ಕಾರವಾರದ ಕಡಲ ತೀರದಲ್ಲಿಲ್ಲ ಪ್ರವಾಸಿಗಳ ಕಲರವ; ಇನ್ನೂ ಚೇತರಿಸಿಲ್ಲ ಪ್ರವಾಸೋದ್ಯಮ
ಕಾರವಾರ, ಸೆಪ್ಟೆಂಬರ್ 26: ಕೊರೊನಾ ಲಾಕ್ ಡೌನ್ ತೆರವಾಗಿ ಜನಜೀವನ ಯಥಾಸ್ಥಿತಿಗೆ ಮರಳಿದೆ. ಆದರೆ ಪ್ರವಾಸೋದ್ಯಮ ಚಟುವಟಿಕೆಗಳ ಮೇಲೆ ಮಾತ್ರ ಕೊರೊನಾ ದೊಡ್ಡ ಪರಿಣಾಮ ಬೀರಿದ್ದು, ಜಿಲ್ಲೆಯ ಪ್ರವಾಸಿ ತಾಣಗಳತ್ತ ಹೆಜ್ಜೆ ಇಡುವ ಪ್ರವಾಸಿಗರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರವಿದೆ.
ಸಾಮಾನ್ಯವಾಗಿ ಆಗಸ್ಟ್ ತಿಂಗಳ ನಂತರ ಜಿಲ್ಲೆಯ ಪ್ರವಾಸಿ ತಾಣಗಳತ್ತ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಮಳೆಗಾಲದಲ್ಲಿ ಜಲಪಾತಗಳು ತುಂಬಿ ತುಳುಕುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಜಲಪಾತಗಳ ವೀಕ್ಷಣೆಗೆ, ಜೊತೆಗೆ ಕಡಲತೀರ, ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿಯೇ ಪ್ರವಾಸಿಗರು ಜಿಲ್ಲೆಯತ್ತ ಹೆಜ್ಜೆ ಇಡುತ್ತಿದ್ದರು. ಆದರೆ ಈ ಬಾರಿ ಜನರಲ್ಲಿ ಇನ್ನೂ ಕೊರೊನಾ ಭೀತಿ ಹೋಗದೇ ಇರುವುದು ಪ್ರವಾಸಿ ತಾಣಗಳತ್ತ ಮುಖ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮುಂದೆ ಓದಿ...
ಇಲ್ಲಿ 20 ರೂ.ಗೆ ಒಂದು ಬಿಯರ್... ಆದ್ರೂ ಕೊಳ್ಳೋರೇ ಇಲ್ಲ!
ಇನ್ನೂ ಚೇತರಿಸಿಕೊಳ್ಳುತ್ತಿಲ್ಲ ಪ್ರವಾಸೋದ್ಯಮ
ಜಿಲ್ಲೆಯ ಎಲ್ಲಾ ಪ್ರವಾಸಿ ತಾಣದಲ್ಲಿ ಚಟುವಟಿಕೆಗಳು ಪ್ರಾರಂಭವಾದರೂ ಪ್ರವಾಸಿಗರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟಿದೆ. ಅಲ್ಲದೇ ಜಿಲ್ಲೆಯ ಪ್ರಮುಖ ಜಲಪಾತಗಳ ವೀಕ್ಷಣೆಗೂ ಬಹಳ ಕಡಿಮೆ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನೇ ನಂಬಿಕೊಂಡಿದ್ದಾರೆ ಸಾವಿರಾರು ಜನ. ಪ್ರವಾಸಿಗರು ಅಧಿಕವಾಗಿ ಬರುವ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿಯೇ ಕೊರೊನಾ ಕಾಲಿಟ್ಟಿದ್ದರಿಂದ ಪ್ರವಾಸೋದ್ಯಮ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗದೇ ಇರುವುದು ಜನರಲ್ಲಿ ಭೀತಿ ಹುಟ್ಟಿಸಿದೆ. ಇದೇ ಕಾರಣಕ್ಕೆ ಪ್ರವಾಸಿ ತಾಣಗಳತ್ತ ಮುಖ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ದೇವಸ್ಥಾನಗಳಿಗೆ ಬರುವವರ ಸಂಖ್ಯೆಯೂ ಕಡಿಮೆಯೇ
ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ, ಮುರುಡೇಶ್ವರ, ಇಡಗುಂಜಿ ಗಣಪತಿ, ಶಿರಸಿ ಮಾರಿಕಾಂಬ ಸೇರಿದಂತೆ ಪ್ರಮುಖ ದೇವಾಲಯಗಳ ಭೇಟಿಗಾಗಿಯೇ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು. ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಹಬ್ಬ ಹರಿದಿನಗಳು ಪ್ರಾರಂಭವಾಗುವುದರಿಂದ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಆದರೆ ಇದೀಗ ದೇವಾಲಯಗಳಿಗೂ ಬರುವವರ ಸಂಖ್ಯೆ ಕಡಿಮೆಯಾಗಿದೆ. ಲಾಕ್ ಡೌನ್ ಮುಗಿದ ನಂತರ ಉತ್ಸಾಹದಿಂದ ಪ್ರವಾಸಿ ತಾಣದಲ್ಲಿ ವ್ಯಾಪಾರಸ್ಥರು ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಿದ್ದರು. ಆದರೆ ಪ್ರವಾಸಿಗರ ಸಂಖ್ಯೆ ನಿರೀಕ್ಷೆ ಮಟ್ಟದಲ್ಲಿ ಇರದಿರುವುದು, ಹೋಟೆಲ್, ಲಾಡ್ಜ್, ರೆಸಾರ್ಟ್ ಸೇರಿದಂತೆ ಹಲವರಿಗೆ ಕೊರೊನಾ ನುಂಗಲಾರದ ತುತ್ತಾಗಿದೆ. ಹೀಗೇ ಮುಂದುವರೆದರೆ ಮುಂದೆ ಹೇಗೆ ನಮ್ಮ ಕಥೆ ಎನ್ನುವ ಆತಂಕ ವ್ಯಾಪಾರಿಗಳದ್ದು.
ಕಡಲ ತೀರಗಳಲ್ಲಿಲ್ಲ ಪ್ರವಾಸಿಗರ ಕಲರವ
ಜಿಲ್ಲಾ ಕೇಂದ್ರ ಕಾರವಾರದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದೆ. ಕಾರವಾರ ನಗರಕ್ಕೆ ಆಗಮಿಸುವ ಪ್ರವಾಸಿಗರನ್ನು ಇಲ್ಲಿನ ಟ್ಯಾಗೋರ್ ಕಡಲತೀರ ಕೈ ಬೀಸಿ ಕರೆಯುತ್ತಿತ್ತು. ಕಡಲತೀರಕ್ಕೆ ಬಂದವರು ತೀರ ಪ್ರದೇಶಕ್ಕೆ ಹೊಂದಿಕೊಂಡಿದ್ದ ಪ್ರವಾಸಿ ತಾಣಗಳಿಗೆ ಭೇಟಿ ನಿಡಿ ಎಂಜಾಯ್ ಮಾಡುತ್ತಿದ್ದರು.
ಆದರೆ ನಗರದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದೆ. ಕಡಲತೀರದಲ್ಲಿರುವ ಡ್ರೈವ್ ಇನ್ ಹೋಟೆಲ್ ಬಂದ್ ಆಗಿದ್ದು, ಇನ್ನೂ ಬಾಗಿಲು ತೆಗೆದಿಲ್ಲ.Recommended Video
ಅಕ್ಟೋಬರ್ ನಲ್ಲಾದರೂ ಸಿಗುತ್ತಾ ಅವಕಾಶ?
ಇದರ ಜೊತೆಗೆ ಜಲಸಾಹಸ ಕ್ರೀಡಾ ಚಟುವಟಿಕೆಯನ್ನು ಮತ್ತೆ ಪ್ರಾರಂಭಿಸಲು ಚಿಂತನೆ ನಡೆಸಿಲ್ಲ. ಹೆಚ್ಚಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಕಡಲ ತೀರದಲ್ಲಿ ಇರುವ ವಾರ್ ಶಿಪ್, ರಾಕ್ ಗಾರ್ಡನ್, ಕಾಳಿ ರಿವರ್ ಗಾರ್ಡನ್, ಮತ್ಸ್ಯಾಲಯ, ಸಾಲುಮರದ ತಿಮ್ಮಕ್ಕ ಉದ್ಯಾನವನ ಎಲ್ಲವೂ ಬಂದ್ ಆಗಿವೆ. ಇತ್ತ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹ ಈ ಚಟುವಟಿಕೆಯನ್ನು ಮತ್ತೆ ಪ್ರಾರಂಭಿಸಲು ಯಾವ ಉತ್ಸಾಹಕತೆ ತೋರಿಸುತ್ತಿಲ್ಲ. ಅಕ್ಟೋಬರ್ ವೇಳೆಯಲ್ಲಾದರೂ ಕಾರವಾರದ ಪ್ರವಾಸೋದ್ಯಮ ಚಟುವಟಿಕೆ ತೆರೆದುಕೊಳ್ಳುತ್ತದೆಯೇ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಸ್ಥಳೀಯರು.