ಸಚಿವ ಶಿವರಾಮ್ ಹೆಬ್ಬಾರ್ ಸ್ವಕ್ಷೇತ್ರದಲ್ಲಿಯೇ ಬಿಜೆಪಿ ಒಡಕು...?
ಕಾರವಾರ, ಫೆಬ್ರವರಿ 16: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮದನೂರು ಗ್ರಾಮ ಪಂಚಾಯತಿಯ ದನಗರ ಗೌಳಿ ಸಮುದಾಯದ ಸದಸ್ಯನೋರ್ವನ ಮೇಲಿನ ಹಲ್ಲೆ ಪ್ರಕರಣ ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡಿದೆ. ಇನ್ನು ಇದೇ ಪ್ರಕರಣ ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸ್ವಕ್ಷೇತ್ರದ ಬಿಜೆಪಿ ಪಕ್ಷದಲ್ಲಿ ಬಿರುಕು ಮೂಡಲು ಕಾರಣವಾಗಿದೆ ಎನ್ನುವ ಮಾತು ಕೇಳಿ ಬಂದಿದೆ.
ಮದನೂರು ಗ್ರಾಮ ಪಂಚಾಯತಿ ಸದಸ್ಯ ಹಾಗೂ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಯಾದ ದನಗರ ಗೌಳಿ ಸಮುದಾಯದ ವಿಠು ಶಿಳ್ಕೆ ಹಾಗೂ ಆತನ ಜೊತೆ ಇದ್ದ ಕೆಲವರ ಮೇಲೆ ಧಾರವಾಡ ಜಿಲ್ಲೆಯ ಕಲಘಟಗಿ ಹೋಟೆಲೋಂದರಲ್ಲಿ ಹಲ್ಲೆ ಮಾಡಲಾಗಿತ್ತು. ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಸಚಿವರ ಆಪ್ತರಾಗಿರುವ ಕಿರುವತ್ತಿಯ ವಿಜಯ್ ಮಿರಾಶಿ ತನ್ನ ಬೆಂಬಲಿಗರನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆಂದು ನೇರವಾಗಿ ಆರೋಪಿಸಲಾಗಿತ್ತು.
ಗ್ರಾ.ಪಂ ಸದಸ್ಯನ ಮೇಲೆ ಹಲ್ಲೆ ಪ್ರಕರಣ; ಗೌಳಿ ಸಮುದಾಯದಿಂದ ಬೃಹತ್ ಪ್ರತಿಭಟನೆ
ಇನ್ನು ಇದೇ ಘಟನೆ ಬಿಜೆಪಿಯಲ್ಲಿ ಎರಡು ಗುಂಪಾಗಲು ಕಾರಣವಾಗಿದೆ. ವಿಜಯ್ ಮಿರಾಶಿ ಮೇಲಿದ್ದ ಸಿಟ್ಟಿಗೆ ಸಚಿವರ ವಿರುದ್ಧವೇ ಕೆಲ ಬಿಜೆಪಿಗರು ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ. ಹಲ್ಲೆ ಮಾಡಿಸಿದ್ದಾರೆ ಎನ್ನುವ ಆರೋಪವಿರುವ ವಿಜಯ್ ಮಿರಾಶಿ ಬಿಜೆಪಿಯ ಮುಖಂಡನಾಗಿದ್ದು, ಜೊತೆಗೆ ಹೆಬ್ಬಾರ್ ಆಪ್ತ ಬಳಗದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಹಲ್ಲೆ ಮಾಡಿದ ದಿನವೇ ಬಿಜೆಪಿ ನಾಯಕರು ಮಿರಾಶಿ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಅಲ್ಲದೇ ಸೋಮವಾರ ಸಹ ದನಗರ ಗೌಳಿ ಸಮುದಾಯದ ವತಿಯಿಂದ ವಿಜಯ್ ಮಿರಾಶಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು, ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್ ಪಾಟೀಲ್ ಸೇರಿದಂತೆ ಹಲವು ಬಿಜೆಪಿ ಮುಖಂಡರುಗಳೇ ಪ್ರತಿಭಟನೆ ನಡೆಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ನಾಯಕನ ವಿರುದ್ಧ ಬಿಜೆಪಿ ನಾಯಕರೇ ಪ್ರತಿಭಟನೆ ನಡೆಸುವಂತಾಗುತ್ತಿದ್ದು, ಇಡೀ ಕ್ಷೇತ್ರದಲ್ಲಿ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ವಿಜಯ್ ಮಿರಾಶಿ ವಿರುದ್ಧ ಸ್ವಪಕ್ಷದವರೇ ಒಂದೆಡೆ ತಿರುಗಿ ಬಿದ್ದಿದ್ದರೆ, ಇನ್ನೊಂದೆಡೆ ಅವರ ಪರ ಸಹ ಕೆಲ ಬಿಜೆಪಿ ನಾಯಕರು ಬ್ಯಾಟಿಂಗ್ ಮಾಡುತ್ತಿದ್ದು, ಐ ಸ್ಟಾಂಡ್ ವಿಥ್ ವಿಜಯ್ ಮಿರಾಶಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಸಹ ಮಾಡಿದ್ದರು. ಇದಲ್ಲದೇ ವಿಜಯ್ ಮಿರಾಶಿ ಗಲಾಟೆ ನಡೆದ ಸಂಧರ್ಭದಲ್ಲಿ ಹೋಟೆಲ್ ಬಳಿ ಇಲ್ಲದಿದ್ದರೂ ಉದ್ದೇಶಪೂರ್ವಕವಾಗಿ ಎಫ್ಐಆರ್ ಹಾಕಲಾಗಿದೆ. ಅದನ್ನು ರದ್ದು ಮಾಡುವಂತೆ ಪ್ರತಿಭಟನೆಯನ್ನು ಸಹ ಮಾಡಿದ್ದರು.
Recommended Video
ಪ್ರಕರಣ ಇದೀಗ ಸಮುದಾಯಗಳ ನಡುವಿನ ಭಿನ್ನಮತಕ್ಕೆ ಸಹ ಕಾರಣವಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ಹಲ್ಲೆಗೊಳಗಾದ ವಿಠು ಶಿಳ್ಕೆ ಪರ ಆತನ ದನಗರ ಗೌಳಿ ಸಮುದಾಯದವರು ನಿಂತು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರೆ, ಇತ್ತು ವಿಜಯ್ ಮಿರಾಶಿ ಮೇಲೆ ಎಫ್ಐಆರ್ ಆಗಿರುವುದಕ್ಕೆ ಅವರ ಮರಾಠಾ ಸಮುದಾಯ ಸಹ ವಿಜಯ್ ಮಿರಾಶಿ ಪರ ನಿಂತು ಪ್ರತಿಭಟನೆ ಮಾಡುತ್ತಿದ್ದು, ಇದು ಮುಂದಿನ ದಿನದಲ್ಲಿ ಬಿಜೆಪಿ ಪಕ್ಷದ ಮೇಲೆ ಪರಿಣಾಮ ಬೀಳಲಿದೆ ಎನ್ನಲಾಗಿದೆ.