ಒಂದು ದಿನ ಶಾಲೆಗೆ ಬರಲಿಲ್ಲವೆಂದು ಇಂಥ ಶಿಕ್ಷೆ ಕೊಡುವುದಾ ಶಿಕ್ಷಕ?
ಜೊಯಿಡಾ, ಜನವರಿ 21: ಶಾಲೆಗೆ ಗೈರು ಹಾಜರಾದ ಕಾರಣ ಶಿಕ್ಷಕರೊಬ್ಬರು ವಿದ್ಯಾರ್ಥಿಯೊಬ್ಬನನ್ನು ಕೈಕಾಲು ಕಟ್ಟಿ ಥಳಿಸಿರುವ ಘಟನೆ ಜೋಯಿಡಾ ತಾಲ್ಲೂಕಿನ ಬಿರಂಪಾಲಿ ಗ್ರಾಮದಲ್ಲಿ ನಡೆದಿದೆ. ಬಿರಂಪಾಲಿಯ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ರೋಸಯ್ಯ ರೆಡ್ಡಿ ಪೋಗು 4ನೇ ತರಗತಿ ವಿದ್ಯಾರ್ಥಿಯನ್ನು ಅಮಾನವೀಯವಾಗಿ ಥಳಿಸಿದ್ದಾರೆ.
ವಿದ್ಯಾರ್ಥಿ ಜಾನು ಟಕ್ಕು ಗೌಳಿ ಶಾಲೆಗೆ ಒಂದು ದಿನ ಬಂದಿರಲಿಲ್ಲ. ನಿನ್ನೆ ಆತ ಶಾಲೆಗೆ ಬಂದ ಸಂದರ್ಭ ಶಿಕ್ಷಕ ರೋಸಯ್ಯ ಬಾಲಕನ ಅಂಗಿ ಬಿಚ್ಚಿಸಿ ಕೈಕಾಲು ಕಟ್ಟಿ ಬಾಸುಂಡೆ ಬರುವಂತೆ ಥಳಿಸಿದ್ದಾರೆ.
ಹಾವು ಕಚ್ಚಿದರೂ ಪಾಠ ಮುಂದುವರಿಸಿದ ಶಿಕ್ಷಕ: ಬಾಲಕಿ ಸಾವು
ಈ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿಯ ಪಾಲಕರು ಹಾಗೂ ಗ್ರಾಮಸ್ಥರು ಶಾಲೆಗೆ ಧಾವಿಸಿದ್ದಾರೆ. ಬಾಲಕನ ಕೈಕಾಲು ಕಟ್ಟಿಹಾಕಿದ್ದನ್ನು ಕಂಡು ಶಿಕ್ಷಕನ ಮೇಲೆ ಕೆಂಡಾಮಂಡಲರಾಗಿದ್ದಾರೆ. ವಿದ್ಯಾರ್ಥಿಯೊಂದಿಗೆ ಅಮಾನವೀಯವಾಗಿ ವರ್ತಿಸಿದ ಶಿಕ್ಷಕನಿಗೆ ಪಾಲಕರು ತರಾಟೆಗೆ ತೆಗೆದುಕೊಂಡಿದ್ದು, ಬಾಲಕನೊಂದಿಗೆ ಅಮಾನವೀಯವಾಗಿ ವರ್ತಿಸಿದ್ದನ್ನು ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದನ್ನು ಪ್ರಶ್ನೆ ಮಾಡಿದ್ದಾರೆ. ಆತನ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಸ್ಥಳೀಯರೇ ಸೇರಿ ಶಿಕ್ಷಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರಿಗೊಪ್ಪಿಸಿದ್ದಾರೆ. ಈ ಬಗ್ಗೆ ಜೋಯಿಡಾ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಗೂ ಈ ಸಂಬಂಧ ದೂರು ನೀಡಿದ್ದಾರೆ.
ವಿಡಿಯೋ ನೋಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿ ಸಹ ಶಿಕ್ಷಕನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.