ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆಗಾಗಿ ಅಭಿಯಾನ; ಜನಪ್ರತಿನಿಧಿಗಳಿಂದ ಭರವಸೆಯ ಮಹಾಪೂರ!
ಕಾರವಾರ, ಜು.25: ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕೂಗು ಜೋರಾಗತೊಡಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಟ್ವೀಟ್ ಅಭಿಯಾನಕ್ಕೆ ಕರೆ ಕೊಟ್ಟ ಬೆನ್ನಲ್ಲೆ ಜಿಲ್ಲೆಯ ನಾಯಕರುಗಳು ಸ್ಪರ್ಧೆಗೆ ಬಿದ್ದವರಂತೆ ಹೇಳಿಕೆ ಬಿಡುಗಡೆ ಮಾಡುತ್ತಿದ್ದು, ಭರವಸೆಗಳ ಮಹಾಪುರವೇ ಹರಿದುಬರುತ್ತಿದೆ.
ಇತ್ತೀಚೆಗೆ ಉಡುಪಿಯ ಬೈಂದೂರು ತಾಲ್ಲೂಕಿನ ಶಿರೂರಿನಲ್ಲಿ ಆ್ಯಂಬುಲೆನ್ಸ್ ಅಪಘಾತಗೊಂಡು ಜಿಲ್ಲೆಯ ನಾಲ್ವರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಬೆನ್ನಲ್ಲೆ ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ ಮತ್ತೆ ಹೋರಾಟ ತೀವ್ರಗೊಂಡಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಭಾನುವಾರ #WeNeedEmergncyHospitalInUttarakannada, #NoHospitalNoVote ಎಂಬ ಎರಡು ಹ್ಯಾಷ್ ಟ್ಯಾಗ್ ನಡಿ ಟ್ವಿಟ್ ಅಭಿಯಾನಕ್ಕೆ ಕರೆ ಕೊಟ್ಟ ಬೆನ್ನಲ್ಲೆ ಅಭಿಯಾನ ಆರಂಭಕ್ಕೂ ಮುನ್ನವೇ ಶಾಸಕರು, ಸಚಿವರುಗಳು ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಭರವಸೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನೇ ಓವರ್ ಟೇಕ್ ಮಾಡಿ ಪೋಸ್ಟ್ ಮಾಡತೊಡಗಿದ್ದರು.
ಜನಪ್ರತಿನಿಧಿಗಳ ಭರವಸೆ, ಆಶ್ವಾಸನೆಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಕಳೆದ ಭಾರಿ ಇದೇ ರೀತಿ ಅಭಿಯಾನ ನಡೆಸಿದಾಗ ಜನಪ್ರತಿನಿಧಿಗಳ ನೀಡಿದ ಭರವಸೆಗಳು ಈವರೆಗೂ ಈಡೇರಿಲ್ಲ. ಇದೀಗ ಮತ್ತೆ ಜನರ ಹೋರಾಟವನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಭರವಸೆಗಳು ಕಾರ್ಯರೂಪಕ್ಕೆ ಬರುವರೆಗೂ ಯಾರು ಇಂತಹ ಮಾತುಗಳನ್ನು ನಂಬದೇ ಹೋರಾಟ ಮುಂದುವರಿಸಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳಲಾಗುತ್ತಿದೆ.
ಆರೋಗ್ಯ ಸಚಿವರ ಜೊತೆ ಸ್ಪೀಕರ್ ಚರ್ಚೆ
ವಿಧಾನಸಭಾಧ್ಯಕ್ಷರೂ ಆಗಿರುವ, ಶಿರಸಿ- ಸಿದ್ದಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಉತ್ತರಕನ್ನಡ ಜಿಲ್ಲೆಗೆ ಒಂದು ಸುಸಜ್ಜಿತವಾದ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಅತ್ಯಗತ್ಯವಿದ್ದು, ತ್ವರಿತವಾಗಿ ನಿರ್ಮಾಣ ಮಾಡಬೇಕೆಂದು ಆರೋಗ್ಯ ಸಚಿವರಾದ ಸುಧಾಕರ ಅವರೊಂದಿಗೆ ಮಾತನಾಡಿದೆನು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಈ ವಿಷಯದ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಇಂದೊಂದು ವಿಶೇಷ, ಅತ್ಯಗತ್ಯ ಪ್ರಕರಣವಾಗಿ ಪರಿಗಣಿಸಿ ಶೀಘ್ರದಲ್ಲಿಯೇ ಆಸ್ಪತ್ರೆ ನಿರ್ಮಿಸಲು ಅಗತ್ಯ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಬೇಡಿಕೆ ನ್ಯಾಯ ಸಮ್ಮತ
ಇನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಶಿರಸಿಯಲ್ಲಿ ಆಸ್ಪತ್ರೆ ಕುರಿತು ಪ್ರತಿಕ್ರಿಯೆ ನೀಡಿದ್ದು, "ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಜಿಲ್ಲೆಯ ಜನರು ಬೇಡಿಕೆ ಇಡುತ್ತಿರುವುದು ನ್ಯಾಯ ಸಮ್ಮತವಾಗಿದ್ದು, ಇದಕ್ಕೆ ನನ್ನ ಬೆಂಬಲ ಸಹ ಇದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆ ನಿರ್ಮಾಣವಾಗಬೇಕಾಗಿದ್ದು ಜಿಲ್ಲೆಯ ಜನಪ್ರತಿನಿಧಿ ಹಾಗೂ ಸರ್ಕಾರದ ಭಾಗವಾಗಿ ಈ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ.
ಇನ್ನು ಜಿಲ್ಲಾ ಉಸ್ತುವಾರಿ ಸಚಿವ, ಹಿಂದುಳಿದ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕೂಡ ಟ್ವೀಟ್ ಮಾಡಿದ್ದು, ‘ಉತ್ತರ ಕನ್ನಡ ಜಿಲ್ಲೆಯ ಹೃದಯ ಭಾಗದ ಕುಮಟಾದ ಆಸುಪಾಸಿನಲ್ಲಿ ಸದ್ಯದಲ್ಲೇ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಲಿದ್ದೇವೆ. ಎಲ್ಲರ ಸಹಕಾರವಿರಲಿ' ಎಂದು ತಿಳಿಸಿದ್ದಾರೆ.
ಆಗಸ್ಟ್ ಮೊದಲ ವಾರ ಸಿಎಂ ಭೇಟಿ
ಮತ್ತೊಂದೆಡೆ ಶಾಸಕಿ ರೂಪಾಲಿ ನಾಯ್ಕ ಕಾರವಾರದಲ್ಲಿ ಮಾತನಾಡಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಕಾದ ವೈದ್ಯರುಗಳು ಬರದೇ ಇರುವುದಕ್ಕೆ ಈ ಬೇಡಿಕೆ ಹಾಗೆಯೇ ಇದೆ. ಆಸ್ಪತ್ರೆಯ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿಕೊಂಡಿದ್ದು, ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಗೆ ಅವರು ಭೇಟಿ ನೀಡಿದ ಸಂದರ್ಭ ಘೋಷಣೆ ಮಾಡುವ ಭರವಸೆ ಇದೆ ಎಂದು ಹೇಳಿದ್ದಾರೆ.
ಜನಪ್ರತಿನಿದಿಗಳಿಗೆ ಆತಂಕ
ಇನ್ನು ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಆರಂಭವಾಗಿರುವ ಸುಸಜ್ಜಿತ ಆಸ್ಪತ್ರೆ ಹೋರಾಟದಿಂದ ಜಿಲ್ಲೆಯ ಜನಪ್ರತಿನಿದಿಗಳಲ್ಲಿ ಶಾಸಕ ಸ್ಥಾನಕ್ಕೂ ಪೆಟ್ಟು ಬೀಳುವ ಆತಂಕ ಶುರುವಾಗಿದೆ. ಇದೆ ಕಾರಣಕ್ಕೆ ಆಶ್ವಾಸನೆಗಳನ್ನು ನೀಡಲಾರಂಭಿಸಿರುವ ಜನಪ್ರತಿನಿಧಿಗಳು, ತಮ್ಮ ಪ್ರತಿಷ್ಠೆಯನ್ನೂ ಬಿಡಲು ಸಿದ್ಧರಿಲ್ಲ. ಶಿರಸಿಯ ಕಾಗೇರಿ ಘಟ್ಟದ ಮೇಲ್ಭಾಗದಲ್ಲಿ, ಕಾರವಾರ ಶಾಸಕಿ ರೂಪಾಲಿ ಕಾರವಾರ- ಅಂಕೋಲಾದಲ್ಲಿ, ಭಟ್ಕಳ, ಕುಮಟಾ ಶಾಸಕರು ತಮ್ಮ ಭಾಗದಲ್ಲಿ ಆಸ್ಪತ್ರೆ ನಿರ್ಮಾಣವಾಗಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದು, ಇದು ಗೊಂದಲಕ್ಕೆ ಕಾರಣವಾದಂತಾಗಿದೆ.
Recommended Video