ಕುಮಟಾದಲ್ಲಿ ಭೀಕರ ಅಪಘಾತ: ಇಬ್ಬರ ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ
ಕಾರವಾರ, ಜುಲೈ 7: ಲಾರಿಯೊಂದರಲ್ಲಿ ಸಾಗಿಸುತ್ತಿದ್ದ ಕಬ್ಬಿಣದ ಬೃಹತ್ ಕಂಬವೊಂದು ಸಾರಿಗೆ ಬಸ್ ಗೆ ಬಡಿದು ಸ್ಥಳದಲ್ಲೇ ಇಬ್ಬರು ಮೃತಪಟ್ಟು, 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ರಾಮಲೀಲಾ ಆಸ್ಪತ್ರೆಯ ಬಳಿ ಸಂಭವಿಸಿದೆ.
ಲಾರಿಯಲ್ಲಿ ಸಾಗಿಸುತ್ತಿದ್ದ ಕಬ್ಬಿಣದ ಕಂಬವು ಮೂರ್ನಾಲ್ಕು ಅಡಿಯಷ್ಟು ಹೊರಗೆ ಚಾಚಿಕೊಂಡಿತ್ತು. ಈ ವೇಳೆ ಕುಮಟಾ ನಿಲ್ದಾಣದಿಂದ ಗೋಕರ್ಣಕ್ಕೆ ಹೊರಟಿದ್ದ ಬಸ್ ಗೆ ರಾಮಲೀಲಾ ಆಸ್ಪತ್ರೆಯ ಬಳಿ ಬರುತ್ತಿದ್ದಂತೆ ಕಂಬ ಬಡಿದಿದೆ. ಇದರಿಂದಾಗಿ ಬಸ್ನ ಒಂದು ಬದಿಯ ಭಾಗ ನಜ್ಜುಗುಜ್ಜಾಗಿದೆ.
ಚಿತ್ರದುರ್ಗ: ಭೀಕರ ರಸ್ತೆ ಅಪಘಾತದಲ್ಲಿ ಮೂವರ ಸಾವು
ಆ ಭಾಗದಲ್ಲಿ ಕುಳಿತಿದ್ದ ಕುಮಟಾ ಹೊಸಕಟ್ಟಾದ ಶಶಿಕಲಾ ಹರಿಕಂತ್ರ (60), ಗೊನೆಹಳ್ಳಿಯ ವೆಂಕಟೇಶ ಗುನಗಾ (40) ಮೃತಪಟ್ಟಿದ್ದಾರೆ.
ಸಾರಿಗೆ ಬಸ್ ಚಾಲಕ ಪುಂಡಲೀಕ ಗೌಡ, ನಾಲ್ವರು ವಿದ್ಯಾರ್ಥಿಗಳು ಸೇರಿ ಗಾಯಗೊಂಡ 15ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಗಂಭೀರ ಗಾಯಗೊಂಡ 8 ಮಂದಿಯನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಉಳಿದವರನ್ನು ಕುಮಟಾದ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಕಬ್ಬಿಣದ ಕಂಬ ಸಾಗಿಸುತ್ತಿದ್ದ ಲಾರಿಗೆ ಅಪಾಯದ ಎಚ್ಚರಿಕೆಯ ಯಾವುದೇ ವಸ್ತುಗಳನ್ನು ಅಳವಡಿಸಿರಲಿಲ್ಲ. ಹೀಗಾಗಿ ಹಲವು ಚೆಕ್ ಪೋಸ್ಟ್ ಗಳನ್ನು ದಾಟಿ ಬಂದಿರುವ ಲಾರಿ ಬಗ್ಗೆ ಪೊಲೀಸರು ನಿರ್ಲಕ್ಷ್ಯ ತೋರಿದ್ದೇ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪೆಡೆಯುತ್ತಿರುವ 12 ಮಂದಿಗೆ ಸಾರಿಗೆ ಇಲಾಖೆ ತಲಾ 5 ಸಾವಿರ ತಾತ್ಕಾಲಿಕ ಪರಿಹಾರ ವಿತರಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಸಬ್ ಇನ್ ಸ್ಪೆಕ್ಟರ್ ಇ.ಸಿ.ಸಂಪತ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.