ನೌಕಾನೆಲೆ ನೋಡಲು ಬಂದರು ಸಾವಿರಾರು ಜನರು
ಕಾರವಾರ, ಜುಲೈ 20: ಇಲ್ಲಿನ ಅರಗಾ ಸೀಬರ್ಡ್ ನೌಕಾನೆಲೆಯು ಸಾರ್ವಜನಿಕರ ವೀಕ್ಷಣೆಗಾಗಿ ಶನಿವಾರ ಮುಕ್ತವಾಗಿತ್ತು. ಸಹಸ್ರಾರು ಜನರು ಭಾರತೀಯ ನೌಕಾಪಡೆಯ ಯುದ್ಧ ನೌಕೆಗಳನ್ನು ಕಣ್ತುಂಬಿಕೊಂಡರು.
ಜುಲೈ 26ರ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ನೌಕಾನೆಲೆ ಪ್ರವೇಶಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡಿದರು. ಏಕೈಕ ಯುದ್ಧ ವಿಮಾನ ವಾಹಕ ನೌಕೆ 'ಐಎನ್ ಎಸ್ ವಿಕ್ರಮಾದಿತ್ಯ' ಹಾಗೂ 'ಐಎನ್ಎಸ್ ಸುವರ್ಣ'ದ ಒಳಗೆ ಈ ವೇಳೆ ಜನರಿಗೆ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.
ಕಾರ್ಗಿಲ್ ವಿಜಯ ದಿವಸ್; ಕಾರವಾರದ ಕದಂಬ ನೌಕಾನೆಲೆ ವೀಕ್ಷಣೆಗೆ ನಾಳೆ ಮುಕ್ತ ಅವಕಾಶ
ವಿವಿಧ ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳೂ ನೌಕಾನೆಲೆಗೆ ಭೇಟಿ ನೀಡಿದ್ದರು. ವೀಕ್ಷಣೆಗೆ ಬಂದವರಿಗೆ ನೌಕಾನೆಲೆಯ ಅಧಿಕಾರಿಗಳು ಯುದ್ಧದ ಸಂದರ್ಭದಲ್ಲಿ ಈ ನೌಕೆ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ವಿವರಿಸಿದರು. ಅದರ ಸಾಮರ್ಥ್ಯ, ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ನೌಕಾಸೇನೆಯ ಪಾತ್ರಗಳ ಬಗ್ಗೆಯೂ ಮಾಹಿತಿ ನೀಡಿದರು.
ಕರ್ನಾಟಕದ ಏಕೈಕ ನೌಕಾನೆಲೆ ಐಎನ್ಎಸ್ ಕದಂಬದಲ್ಲಿ ಸ್ಟೇಟ್-1 ಅಲರ್ಟ್ ಘೋಷಣೆ
'ವಿಕ್ರಮಾದಿತ್ಯ ನೌಕೆ ಕುರಿತು ಟಿ.ವಿ, ಪತ್ರಿಕೆಗಳಲ್ಲಿ ನೋಡಿದ್ದೆವು. ಇದೀಗ ನೇರವಾಗಿ ನೋಡಲು ಅವಕಾಶ ಕಲ್ಪಿಸಿಕೊಟ್ಟಿದ್ದು ಖುಷಿ ತಂದಿದೆ. ನೌಕಾಸೇನೆಯ ಕಾರ್ಯವೈಖರಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದೆವು' ಎಂದು ನೌಕೆ ವೀಕ್ಷಿಸಿದ ಮಾನಸ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.