ಗೋವಾದಲ್ಲಿ ಕನ್ನಡಿಗರ ಮೇಲಿನ ದಬ್ಬಾಳಿಕೆ; ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಿಡಿ
ಕಾರವಾರ, ಜನವರಿ 31: 'ಕನ್ನಡಿಗರ ಮೇಲೆ ಗೋವಾದಲ್ಲಿ ದಬ್ಬಾಳಿಕೆ ಮುಂದುವರೆದರೆ ನಮ್ಮ ರಾಜ್ಯದಿಂದ ಗೋವಾಕ್ಕೆ ಹೋಗುವ ಎಲ್ಲಾ ಸರಕು- ಸಾಮಗ್ರಿಗಳ ಸಾಗಾಟ ಬಂದ್ ಮಾಡಿ ಹೋರಾಟ ನಡೆಸಬೇಕಾಗುತ್ತದೆ' ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಗೋವಾ ರಾಜ್ಯದಲ್ಲಿ 'ನಾನು ಕ್ರಾಂತಿಕಾರಿ ಗೋವನ್ನ' (ಐ ಆಮ್ ರೆವಲ್ಯೂಷನರಿ ಗೋವನ್) ಎನ್ನುವ ಅಭಿಯಾನ ನಡೆಸುವ ಮೂಲಕ ಕನ್ನಡಿಗರು ಹಾಗೂ ಹೊರ ರಾಜ್ಯದವರ ಮೇಲೆ ಕೆಲ ಗೋವನ್ನರು ದಬ್ಬಾಳಿಕೆ ನಡೆಸುತ್ತಿರುವ ಬಗ್ಗೆ 'ಒನ್ ಇಂಡಿಯಾ ಕನ್ನಡ'ದಲ್ಲಿ ಪ್ರಕಟವಾದ ವರದಿಗೆ ಪ್ರತಿಕ್ರಿಯೆ ನೀಡಿರುವ ಪ್ರವೀಣ್ ಶೆಟ್ಟಿ, 'ಕೆಲವು ಗೋವನ್ನರು ಮಾಡುತ್ತಿರುವ ದಬ್ಬಾಳಿಕೆಯಿಂದ ಎರಡು ರಾಜ್ಯದ ನಡುವಿನ ಸಂಬಂಧ ಹಾಳಾಗಲಿದೆ' ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ 'ಕ್ರಾಂತಿಕಾರಿ ಗೋವನ್ನ'ರ ಅಭಿಯಾನ; 'ಘಾಟಿ ಸರ್ಕಾರ'ದ ವಿರುದ್ಧ ಆಕ್ರೋಶ
'ಒಕ್ಕೂಟದ ವ್ಯವಸ್ಥೆಯಲ್ಲಿ ಕೆಲ ಗೋವನ್ನರು ಅಭಿಯಾನದ ಹೆಸರಿನಲ್ಲಿ ಮಾಡುತ್ತಿರುವ ಚಟುವಟಿಕೆ ತಪ್ಪು. ಸಂವಿಧಾನದಲ್ಲಿ ಯಾರು, ಎಲ್ಲಿ ಬೇಕಾದರೂ ಬದುಕಬಹುದು. ಕರ್ನಾಟಕದಲ್ಲಿ ಹಲವು ಗೋವನ್ನರು ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ಗೋವನ್ನರು ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸಿದರೆ ನಮ್ಮ ರಾಜ್ಯದಲ್ಲಿರುವ ಗೋವಾದವರಿಗೆ ಸಮಸ್ಯೆ ಎದುರಾಗಲಿದೆ' ಎಂದು ಎಚ್ಚರಿಕೆ ನೀಡಿದ್ದಾರೆ.
'ಜೈ ಶ್ರೀರಾಮ್' ಎಂದಿದ್ದಕ್ಕೆ ಕಾರಿನಿಂದ ಇಳಿದುಬಂದ ದೀದಿ ಮಾಡಿದ್ದೇನು?
'ಗೋವಾಕ್ಕೆ ಪ್ರತಿನಿತ್ಯ ಎಲ್ಲಾ ವಸ್ತುಗಳು ಕರ್ನಾಟಕದಿಂದಲೇ ಹೋಗಬೇಕು. ನಮ್ಮಲ್ಲಿಂದ ಹೋಗುವ ವಸ್ತುಗಳನ್ನು ಬಂದ್ ಮಾಡಿದರೆ ಅವರು ಸಮುದ್ರದಲ್ಲಿನ ಮರಳು, ಉಪ್ಪು ತಿನ್ನಲು ಸಾಧ್ಯವಿಲ್ಲ. ಕನ್ನಡಿಗರ ಜೊತೆ ಉದ್ಧಟತನ ಮಾಡಿದರೆ ಕಾರವಾರಕ್ಕೆ ಆಗಮಿಸಿ, ಗಡಿಯನ್ನು ಬಂದ್ ಮಾಡಿ ಹೋರಾಟ ನಡೆಸುತ್ತೇವೆ. ಗೋವಾದವರಿಗೆ ಕರ್ನಾಟಕ ಎಷ್ಟು ಪ್ರಮುಖವಾಗಿದೆ ಎಂದು ತೋರಿಸಲಿದ್ದೇವೆ. ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ಸಹ ನಡೆಸುತ್ತೇವೆ. ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಿ, ಒಕ್ಕೂಟದ ವ್ಯವಸ್ಥೆಯನ್ನು ಧಿಕ್ಕರಿಸಿ ನಡೆಯುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ" ಎಂದು ಒತ್ತಾಯಿಸಿದ್ದಾರೆ.