ಟೋಲ್ ಹೆಸರಿನಲ್ಲಿ ಹೆದ್ದಾರಿಯಲ್ಲಿ ಹಗಲು ದರೋಡೆ; ಕಣ್ಮುಚ್ಚಿ ಕುಳಿತ ಜನಪ್ರತಿನಿಧಿಗಳು
ಕಾರವಾರ, ಫೆಬ್ರವರಿ 25: ಜಿಲ್ಲೆಯ ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುವ ಸರ್ಕಾರಿ ಬಸ್ಸುಗಳಿಂದ ಟೋಲ್ ಹೆಸರಿನಲ್ಲಿ ಹಗಲು ದರೋಡೆ ನಡೆಸಲಾಗುತ್ತಿದೆ. ಆದರೆ, ಸಾರ್ವಜನಿಕರ ಜೇಬಿಗೆ ಅನವಶ್ಯಕವಾಗಿ ಕತ್ತರಿ ಬೀಳುತ್ತಿದ್ದರೂ ನ್ಯಾಯ ದೊರಕಿಸಿಕೊಡಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಸಿರುವ ಐ.ಆರ್.ಬಿ ಕಂಪನಿ ಫೆಬ್ರುವರಿ 13ರಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೋಲ್ ಸಂಗ್ರಹ ಪ್ರಾರಂಭಿಸಿದೆ. ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸದಿದ್ದರೂ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೆಕೇರಿ ಹಾಗೂ ಕುಮಟಾ ತಾಲೂಕಿನ ಹೊಳೆಗದ್ದೆ ಬಳಿ ಟೋಲ್ ಗೇಟ್ ಗಳಲ್ಲಿ ವಾಹನ ಸವಾರರಿಂದ ಶುಲ್ಕ ಸಂಗ್ರಹಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಿಂದಲೂ ಪ್ರತಿ ಟೋಲ್ ಗಳಲ್ಲಿ 300 ರೂಪಾಯಿ ಶುಲ್ಕ ಪಡೆಯುತ್ತಿರುವುದರಿಂದ, ಒಂದು ಟೋಲ್ ಗೇಟ್ ದಾಟುವ ಬಸ್ಸಿನ ಟಿಕೇಟ್ ದರ 9 ರೂಪಾಯಿ ಹೆಚ್ಚಾಗಿದೆ.
ಕಾರವಾರ; ಸರ್ಕಾರಿ ಬಸ್ಸಲ್ಲಿ ಹೋಗುವವರಿಗೂ ಟೋಲ್ ಹೊರೆ, ಇದು ಯಾವ ನ್ಯಾಯ?
ದೂರದ ಪ್ರದೇಶಕ್ಕೆ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ 9 ರೂಪಾಯಿ ಟೋಲ್ ಸಂಗ್ರಹಿಸಿದರೆ ಹೆಚ್ಚಿನ ಹೊರೆಯಾಗುವುದಿಲ್ಲ. ಆದರೆ, ಟೋಲ್ ದಾಟಿದರೆ ಶುಲ್ಕ ಕಟ್ಟಲೇಬೇಕಾಗಿರುವುದರಿಂದ ಟೋಲ್ ಹೆಸರಿನಲ್ಲಿ ಸ್ಥಳೀಯವಾಗಿ ಸಂಚರಿಸುವ ಪ್ರಯಾಣಿಕರಿಂದಲೂ 9 ರೂಪಾಯಿ ಹೆಚ್ಚುವರಿ ಕಟ್ಟಿಸಿಕೊಳ್ಳುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವೊಂದು ಹತ್ತಿರದ ಸ್ಟಾಪ್ ಗಳಲ್ಲಿ ಇಳಿಯುವ ಪ್ರಯಾಣಿಕರು ಬಸ್ಸಿನ ಟಿಕೆಟ್ ದರಕ್ಕಿಂತ ಹೆಚ್ಚಾಗಿ ಟೋಲ್ ಹಣವನ್ನೇ ಕಟ್ಟಿ ಸಾಗುವಂತಾಗಿದೆ.
ಬೇಲೆಕೇರಿ ಹಾಗೂ ಹೊಳೆಗದ್ದೆ ಟೋಲ್ ಗಳ ಸಮೀಪ ಹತ್ತಾರು ಗ್ರಾಮಗಳಿದ್ದು, ಪ್ರತಿನಿತ್ಯ ಸರ್ಕಾರಿ ಬಸ್ಸುಗಳಲ್ಲಿಯೇ ಹೆಚ್ಚಾಗಿ ಜನರು ಸಂಚರಿಸುತ್ತಾರೆ. ಬಸ್ಸಿನಲ್ಲಿ ಸಾಗುವಾಗ ಟೋಲ್ ದಾಟಿ ಸಾಗುವುದರಿಂದ ಸ್ಥಳೀಯರು 9 ರೂಪಾಯಿ ಹೆಚ್ಚುವರಿ ಹಣ ಕೊಟ್ಟು ಸಾಗುತ್ತಿದ್ದು, ಈಗಾಗಲೇ ಸಾಕಷ್ಟು ಹಣವನ್ನು ಪ್ರಯಾಣಿಕರಿಂದ ವಸೂಲಿ ಮಾಡಲಾಗಿದೆ. ಕುಮಟಾದಿಂದ ಹೊನ್ನಾವರದ ನಡುವೆ 19 ಕಿಲೋ ಮೀಟರ್ ಮಾತ್ರ ದೂರವಿದ್ದು, ಸದ್ಯ ಟೋಲ್ ಮಧ್ಯ ಬರುತ್ತಿರುವುದರಿಂದ ಪ್ರಯಾಣಿಕರಿಂದ 39 ರೂಪಾಯಿ ಟಿಕೆಟ್ ದರವನ್ನು ಪಡೆಯಲಾಗುತ್ತಿದೆ.
ನೈಸ್ ಕಂಪನಿಗೆ ಸೇರಿದ ಭೂಮಿ ವಶಕ್ಕೆ ಪಡೆಯಲಿದೆ ಸರ್ಕಾರ?
ಈ ಹಿಂದೆ 30 ರೂ. ಟಿಕೆಟ್ ದರವಿತ್ತು. ಟೋಲ್ ಹೆಸರಿನಲ್ಲಿ ಐಆರ್ ಬಿ ಕಂಪನಿಯ ಜನರಿಂದ ಹಣವನ್ನು ಬೇಕಾಬಿಟ್ಟಿ ವಸೂಲಿ ಮಾಡುತ್ತಿರುವುದಕ್ಕೆ ಇದೀಗ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.