ಕುಗ್ರಾಮದಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ, ಗ್ರಾಮಸ್ಥರಲ್ಲಿ ಸಂತಸ
ಕಾರವಾರ, ಜನವರಿ 05: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೇದಿನಿ ಎಂಬ ಕುಗ್ರಾಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಸೇರಿದಂತೆ ಜಿಲ್ಲಾಡಳಿತವೇ ವಾಸ್ತವ್ಯ ಹೂಡಿದ್ದು, ಗ್ರಾಮಸ್ಥರಲ್ಲಿ ಸಂತಸದ ಜೊತೆಗೆ ಭರವಸೆ ಮೂಡಿದೆ.
ಆ ಗ್ರಾಮದ ಜನರು ಇಷ್ಟು ವರ್ಷಗಳ ಕಾಲ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದರು. ಹೀಗಾಗಿ ಕುಗ್ರಾಮವೆಂದೇ ಕರೆಯಿಸಿಕೊಳ್ಳುತ್ತಿದ್ದ ಈ ಗ್ರಾಮಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಹೋಗುವುದೂ ಅಪರೂಪದಲ್ಲಿ ಅಪರೂಪವಾಗಿತ್ತು.
ಯಲ್ಲಾಪುರದಲ್ಲಿ ದಾಳಿಂಬೆ ತುಂಬಿಕೊಂಡಿದ್ದ ಲಾರಿ ಪಲ್ಟಿ; ಹಣ್ಣಿಗೆ ಮುಗಿಬಿದ್ದ ಜನ
ಗ್ರಾಮಸ್ಥರೇ ಹಲವು ಬಾರಿ ಮೂಲ ಸೌಕರ್ಯ ಒದಗಿಸುವಂತೆ ನೂರಾರು ಕಿ.ಮೀ. ದೂರದ ತಾಲೂಕು ಅಥವಾ ಜಿಲ್ಲಾ ಕೇಂದ್ರಕ್ಕೆ ತೆರಳಿ ಮನವಿ ಮಾಡಿದರೂ ಸ್ಪಂದನೆ ಬಾರದ ಕಾರಣ ಇತ್ತೀಚಿನ ವರ್ಷಗಳಲ್ಲಿ ಮನವಿ ಮಾಡುವುದನ್ನೂ ಬಿಟ್ಟಿದ್ದರು. ಆದರೆ, ಶನಿವಾರ ಇಡೀ ಜಿಲ್ಲಾಡಳಿತದ ಅಧಿಕಾರಿಗಳೇ ಗ್ರಾಮಸ್ಥರ ಕುಂದು-ಕೊರತೆ ಹಾಗೂ ಅಹವಾಲು ಸ್ವೀಕರಿಸಲು ಕುಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಮೊಗದಲ್ಲಿ ಭರವಸೆಯ ನಗು ತರಿಸಿದರು.
ಸಫಾರಿ ವಾಹನ ಬಿಟ್ಟು ಬೇರೆ ವಾಹನ ಹೋಗುವುದಿಲ್ಲ
ಇದು ಕಂಡುಬಂದಿದ್ದು ಕುಮಟಾ ತಾಲೂಕಿನಿಂದ ಸುಮಾರು 45 ಕಿ.ಮೀ. ದೂರ ಸಾಗಿದರೆ ಗುಡ್ಡಕ್ಕೆ ಹೋಗಲು ಮಣ್ಣಿನ ಕಾಲುದಾರಿಯೊಂದು ಕಾಣಿಸಲಿದೆ. ಈ ಕಾಲುದಾರಿ ಹಿಡಿದು ಎಂಟು ಕಿ.ಮೀ. ಸಾಗಿದರೆ ಸಿಗುವ ಗ್ರಾಮವೇ ಮೇದಿನಿ. ಈ ಎಂಟು ಕಿ.ಮೀ. ದೋಮಿ ಹತ್ತುವುದು ಅಷ್ಟೇನೂ ಸುಲಭದ ಮಾತಲ್ಲ.
ಈ ಪ್ರದೇಶದಲ್ಲಿ ಸಫಾರಿ ವಾಹನಗಳನ್ನು ಬಿಟ್ಟರೆ ಬೇರಾವ ವಾಹನಗಳೂ ಇಲ್ಲಿ ಜನರನ್ನು ಕೊಂಡೊಯ್ಯಲಾರದು. ಇಂಥ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದ ಮೇದಿನಿ ಗ್ರಾಮದ ಗ್ರಾಮಸ್ಥರ ಅಹವಾಲು ಸ್ವೀಕರಿಸಲು ಯೋಜನೆ ರೂಪಿಸಿದ್ದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ.
ವಾಸ್ತವ್ಯದಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ
ವಾರ್ತಾ ಇಲಾಖೆಯ ವಾಸ್ತವ್ಯ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಷನ್ ಸೇರಿದಂತೆ ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು ಗ್ರಾಮದಲ್ಲಿ ಒಂದು ರಾತ್ರಿ ವಾಸ್ತವ್ಯವಿದ್ದು, ಗ್ರಾಮಸ್ಥರ ಕುಂದು- ಕೊರತೆಗಳನ್ನು ಆಲಿಸಿದರು.
ಶಿರಸಿ ಮಾರಿಕಾಂಬ ಜಾತ್ರೆ ಘೋಷಣೆ ಬೆನ್ನಲ್ಲೇ ದೇಗುಲ ಅಧ್ಯಕ್ಷರ ಮನೆ ಮುಂದೆ ಮಾಟ
ಜಿಲ್ಲಾಧಿಕಾರಿಗೆ ಡೋಲು, ಕುಣಿತದ ಸ್ವಾಗತ:
ಮೇದಿನಿ ಗ್ರಾಮವು ಸಮುದ್ರ ಮಟ್ಟದಿಂದ ಸುಮಾರು 2,000 ಅಡಿ ಎತ್ತರದಲ್ಲಿದೆ. ಸುತ್ತಲೂ ದಟ್ಟ ಕಾಡು. ಹೀಗಾಗಿ ಸೂರ್ಯ ನೆತ್ತಿಯ ಮೇಲೆ ಬಂದಾಗಲೇ ಗ್ರಾಮದಲ್ಲಿ ಬೆಳಕು ಬೀಳುವುದು. ಇಲ್ಲಿ ಚಳಿ ಹೆಚ್ಚಾಗಿರುತ್ತದೆ. ಸುಮಾರು 60 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, ಜಿಲ್ಲಾಧಿಕಾರಿ ಬರುತ್ತಾರೆಂಬ ಸುದ್ದಿ ತಿಳಿದು ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
ಶಾಲೆಯಲ್ಲಿಯೇ ನಿದ್ರಿಸಿದ ಅಧಿಕಾರಿಗಳು
ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಶನಿವಾರ ಸಂಜೆ ಹೊತ್ತಿಗೆ ಗ್ರಾಮಕ್ಕೆ ಬಂದರು. ಗ್ರಾಮದ ಪ್ರವೇಶ ದ್ವಾರದಲ್ಲೇ ಅವರನ್ನು ತಡೆದ ಗ್ರಾಮಸ್ಥರು, ಆರತಿ ಬೆಳಗಿದರು. ಡೋಲು ಕುಣಿತದ ಮೂಲಕ ಅವರನ್ನು ಗ್ರಾಮದ ಒಳಗೆ ಬರಮಾಡಿಕೊಳ್ಳಲಾಯಿತು.
ರಾತ್ರಿಯ ಹೊತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಾಂಪ್ರದಾಯಿಕ ಡಮಾಮಿ ನೃತ್ಯ, ಗೊಂಬೆಯಾಟಗಳನ್ನು ಹಮ್ಮಿಕೊಳ್ಳಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಅಧಿಕಾರಿಗಳ ಎದುರು ತಮ್ಮ ಅಹವಾಲುಗಳನ್ನಿಟ್ಟರು.
ನಂತರದಲ್ಲಿ ರಾತ್ರಿ ನಡುಗುವ ಚಳಿಯಲ್ಲೂ ಗ್ರಾಮಸ್ಥರೊಂದಿಗೆ ಅಧಿಕಾರಿಗಳು ಚರ್ಚೆ ನಡೆಸಿದರು. ಗ್ರಾಮದ ಶಾಲೆಯಲ್ಲೇ ನಿದ್ರಿಸಿ, ಮುಂಜಾನೆ ಗ್ರಾಮದಿಂದ ಮತ್ತೆ ನಾಲ್ಕು ಕಿ.ಮೀ. ದೂರದಲ್ಲಿರುವ ಕೋಟೆ ವೀಕ್ಷಿಸಿ ಭಾನುವಾರ ಬೆಳಿಗ್ಗೆ ಕಾರವಾರಕ್ಕೆ ವಾಪಸಾದರು.
ಸಣ್ಣಕ್ಕಿ ವಿಶೇಷ ಪರಿಮಳ ಹೊಂದಿದೆ
ಹಿಂದುಳಿದ ಹಾಗೂ ಭೌಗೋಳಿಕವಾಗಿ ಅತಿ ಎತ್ತರದ ಪ್ರದೇಶದಲ್ಲಿರುವ ಮೇದಿನಿಯಲ್ಲಿ ಬೆಳೆಯುವ ವಿಶೇಷ ಪರಿಮಳದ ಸಣ್ಣಕ್ಕಿ ವಿಶೇಷವಾಗಿದೆ. ಯಾವುದೇ ಮಿಶ್ರ ತಳಿಯಲ್ಲದ ತನ್ನ ಅಪ್ಪಟ ಸಹಜತೆಯಿಂದಾಗಿಯೇ ಮೇದಿನಿ ಸಣ್ಣಕ್ಕಿ ವಿಶೇಷ ಪರಿಮಳ ಹೊಂದಿದೆ. ಮೇದಿನಿ ಸಣ್ಣಕ್ಕಿಯ ಪಾಯಸ, ಕೇಸರಿಬಾತ್ ಗೆ ತನ್ನದೇ ವಿಶಿಷ್ಟ ರುಚಿ, ಪರಿಮಳ ಇರುತ್ತದೆ. ವಿಶೇಷ ಅಡುಗೆ ಸಂದರ್ಭದಲ್ಲಿ ಅನ್ನ ಮಾಡುವಾಗ ಒಂದು ಮುಷ್ಠಿ ಮೇದಿನಿ ಸಣ್ಣಕ್ಕಿಯನ್ನು ಬೆರೆಸಿದರೆ ಎಲ್ಲ ಅನ್ನಕ್ಕೆ ವಿಶೇಷ ಪರಿಮಳ ಬರುತ್ತದೆ. ಇದು ಮೇದಿನಿ ಸಣ್ಣಕ್ಕಿ ವಿಶೇಷತೆ.