ಸ್ವಾತಂತ್ರ್ಯ ಪಡೆದ ದಿನವೇ ನೆಟ್ಟಿದ್ದ ಅಶ್ವತ್ಥ ವೃಕ್ಷ : ವಿಶ್ರಾಂತಿ ತಾಣವಾಗಿದೆ ಹೆಮ್ಮರ!
ಕಾರವಾರ, ಆಗಸ್ಟ್ 14: ಎಲ್ಲೆಡೆ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮುಗಿಲುಮುಟ್ಟಿದೆ. ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟು, ಹೋರಾಡಿದ ಹೋರಾಟಗಾರರನ್ನು ಸನ್ಮಾನಿಸಿ ಅವರ ಹೋರಾಟಗಳನ್ನು ಸ್ಮರಣೆ ಮಾಡಲಾಗುತ್ತಿದೆ.
ಅದರಂತೆ ಕಾರವಾರದ ಸುಂಕೇರಿಯ ಸ್ವಾತಂತ್ರ್ಯ ಹೋರಾಟಗಾರ ದಿ. ಹನುಮಂತರಾವ್ ಮಾಂಜ್ರೇಕರ್ ಸೇರಿದಂತೆ ಹಲವರು ಸೇರಿ ಸ್ವಾತಂತ್ರ್ಯ ಸಿಕ್ಕ ಸವಿ ನೆನಪಿಗೆ ಆಗಸ್ಟ್ 14 ರಂದು ಮಧ್ಯರಾತ್ರಿ ನೆಟ್ಟ ಅಶ್ವತ್ಥ ವೃಕ್ಷವೊಂದು ಇದೀಗ ಬೃಹದಾಕಾರವಾಗಿ ಬೆಳೆದು ಸುತ್ತಮುತ್ತಲಿನ ಜನರಿಗೆ ವಿಶ್ರಾಂತಿ ತಾಣವಾಗಿದೆ.
ಕಾಮಗಾರಿ ಮುಗಿಸಿದ ಬಳಿಕ ಟೆಂಡರ್ ಕರೆದ ಕಾರವಾರ ನಗರಸಭೆ: ಅವ್ಯವಹಾರದ ಶಂಕೆ
ಸ್ವಾತಂತ್ರ್ಯಹೋರಾಟದಲ್ಲಿ ದೇಶಾಭಿಮಾನ ಮೆರೆದಿದ್ದ ಉತ್ತರ ಕನ್ನಡದ ಜನ ಜಿಲ್ಲೆಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಕರಬಂಧಿ ಚಳುವಳಿ, ಚಲೇಜಾವ್ ಚಳುವಳಿ ಸೇರಿದಂತೆ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಅದರಂತೆ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದವರ ಪೈಕಿ ಕಾರವಾರದ ಸುಂಕೇರಿಯ ದಿ. ಹನುಮಂತರಾವ್ ಮಾಂಜ್ರೇಕರ್ ಕೂಡ ಒಬ್ಬರು.
ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದ ಅವರು ಸ್ವಾತಂತ್ರ್ಯ ಸಿಕ್ಕ ಹಿನ್ನೆಲೆಯಲ್ಲಿ ಆಗಸ್ಟ್ 14ರ ರಾತ್ರಿಯೇ ಕಾರವಾರದಲ್ಲಿ ಬೃಹತ್ ಗಾತ್ರದ ಪಟಾಕಿ ಸಿಡಿಸಲಾಗಿತ್ತು. ಈ ಮೂಲಕ ಸ್ವಾತಂತ್ರ್ಯಗೊಂಡಿರುವುದನ್ನು ತಿಳಿದುಕೊಂಡು ದಿ. ಹನುಮಂತರಾವ್ ಮಾಂಜ್ರೇಕರ್, ಗೋವಿಂದರಾವ್ ಮಾಂಜ್ರೇಕರ್ ಸೇರಿದಂತೆ ನಾವೆಲ್ಲರೂ ಸೇರಿ ನಮ್ಮದೇ ಜಾಗದಲ್ಲಿ ಸ್ವಾತಂತ್ರ್ಯೋತ್ಸವದ ಸವಿ ನೆನಪಿಗಾಗಿ ಅಶ್ವತ್ಥ ವೃಕ್ಷವನ್ನು ನೆಟ್ಟಿದ್ದೆವು. ಅದು ಇದೀಗ ದೊಡ್ಡದಾಗಿದೆ ಎಂದು ಹನುಮಂತರಾವ್ ಹಿರಿಯ ಮಗ ನಿವೃತ್ತ ಶಿಕ್ಷಕ ಕಮಲಾಕ್ಷ ಮಾಂಜ್ರೇಕರ್ ತಿಳಿಸಿದ್ದಾರೆ.
ಇನ್ನು ಈ ವೃಕ್ಷ ಇದೀಗ ಬೃಹದಾಕಾರವಾಗಿ ಬೆಳೆದಿದ್ದು, ಸುತ್ತಮುತ್ತಲಿನ ಜನರಿಗೆ ನೆರಳಾಗಿದೆ. ಮಾತ್ರವಲ್ಲದೆ ಜನರು ವಿಶ್ರಾಂತಿ ಪಡೆಯುತ್ತಿದ್ದ ಕಾರಣ ಕಳೆದ ಕೆಲ ವರ್ಷದ ಹಿಂದೆ ವಿಶ್ರಾಂತಿಗಾಗಿ ಕಟ್ಟಡ ಕೂಡ ನಿರ್ಮಿಸಲಾಗಿದೆ. ಅದೆಲ್ಲದಕ್ಕೂ ಹೆಚ್ಚಾಗಿ ಸ್ವಾತಂತ್ರ್ಯ ಸಿಕ್ಕ ಸವಿನೆನಪಿಗಾಗಿ ನೆಟ್ಟ ವೃಕ್ಷ ಇದೀಗ ದೊಡ್ಡ ಮರವಾಗಿ ನೆರಳಾಗಿರುವುದು ಖುಷಿ ತಂದಿದೆ ಎನ್ನುತ್ತಾರೆ ದಿ. ಹನುಮಂತರಾವ್ ಇನ್ನೋರ್ವ ಮಗ ಶ್ರೀರಂಗ ಮಂಜ್ರೇಕರ್.
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಹನುಮಂತರಾವ್ ಮಾಂಜ್ರೇಕರ್ ಗಾಂಧೀಜಿ ಅನುಯಾಯಿಯಾಗಿದ್ದರು. ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ, ಖಾದಿ ಪ್ರಸಾರದಲ್ಲಿ ಪಾಲ್ಗೊಂಡಿದ್ದ ಅವರು, 1930ರ ವೇಳೆ 15 ತಿಂಗಳ ಜೈಲು ಶಿಕ್ಷೆಗೂ ಗುರಿಯಾಗಿದ್ದ ಅವರು ಅಪ್ರತಿಮ ದೇಶಭಕ್ತಿ ಮೈಗೂಡಿಸಿಕೊಂಡಿದ್ದರು. ಸ್ವಾತಂತ್ರ್ಯ ನಂತರ ಕೆಲವು ಕಾಲ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದರು. ಸಂಯುಕ್ತ ಕರ್ನಾಟಕದಲ್ಲಿಯೂ ಕೆಲ ಸಮಯ ಬಿಡಿ ವರದಿಗಾರರಾಗಿದ್ದರು.
1925ರಲ್ಲಿ ರಹೀಂ ಖಾನ್ ಯುನಿಟಿ ಹೈಸ್ಕೂಲ್ ಸ್ಥಾಪಿಸುವಲ್ಲಿ ಹನಮಂತರಾವ್ ಪ್ರಮುಖ ಪಾತ್ರವಹಿಸಿದ್ದರು. ಮದ್ಯ ನಿಷೇಧ ಪ್ರಚಾರಾಧಿಕಾರಿ ಹಾಗೂ ಕಾರಾವಾರದ ಜಿಲ್ಲಾ ವಾರ್ತಾಧಿಕಾರಿಯಾಗಿಯೂ ಕಾರ್ಯ ನಿರ್ಹಹಿಸಿದ್ದಾರೆ.