ಸ್ವಾಮೀಜಿಗಳು ರಾಜಕೀಯದಲ್ಲಿ ಮೂಗು ತೂರಿಸುವುದೇಕೆ?; ಬಸವರಾಜ ಹೊರಟ್ಟಿ
ಕಾರವಾರ, ನವೆಂಬರ್ 30: ಸರ್ಕಾರ ವೀರಶೈವ ಲಿಂಗಾಯತ ನಿಗಮವನ್ನು ರಚಿಸಿದ್ದೇ ತಪ್ಪು. ಅದರಲ್ಲೂ ಮಠಾಧೀಶರು ಲಿಂಗಾಯತ ಮೀಸಲಾತಿ ವಿಚಾರದಲ್ಲಿ ಮೂಗು ತೂರಿಸಬಾರದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, "ಮಠಾದೀಶರು ತಮ್ಮ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ರಾಜಕಾರಣ ಮಾಡಲು ನಾವಿದ್ದೇವೆ. ಸ್ವಾಮೀಜಿಗಳು ಹದ್ದು ಮೀರಿ ನಡೆಯಬಾರದು. ಮಠಾಧೀಶರಿಗೆ ರಾಜಕೀಯ ಏಕೆ ಬೇಕು? ಅವರಿಗೆ ರಾಜಕಾರಣದಲ್ಲಿ ಅಷ್ಟು ಆಸಕ್ತಿಯಿದ್ದರೆ ನಮ್ಮ ಜೊತೆ ವಿಧಾನ ಸೌಧಕ್ಕೆ ಬರಲಿ" ಎಂದು ಸಿಡಿಮಿಡಿಗೊಂಡರು.
ಸಿಎಂ ಹುದ್ದೆಗಾಗಿ ಎಲ್ಲರೂ ತಿರುಕನ ಕನಸು ಕಾಣುತ್ತಿದ್ದಾರೆ: ಹೊರಟ್ಟಿ
ಇದೇ ಸಂದರ್ಭ ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಬಿಜೆಪಿ ಆಂತರಿಕ ಕಲಹದಿಂದ ಸಿಎಂ ಬದಲಾವಣೆ ಮುನ್ನೆಲೆಗೆ ಬಂದಿದೆ. ಯಡಿಯೂರಪ್ಪ ಅವರನ್ನು ಸಮಾಧಾನ ಮಾಡಿಕೊಂಡು ಹೋದರೆ ಸರ್ಕಾರ ಉಳಿಯುತ್ತೆ. ಇಲ್ಲವೆಂದರೆ ಜೇನುಗೂಡಿಗೆ ಕಲ್ಲು ಹೊಡೆದ ಹಾಗೆ" ಎಂದು ಹೇಳಿದರು. "ಸರಕಾರ ರಚನೆ ಮಾಡಲು ತ್ಯಾಗ ಮಾಡಿ ಬಂದ ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು" ಎಂದೂ ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಶಿಕ್ಷಣ ವ್ಯವಸ್ಥೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೋವಿಡ್ ಸಂದರ್ಭದಲ್ಲಿ ಎಲ್ಲ ಕ್ಷೇತ್ರದ ಕಾರ್ಮಿಕರಿಗೆ ಸರ್ಕಾರ ಪ್ಯಾಕೇಜ್ ನೀಡಿದೆ. ಆದರೆ ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಸರ್ಕಾರ ನೆರವು ನೀಡಿಲ್ಲ. ಶಿಕ್ಷಕರಿಗೆ ಕನಿಷ್ಠ 5 ಸಾವಿರ ನೀಡುವ ಸೌಜನ್ಯವನ್ನೂ ಸರ್ಕಾರ ತೋರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಸಾಕಷ್ಟು ಬಾರಿ ಶಿಕ್ಷಣದ ವಿಚಾರದಲ್ಲಿ ಸಲಹೆ ನೀಡಿದ್ದೇನೆ. ಆದರೆ ಸರ್ಕಾರ ಅನುಭವಸ್ಥರ ಸಲಹೆಗಳನ್ನು ತೆಗೆದುಕೊಳ್ಳುವುದಿಲ್ಲ. ಕೇವಲ ಆರೇ ದಿನ ಸಮಯ ಕೊಡಿ. ಇಡೀ ಶಿಕ್ಷಣ ವ್ಯವಸ್ಥೆಯನ್ನು ಸರ್ಜರಿ ಮಾಡುತ್ತೇನೆ ಎಂದರು. ಆನ್ ಲೈನ್ ತರಗತಿಗಳ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಹೇಳಿಕೆಗಳು ಗೊಂದಲವಾಗಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಮುಷ್ಕರಕ್ಕೆ ಸಿದ್ಧತೆ ನಡೆಸಿದ್ದರಲ್ಲಿ ತಪ್ಪೇನಿದೆ? ಶುಲ್ಕದ ಮೊತ್ತದಿಂದಲೇ ನಡೆಯುವ ಹಲವು ಶಾಲೆಗಳಿವೆ. ಕಾರಿನಲ್ಲಿ ಮಕ್ಕಳನ್ನು ಕರೆದುಕೊಂಡು ಬರುವ ಮಂದಿಯಿಂದ ಶುಲ್ಕ ಪಡೆದರೆ ತಪ್ಪೇನಿದೆ ಎಂದು ಪ್ರಶ್ನಿಸಿದರು.