ಕಾರವಾರ; ನಿಸರ್ಗ ರಂಗಕರ್ಮಿ, ಪತ್ರಕರ್ತ ಕೆ.ಆರ್.ಪ್ರಕಾಶ ನಿಧನ
ಕಾರವಾರ, ನವೆಂಬರ್ 19: ಜಿಲ್ಲೆಯ ಖ್ಯಾತ ರಂಗಕರ್ಮಿ, ಪತ್ರಕರ್ತ ಹಾಗೂ ರಾಜ್ಯ ನಾಟಕ ಅಕಾಡೆಮಿ ಸದಸ್ಯರಾಗಿದ್ದ ಕೆ.ಆರ್.ಪ್ರಕಾಶ (50) ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಕಳೆದ ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಯಲ್ಲಾಪುರ ತಾಲೂಕಿನ ಹೆಮ್ಮಾಡಿ ಬಳಿಯ ಕಾನಕೊಡ್ಲು ಮೂಲದ ಅವರು, ಓರ್ವ ತಮ್ಮ, ತಂದೆ- ತಾಯಿ, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಅಕ್ಷರ ಗಾರುಡಿಗ, ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನ
ಮೂರು ದಶಕಗಳಿಗೂ ಅಧಿಕ ಕಾಲ ತಮ್ಮ ಕ್ರಿಯಾಶೀಲ ವ್ಯಕ್ತಿತ್ವದ ಮೂಲಕ ಜಿಲ್ಲೆಯ ನದಿ ದಡದಲ್ಲಿ, ಪ್ರಪಾತದಲ್ಲಿ, ಕೆರೆಯ ಅಂಚಿನಲ್ಲಿ, ಮರದ ನೆರಳಲ್ಲಿ, ಸಮುದ್ರ ತೀರದಲ್ಲಿ ನಾಟಕ ಪ್ರಯೋಗ ಮಾಡುವುದರ ಮೂಲಕ ಹೊಸತನದ ರಂಗಕರ್ಮಿ ಎನಿಸಿದ್ದರು. ಹಲವು ನಾಟಕ ಕೃತಿಗಳನ್ನು ಬರೆದಿದ್ದ ಅವರಿಗೆ, ಪತ್ರಿಕೋದ್ಯಮದಲ್ಲಿನ ಸೇವೆಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಕೂಡ ಸಂದಿತ್ತು. ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಸಂಯುಕ್ತ ಕರ್ನಾಟಕದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಕೆ.ಆರ್.ಪ್ರಕಾಶ ಪ್ರಸ್ತುತ ಕರ್ನಾಟಕ ನಾಟಕ ಅಕಾಡಮಿಯ ಸದಸ್ಯರಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ರಂಗಭೂಮಿಯ ಗೀಳು ಹತ್ತಿಸಿಕೊಂಡಿದ್ದ ಪ್ರಕಾಶ್ ಉತ್ತಮ ನಟರಾಗಿದ್ದರು. ಅವರದೇ ಆದ ವಿಶಿಷ್ಟ ಶೈಲಿಯಲ್ಲಿ ನಾಟಕಗಳನ್ನು ಕಟ್ಟುತ್ತಿದ್ದರು. ಮುಖ್ಯವಾಗಿ ಹಳ್ಳಿಗಳ ತಂಡಗಳ ಜೊತೆ ನಾಟಕವಾಡುತ್ತ ಶಿರಸಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ರಂಗಾಸಕ್ತಿ ಬೆಳೆಯಲು ಕಾರಣರಾಗಿದ್ದರು.
ಬಳ್ಳಾರಿ: ಹಿರಿಯ ಪತ್ರಕರ್ತ ಶ್ಯಾಮಸುಂದರ್ ನಿಧನ; ಹಲವರಿಂದ ಸಂತಾಪ
'ಪ್ರಕೃತಿ ರಂಗಭೂಮಿ'ಯಲ್ಲಿ ಹಲವಾರು ಸಾಹಸಗಳನ್ನು ಮಾಡಿದ್ದ ಇವರು ಪ್ರತಿ ವರ್ಷ ತಮ್ಮದೇ ಹೆಸರಿನಲ್ಲಿ ರಂಗ ಪ್ರಶಸ್ತಿಯನ್ನೂ ಕೊಡುತ್ತಿದ್ದರು. ರಂಗಭೂಮಿಯ ಅನೇಕ ಹಿರಿಯರು ಪ್ರಶಸ್ತಿ ಸ್ವೀಕರಿಸಿದ್ದರು. ಶಿರಸಿಯ 'ರಂಗಸಂಗ'ಕ್ಕಾಗಿಯೂ ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದರು. ಇನ್ನೂ ಹಲವು ವರ್ಷ ರಂಗಕಾಯಕ ಮಾಡಬಹುದಾಗಿದ್ದ ಪ್ರಕಾಶ್ ಅನಾರೋಗ್ಯದಿಂದ ಹಠಾತ್ ನಿರ್ಗಮಿಸಿದ್ದಾರೆ.
Recommended Video
ಪ್ರಕಾಶರ ಸಾವಿಗೆ ಶಿವಾನಂದ ಕಳವೆ ಸೇರಿದಂತೆ ಅವರ ಹಲವಾರು ಒಡನಾಡಿಗಳು ಕಂಬನಿ ಮಿಡಿದಿದ್ದಾರೆ.