ಬಂದಿಯಿಂದ ಸಿಡಿಮದ್ದು ಸಿಡಿಸಲಾಗುತ್ತದೆ. ಒಮ್ಮೆ ಇಂಧನ ಭರ್ತಿಯಾದರೆ 13,000 ಕಿ.ಮೀ. ದೂರವನ್ನು ವಿಕ್ರಮಾದಿತ್ಯ ಕ್ರಮಿಸುತ್ತದೆ. 2013 ರ ನವೆಂಬರ್ನಲ್ಲಿ ಭಾರತೀಯ ನೌಕಾಪಡೆ ಸೇವೆಗೆ ಇದು ಪಾದಾರ್ಪಣೆ ಮಾಡಿತು.
ದೇಶದಲ್ಲೇ ಮೊದಲ ಬಾರಿಗೆ ಕಾರವಾರದ ಐಎನ್ಎಚ್ಎಸ್ ಪತಂಜಲಿ ಆಸ್ಪತ್ರೆಯನ್ನು ಕೊರೊನಾ ಆಸ್ಪತ್ರೆಯನ್ನಾಗಿ ಪರಿವರ್ತಿಸಿ, ನಾಗರಿಕ ಸೇವೆಗೆ ನೀಡಲಾಗಿತ್ತು. ಜಿಲ್ಲಾಡಳಿತದ ಕೋರಿಕೆಯ ಮೇರೆಗೆ, ರಕ್ಷಣಾ ಇಲಾಖೆಯ ಅನುಮತಿಯ ಮೇರೆಗೆ ನೌಕಾ ಆಸ್ಪತ್ರೆಯನ್ನು ಈ ವೇಳೆ ಬಳಸಿಕೊಳ್ಳಲಾಗಿತ್ತು.
ಜಿಲ್ಲೆಯಲ್ಲಿನ 9 ಕೊರೊನಾ ವೈರಸ್ ಸೋಂಕಿತರಿಗೆ ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಸಿಬ್ಬಂದಿ ಹಾಗೂ ಪತಂಜಲಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯನ್ನೊಳಗೊಂಡ ತಂಡ ಚಿಕಿತ್ಸೆ ನೀಡಿ, ಕೊರೊನಾದಿಂದ ಅವರನ್ನು ಗುಣಪಡಿಸಿ ಕಳುಹಿಸಿಕೊಡಲಾಗಿದೆ.