ಕರ್ನಾಟಕ ಕರಾವಳಿಯಲ್ಲಿ ಮೂರು ಸೇನಾ ಪೂರ್ವ ತರಬೇತಿ ಶಾಲೆ ಆರಂಭ
ಕಾರವಾರ, ಜೂ28: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಗ್ನಿಪಥ್ ಯೋಜನೆ ಪರ-ವಿರೋಧವಾಗಿ ದೇಶದಲ್ಲಿ ಚರ್ಚೆಗಳು ನಡೆಯುತ್ತಿವೆ. ದೇಶದ ರಕ್ಷಣಾ ಪಡೆಗಳು ಯೋಜನೆ ಅನ್ವಯ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಿವೆ.
ಅಗ್ನಿಫಥ್ ಯೋಜನೆ ವಿರೋಧಿಸಿ ದೇಶದ ವಿವಿಧೆ ರಾಜ್ಯಗಳಲ್ಲಿ ಯುವಕರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಕರ್ನಾಟಕದ ಕರಾವಳಿ ಭಾಗದ ಯುವಕರು ಸೇನೆಗೆ ಸೇರಲು ಅನುಕೂಲವಾಗುವಂತೆ ತರಬೇತಿ ನೀಡಲು ಶಾಲೆ ಆರಂಭಿಸಲಾಗುತ್ತಿದೆ.
Breaking; ಸೇನಾ ಆಯ್ಕೆ ಪೂರ್ವ ತರಬೇತಿಗಾಗಿ 3 ಶಾಲೆ ಸ್ಥಾಪನೆ
ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೇನಾ ಪೂರ್ವ ತರಬೇತಿ ನೀಡಲು ಶಾಲೆಗಳನ್ನು ಆರಂಭಿಸುತ್ತಿದೆ. ಈ ಶಾಲೆಗಳಲ್ಲಿ ಉಚಿತವಾಗಿ ಯುವಕರಿಗೆ ತರಬೇತಿ ನೀಡಲಾಗುತ್ತದೆ.
ಕುಮಟಾ ಬೀಚ್ನಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಸಾವು
ಸ್ಥಳೀಯ ಸ್ವತಂತ್ರ ಹೋರಾಟಗಾರರ ಹೆಸರಿನಲ್ಲಿ ಶಾಲೆ
ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಅಗ್ನಿಪಥ್ ಯೋಜನೆ ಹಿನ್ನಲೆಯಲ್ಲಿ ಆಕಾಂಕ್ಷಿಗಳಿಗೆ ಸೇನಾ ಆಯ್ಕೆ ಪೂರ್ವ ತರಬೇತಿ ಸಲುವಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ತರಬೇತಿ ಶಾಲೆ ಆರಂಭಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂದಾಗಿದೆ. ಈ ಸಂಬಂಧ ಈಗಾಗಲೇ ಆದೇಶವನ್ನು ಹೊರಡಿಸಲಾಗಿದೆ. ಇನ್ನೊಂದು ತಿಂಗಳಲ್ಲೇ ಅನುಷ್ಠಾನ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕರಾವಳಿ ಜಿಲ್ಲೆಯ ಸ್ಥಳೀಯ ಸ್ವತಂತ್ರ ಹೋರಾಟಗಾರರ ಹೆಸರಿನಲ್ಲಿ ಶಾಲೆ ತೆರೆಯಲು ನಿರ್ಧಾರ ಮಾಡಿದ್ದು, ಉತ್ತರ ಕನ್ನಡ ಜಿಲ್ಲೆಯ ಬ್ರಿಟಿಷರ ವಿರುದ್ಧ ಹೋರಾಡಿದ ಹೆಂಜಾ ನಾಯ್ಕ, ಉಡುಪಿ ಜಿಲ್ಲೆಯ ಕೋಟಿ ಚನ್ನಯ್ಯ, ದಕ್ಷಿಣ ಕನ್ನಡ ಜಿಲ್ಲೆಯ ವೀರ ರಾಣಿ ಅಬ್ಬಕ್ಕ ಹೆಸರಿನಲ್ಲಿ ಸೈನಿಕ ತರಬೇತಿ ಶಾಲೆ ಇನ್ನೊಂದು ತಿಂಗಳಲ್ಲಿ ಪ್ರಾರಂಭವಾಗಲಿದೆ. ಸದ್ಯ ಈ ಶಾಲೆ ಪ್ರಾರಂಭಿಸಲು ಸೂಕ್ತ ಸ್ಥಳವನ್ನು ಶೋಧಿಸಲಾಗುತಿದೆ.
ನಿರುದ್ಯೋಗಿ ಯುವಕರಿಗೆ ಹೆಚ್ಚು ಅನುಕೂಲ: ಸಚಿವರು
"ರಾಜ್ಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸೇನೆ, ಇತರ ಸೇವೆಗಳಿಗೆ ಆಯ್ಕೆಯಾಗಲು ಪ್ರೋತ್ಸಾಹಿಸುವ ಸಲುವಾಗಿ ಈ ತರಬೇತಿ ಶಾಲೆಯನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ಭಾರತೀಯ ಸೇನೆ ಮತ್ತು ಇತರ ಯುನಿಫಾರ್ಮ್ ಸೇವೆಗಳಿಗೆ ಸೇರಬಯಸುವ ರಾಜ್ಯದ ಎಲ್ಲಾ ಜಿಲ್ಲೆಯ ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟ ಜಾತಿಯ ಅರ್ಹ ಅಭ್ಯರ್ಥಿಗಳು ಈ ಯೋಜನೆಯ ಭಾಗವಾಗಿದ್ದು ಇವರ ತರಬೇತಿಗೆ ತಗಲುವ ವೆಚ್ಚವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಭರಿಸಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರದಲ್ಲಿ ಶಾಲೆ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಇದರಿಂದ ಜಿಲ್ಲೆಯಲ್ಲಿರುವ ನಿರುದ್ಯೋಗಿ ಯುವಕರಿಗೆ ಹೆಚ್ಚು ಅನುಕೂಲವಾಗಲಿದೆ" ಎಂದು ಜಿಲ್ಲಾ ಉಸ್ತುವಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರಿನಿವಾಸ್ ಪೂಜಾರಿ ಹೇಳಿದ್ದಾರೆ.
ನಗರಸಭೆ ಉಪಾಧ್ಯಕ್ಷರ ಪ್ರತಿಕ್ರಿಯೆ
ಉತ್ತರ ಕನ್ನಡದಲ್ಲಿ ಸ್ಥಾಪನೆಯಾಗುವ ಶಾಲೆಗೆ ಸ್ವತಂತ್ರ ಹೋರಾಟಗಾರರ ಹೆಸರನ್ನು ಇಡುತ್ತಿದೆ. ಕಾರವಾರದ ಕೋಡಿಬಾಗ ಗ್ರಾಮದಲ್ಲಿ 1736ರಲ್ಲಿ ಜನಿಸಿದ ವೀರ ಯೋಧ ಹೆಂಜಾ ನಾಯ್ಕ ಹೆಸರನ್ನು ಇದೀಗ ಉತ್ತರಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸಲಾಗುತ್ತಿರುವ ಸೈನಿಕ ಪೂರ್ವ ತರಬೇತಿ ಶಾಲೆ ಇಡಲಾಗುತ್ತಿದೆ.
ಕತ್ತಿ ಕಾಳಗ, ಗನ್ ಗುರಿ, ಸಮರ ಕಲೆ, ಈಜಾಡುವ ಕಲೆ ಸೇರಿದಂತೆ ಯುದ್ಧ ನಿಪುಣರಾಗಿದ್ದ ಹೆಂಜಾ ನಾಯ್ಕ ಅವರಿಗೆ ಚಾಣಕ್ಯ ಪದವಿಯನ್ನು ಆ ಕಾಲದಲ್ಲಿಯೇ ನೀಡಲಾಗಿತ್ತು. ಆದರೆ, 1801ರಲ್ಲಿ ಬ್ರಿಟಿಷರು ಕೋಡಿಬಾಗ ಸದಾಶಿವಗಡದಲ್ಲಿ ಹೆಂಜಾ ನಾಯ್ಕರನ್ನು ಹೊಂಚುಹಾಕಿ ಕೊಂದಿದ್ದರು. ಇಂತಹ ಮಹನೀಯನ ಹೆಸರನ್ನು ಇದೀಗ ಸೈನಿಕ ಶಾಲೆಗೆ ಇಡಲು ಮುಂದಾಗಿರುವುದಕ್ಕೆ ಸ್ಥಳೀಯ ನಗರಸಭೆ ಉಪಾಧ್ಯಕ್ಷ ಹೆಂಜಾ ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗೆ ಅವಕಾಶ
ರಾಜ್ಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸೇನೆ, ಇತರ ಸೇವೆಗಳಿಗೆ ಆಯ್ಕೆಯಾಗಲು ಪ್ರೋತ್ಸಾಹಿಸುವ ಸಲುವಾಗಿ ತರಬೇತಿ ಶಾಲೆಯನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ಭಾರತೀಯ ಸೇನೆ ಮತ್ತು ಇತರ ಯುನಿಫಾರ್ಮ ಸೇವೆಗಳಿಗೆ ಸೇರಬಯಸುವ ರಾಜ್ಯದ ಎಲ್ಲಾ ಜಿಲ್ಲೆಯ ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟ ಜಾತಿಯ ಅರ್ಹ ಅಭ್ಯರ್ಥಿಗಳು ಈ ಯೋಜನೆಯ ಭಾಗವಾಗಿದ್ದು, ಸದ್ಯ ಕರಾವಳಿ ಜಿಲ್ಲೆಯಲ್ಲಿ ನೌಕಾದಳದ ಕೇಂದ್ರಗಳಿವೆ, ಬಂದರು ಸೇರಿದಂತೆ ಸೈನಿಕರಿಗೆ ತರಬೇತಿಗೆ ಬೇಕಾದ ಎಲ್ಲಾ ವಾತಾವರಣಗಳಿವೆ. ಹಿಂದುಳಿದ ಜಲ್ಲೆಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಗೆ ಈ ಮೂಲಕವಾದರೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಯೋಜನೆಗಳಲ್ಲಿ ಅವಕಾಶ ಮಾಡಿಕೊಟ್ಟಿರುವುದು ಕರಾವಳಿಗರ ಮೆಚ್ಚುಗೆಗೆ ಪಾತ್ರವಾಗಿದೆ.