ಹಿರಿಯ ವಕೀಲ ಅಜಿತ ನಾಯಕ ಹತ್ಯೆ ಪ್ರಕರಣ: ಶಂಕಿತ ಆರೋಪಿ ಬಂಧನ
ಕಾರವಾರ, ಜುಲೈ.31: ಹಿರಿಯ ವಕೀಲ ದಾಂಡೇಲಿಯ ಅಜಿತ ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ ಸಂಜೆ ಓರ್ವನನ್ನು ಯಲ್ಲಾಪುರದ ಬೆಲ್ ರಸ್ತೆಯಲ್ಲಿ ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಬೆಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಯ ಮುಖ ಚಹರೆಯ ಆಧಾರದ ಮೇಲೆ ಶಂಕಿತನನ್ನು ಬಂಧಿಸಲಾಗಿದೆ. ದಾಂಡೇಲಿ ಮೌಳಂಗಿಯ ಪಾಂಡು ಯಾನೆ ದೀಪಕ ಕಾಂಬ್ಳೆ ಶಂಕಿತ ಆರೋಪಿ.
ಉತ್ತರ ಕನ್ನಡ : ಹಿರಿಯ ವಕೀಲ ಅಜಿತ್ ನಾಯಕ ಕೊಲೆಯಾಗಿದ್ದು ಏಕೆ?
ಈತನ ಚಲನವಲನ ಗಮನಿಸಿದ ಪೊಲೀಸ್ ಸಿಬ್ಬಂದಿಯೋರ್ವರು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಶಂಕಿತ ಕೊಲೆಗಾರನೆಂದು ತಿಳಿದು ಬಂದಿದೆ. ತಕ್ಷಣ ಈತನನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಆದರೆ, ಈ ಬಗ್ಗೆ ಪೊಲೀಸರು ಈವರೆಗೂ ಅಧಿಕೃತಗೊಳಿಸಿಲ್ಲ. ಅಜಿತ ನಾಯಕ ಅವರ ಹತ್ಯೆಗೆ ಭೂ ಮಾಫಿಯಾನೇ ಕಾರಣ ಎಂದು ಕೂಡ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಸಂಬಂಧವೇ ಶಂಕಿತನನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ದಾಂಡೇಲಿಯ ಅಜಿತ ನಾಯಕ ಅವರನ್ನು ಶುಕ್ರವಾರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.