ಭಟ್ಕಳದಲ್ಲಿ ಭಯ ಹುಟ್ಟಿಸಿದೆ ಕೊರೊನಾ; ಇಂದು ಮತ್ತೊಂದು ಕೇಸ್
ಕಾರವಾರ, ಮಾರ್ಚ್ 31: ದುಬೈನಿಂದ ಭಟ್ಕಳಕ್ಕೆ ಬಂದಿದ್ದ ಮತ್ತೊಬ್ಬ ಯುವಕನಲ್ಲೂ ಕೊರೊನಾ ಸೋಂಕು ಇರುವುದು ಇಂದು ದೃಢಪಟ್ಟಿದ್ದು, ಈ ಮೊದಲು ಕೊರೊನಾ ಸೋಂಕಿದ್ದ ಭಟ್ಕಳ ಮೂಲದ 22 ವರ್ಷದ ಯುವಕನ ಸಹೋದರ ಈತ ಎಂಬುದು ತಿಳಿದುಬಂದಿದೆ.
ಸೋದರರಿಬ್ಬರೂ ಜೊತೆಯಾಗಿ ಗೋವಾದ ದಾಬೋಲಿಯಮ್ ವಿಮಾನ ನಿಲ್ದಾಣದಿಂದ ಕಾರವಾರದ ಮೂಲಕ ಭಟ್ಕಳಕ್ಕೆ ಬಂದಿದ್ದರು. 26 ವರ್ಷ ವಯಸ್ಸಿನ ಈತ, ದುಬೈನಿಂದ 20ರಂದು ಸೋಂಕಿತ ಸಹೋದರನೊಂದಿಗೆ ಗೋವಾ ದಾಬೋಲಿಯಮ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಅಲ್ಲಿಂದ ಸಹೋದರನ ಜೊತೆಯಲ್ಲಿ ಹಾಗೂ ಓರ್ವ ಮಹಿಳೆ ಸೇರಿದಂತೆ ಇನ್ನಿತರ ಮೂವರ ಜೊತೆ ಇದ್ದ ಎಂಬುದು ತಿಳಿದುಬಂದಿದೆ.
ಈ ಐವರೂ ಕಾರವಾರದ ರತ್ನಾ ಸಾಗರ್ ಹೋಟೆಲ್ ನಲ್ಲಿ ಉಪಾಹಾರ ಸೇವಿಸಿ, ಕಾರಿನಲ್ಲಿ ಭಟ್ಕಳಕ್ಕೆ ತೆರಳಿದ್ದರು. ಸೋಂಕು ದೃಢಪಟ್ಟ ಯುವಕನು ಸಹೋದರನೊಂದಿಗೆ ಸಂಪರ್ಕ ಹೊಂದಿದ್ದನೆಂದು ಮುರುಡೇಶ್ವರದ ಆರ್ಎನ್ಎಸ್ ನಲ್ಲಿ ಆತನನ್ನು ಪ್ರತ್ಯೇಕಿಸಿಡಲಾಗಿತ್ತು. ಅನುಮಾನದ ಮೇಲೆ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಈ ಯುವಕನನ್ನೂ ಒಳಗೊಂಡಂತೆ ಭಟ್ಕಳ ಮೂಲದ ಒಟ್ಟು ಒಂಬತ್ತು (8+1 ಮಂಗಳೂರಿನಲ್ಲಿರುವಾತ) ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.