ತೌಕ್ತೆ ಅಬ್ಬರ; ಮುರುಡೇಶ್ವರದಲ್ಲಿ ಗೂಡಂಗಡಿಗಳು ನೀರುಪಾಲು
ಕಾರವಾರ, ಮೇ 16; ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಭಟ್ಕಳದ ಮುರುಡೇಶ್ವರದಲ್ಲಿ ಪ್ರವಾಸಿ ವಸ್ತುಗಳ ಮಾರಾಟ, ಮೀನುಗಾರಿಕೆಯೇ ಬದುಕಾಗಿತ್ತು. ಆದರೆ ಇತ್ತೀಚೆಗೆ ಘೋಷಿಸಿದ್ದ ಲಾಕ್ ಡೌನ್ನಿಂದಾಗಿ ಕೆಲಸವಿಲ್ಲದೇ ಕುಳಿತಿದ್ದವರಿಗೆ ಇದೀಗ ತೌಕ್ತೆ ಚಂಡಮಾರುತ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತೆ ಮಾಡಿದೆ.
ವಿಶ್ವಪ್ರಸಿದ್ಧ ಮುರುಡೇಶ್ವರ ಅತಿದೊಡ್ಡ ಶಿವನ ಮೂರ್ತಿಗೆ ಪ್ರಖ್ಯಾತಿ. ಇಲ್ಲಿ ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಕೊರೊನಾ ಆರಂಭವಾದಾಗಿನಿಂದ ಲಾಕ್ ಡೌನ್, ಕರ್ಫ್ಯೂ ವಿಧಿಸುತ್ತಿದ್ದರಿಂದ ಪ್ರವಾಸಿಗರ ಸಂಖ್ಯೆ ಇಲ್ಲಿ ಇಳಿಮುಖವಾಗಿತ್ತು.
'ತೌಕ್ತೆ' ಅವಾಂತರಕ್ಕೆ ನಡುಗಿದ ಕರಾವಳಿ: ಆತಂಕದಲ್ಲಿ ಉತ್ತರ ಕನ್ನಡ ತೀರದ ವಾಸಿಗಳು
ಪ್ರವಾಸಿಗರನ್ನೇ ನಂಬಿಕೊಂಡು ಕಡಲತೀರದಲ್ಲಿ ಗೂಡಂಗಡಿಗಳನ್ನು ಇಟ್ಟುಕೊಂಡು ಫಾಸ್ಟ್ ಫುಡ್, ಫ್ಯಾನ್ಸಿ ಐಟಮ್, ಬಟ್ಟೆಗಳನ್ನು ಮಾರಾಟ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವ್ಯಾಪಾರಿಗಳು ಕೂಡ ಪ್ರವಾಸಿಗರಿಲ್ಲದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದರು.
ತೌಕ್ತೆ ಚಂಡಮಾರುತ: ಅರಬ್ಬೀ ಸಮುದ್ರದಲ್ಲಿ ಹೆಚ್ಚಾದ ಅಲೆಗಳ ನರ್ತನ
ಕೆಲವು ಸಮಯ ಲಾಕ್ ಡೌನ್ ಸಡಿಲಗೊಳಿಸಿದ್ದ ಕಾರಣ ಒಂದಷ್ಟು ದಿನ ವ್ಯಾಪಾರ ನಡೆಸಿದ್ದವರಿಗೆ ಇತ್ತೀಚೆಗೆ ಮತ್ತೆ ಸರ್ಕಾರ ಲಾಕ್ ಡೌನ್ ಘೋಷಿಸಿ ಮನೆಯಲ್ಲಿ ಕೂರುವಂತೆ ಮಾಡಿತು. ಜೀವಕ್ಕಿಂತ ವ್ಯಾಪಾರ ದೊಡ್ಡದಲ್ಲ, ಜೀವವಿದ್ದರೆ ಇನ್ನು ಯಾವತ್ತಾದ್ರು ದುಡಿಯಬಹುದೆಂದು ತಮ್ಮಷ್ಟಕ್ಕೆ ವ್ಯಾಪಾರಿಗಳು ಮನೆಯಲ್ಲಿದ್ದರು.
ಮುರುಡೇಶ್ವರ; ತಿಮಿಂಗಿಲದ ವಾಂತಿ ಪತ್ತೆ, ಇದರ ಬೆಲೆ ಕೋಟಿ ರೂ.!
ತೌಕ್ತೆ ಚಂಡಮಾರುತದಿಂದ ಆತಂಕ
ಮೇ 24ರ ತನಕ ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಆದ್ದರಿಂದ ಹೊರಗಡೆ ಓಡಾಡುವಂತಿಲ್ಲ. ಇದರಿಂದಾಗಿ ವ್ಯಾಪಾರಿಗಳು ಅಂಗಡಿಗಳಲ್ಲಿದ್ದ ವಸ್ತುಗಳನ್ನೆಲ್ಲ ಪ್ಯಾಕ್ ಮಾಡಿ ಅಂಗಡಿಗಳೊಳಗೆ ಇಟ್ಟು, ಬೀಗ ಹಾಕಿ ಮನೆಯಲ್ಲಿದ್ದರು. ಆದರೆ ತೌಕ್ತೆ ಚಂಡಮಾರುತ ವ್ಯಾಪಾರಿಗಳಿಗೆ ಮತ್ತಷ್ಟು ಸಂಕಷ್ಟ ತಂದಿದೆ.
ಅಲೆಗಳ ಹೊಡೆತಕ್ಕೆ ಸಮುದ್ರಕ್ಕೆ
ಮುರುಡೇಶ್ವರದ ಸಮುದ್ರದ ದಡದಲ್ಲಿ ನಿಲ್ಲಿಸಿದ್ದ ಗೂಡಂಗಡಿಗಳು ಅಲೆಗಳ ಹೊಡೆತಕ್ಕೆ ಸಮುದ್ರ ಸೇರಿದ್ದು, ಅದರಲ್ಲಿದ್ದ ಲಕ್ಷಗಟ್ಟಲೆ ಸಾಮಗ್ರಿಗಳು ಸಮುದ್ರ ಪಾಲಾಗಿವೆ. ರಂಜಾನ್ ಹಬ್ಬವಿದೆ, ಜನ ಹೆಚ್ಚು ಬರ್ತಾರೆ ಎಂದು ತಿಂಗಳ ಹಿಂದೆ ಸಾಮಗ್ರಿಗಳನ್ನೆಲ್ಲ ಖರೀದಿಸಿಟ್ಟಿದ್ದರು.
ವಸ್ತುಗಳೆಲ್ಲ ನೀರು ಪಾಲು
ವ್ಯಾಪಾರಿಗಳು ಲಾಕ್ ಡೌನ್ ಸಮಯದಲ್ಲಿ ಹೊರಗಡೆ ಹೋದರೆ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆಯಬಹುದು ಎಂದು ಎಲ್ಲೂ ಹೋಗದೆ ಮನೆಯಲ್ಲಿದ್ದರು, ರಾತ್ರೋರಾತ್ರಿ ಅಂಗಡಿಗಳೆಲ್ಲ ನೀರು ಪಾಲಾಗಿವೆ. ಸಂಗ್ರಹ ಮಾಡಿಟ್ಟ ವಸ್ತುಗಳು ಸಮುದ್ರದ ಪಾಲಾಗಿವೆ.
Recommended Video
ದಡದಲ್ಲಿಡುವ ಕಾರ್ಯ
ಅಂಗಡಿಗಳೆಲ್ಲ ನೀರು ಪಾಲಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕಂಗಾಲಾದ ವ್ಯಾಪಾರಿಗಳು ಸಮುದ್ರ ತೀರಗಳತ್ತ ಧಾವಿಸಿದ್ದು, ಸಮುದ್ರ ಪಾಲಾದ ಅಂಗಡಿಗಳನ್ನು ಎತ್ತಿ ಮತ್ತೆ ದಡದಲ್ಲಿಡುವ ಕಾರ್ಯ ಮಾಡುತ್ತಿದ್ದಾರೆ. ಇನ್ನು ಕೆಲವರು ಅಂಗಡಿಗಳಲ್ಲಿದ್ದ ವಸ್ತುಗಳನ್ನೆಲ್ಲ ತಮ್ಮ ಮನೆಗಳತ್ತ ಸಾಗಿಸುವ ಕಾರ್ಯಕ್ಕಿಳಿದಿದ್ದು, ಚಂಡಮಾರುತ ಮತ್ತಷ್ಟು ನಷ್ಟ ತಂದೊಡ್ಡಿದೆ.