ಭಟ್ಕಳ ಪುರಸಭೆಯಲ್ಲಿ ದೆವ್ವದ ಕಾಟ, ದೇವರ ಮೊರೆ ಹೋದ ಅಧಿಕಾರಿಗಳು
ಕಾರವಾರ, ನವೆಂಬರ್ 12: ಮೂಡನಂಭಿಕೆ ತೊಲಗಬೇಕೆಂಬ ಉದ್ದೇಶದಿಂದ ಸರ್ಕಾರ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ. ಆದರೆ ಸರ್ಕಾರದ ಪ್ರತಿನಿಧಿಗಳಾದ ಸರ್ಕಾರಿ ಅಧಿಕಾರಿಗಳು ಮೂಡನಂಬಿಕೆಯ ಮೊರೆ ಹೋಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಪುರಸಭೆಯ ಮಳಿಗೆಗಳಲ್ಲಿ ಭೂತದ ಕಾಟವಿದೆ ಎಂದು ಪುರಸಭೆಯ ಅಧಿಕಾರಿಗಳು ಹೋಮ- ಹವನ ಮಾಡಿಸಿದ್ದಾರೆ.
ಪುರಸಭೆ ಕಟ್ಟಡದಲ್ಲಿ ಸೆಪ್ಟೆಂಬರ್ 14 ರಂದು ಅಲ್ಲಿನ ಆಸರಕೇರಿಯ ನಿವಾಸಿ ರಾಮಚಂದ್ರ ನಾಯ್ಕ ಎಂಬುವವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮವೀಗ ಪುರಸಭೆ ಅಧಿಕಾರಿಗಳಿಗೆ ಹಾಗೂ ಇತರೆ ಅಂಗಡಿಕಾರರಿಗೆ ಕಾಟ ಕೊಡುತ್ತಿದೆಯೆಂದು ಪುರಸಭೆಯ ಅಧಿಕಾರಿಗಳು ಶನಿವಾರದಿಂದ (ನವೆಂಬರ್ 11) ಪುರಸಭೆ ಆವರಣದಲ್ಲಿ ಹೋಮ ಮಾಡುತ್ತಿದ್ದಾರೆ. ಇದು ಸೋಮವಾರದವರೆಗೂ ಮುಂದುವರಿಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ವೇಳೆ ಸ್ಥಳಕ್ಕೆ ಮೃತ ರಾಮಚಂದ್ರ ನಾಯ್ಕರ ಸಹೋದರ ತೆರಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಪುರಸಭೆ ಕಟ್ಟಡದ ಮಳಿಗೆಗಳಲ್ಲಿ ಸರಿಯಾಗಿ ವ್ಯಾಪಾರ ಆಗುತ್ತಿಲ್ಲ. ಹೀಗಾಗಿ ಹೋಮ ಮಾಡಲಾಗುತ್ತಿದೆ. ಸರ್ಪ ಶಾಪದಿಂದ ಮುಕ್ತಿ ಹೊಂದಲು ಸರ್ಪ ಸಂಸ್ಕಾರ ನಡೆಸಲಾಗುತ್ತಿದೆ ಅಂತ ಅಧಿಕಾರಿಗಳು ಸತ್ಯ ಮರೆಮಾಚಿದ್ದಾರೆ.
ರಾಮಚಂದ್ರ ನಾಯ್ಕನ ಸಾವಿನ ಬಳಿಕ ಭಟ್ಕಳದಲ್ಲಿ ಈ ಹಿಂದೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಹಲವರನ್ನು ಬಂಧಿಸಿ ಬಿಡುಗಡೆ ಕೂಡ ಮಾಡಲಾಗಿತ್ತು.