ಕಾರವಾರ: ಸಾಮಾಜಿಕ ಚಿಂತಕ, ಶ್ರೀಕೃಷ್ಣಾ ಗ್ರೂಪ್ ಸಂಸ್ಥಾಪಕ ಪುತ್ತು ಪೈ ನಿಧನ
ಕಾರವಾರ, ಆಗಸ್ಟ್ 31: ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಮಾಡಿಕೊಂಡು ಅನೇಕ ಜನರಿಗೆ ಉದ್ಯೋಗ ಒದಗಿಸಿ ಆಸರೆಯಾಗಿದ್ದ ಮಾದರಿ ವ್ಯಕ್ತಿತ್ವದ ಶ್ರೀಕೃಷ್ಣಾ ಗ್ರೂಪ್ನ ಸಂಸ್ಥಾಪಕ ಅಧ್ಯಕ್ಷ, ಶ್ರೀಕೃಷ್ಣಾ ಮಿಲ್ಕ್ಸ್ ಲಿ. ಅಧ್ಯಕ್ಷರಾಗಿದ್ದ ಪುತ್ತು (ಹನುಮಂತ) ಪೈ ಸೋಮವಾರ ರಾತ್ರಿ ಭಟ್ಕಳ ತಾಲ್ಲೂಕಿನ ಕಿರವತ್ತಿಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತ ಪುತ್ತು (ಹನುಮಂತ) ಪೈಯವರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ. ಸೋಮವಾರ ಕಿರುವತ್ತಿಯ ತಮ್ಮ ನಿವಾಸದಲ್ಲಿ ಶ್ರೀಕೃಷ್ಣಾಷ್ಟಮಿಯ ಪೂಜೆಯನ್ನು ನೇರವರಿಸಿದ್ದರು. ಪೂಜೆಯ ಬಳಿಕ ಇವರಿಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ.
ಶ್ರೀಕೃಷ್ಣಾ ಮಿಲ್ಕ್ ಸಂಸ್ಥಾಪಕರಾಗಿದ್ದ ಪುತ್ತು ಪೈ ಸದಾ ಸಾಮಾಜಿಕ, ಧಾರ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಗೋಕರ್ಣದ ಪರ್ತಗಾಳಿ ಶ್ರೀಮದ್ ವಿದ್ಯಾಧಿರಾಜ ಶ್ರೀಪಾದ ಒಡೆಯರ ಸ್ವಾಮೀಜಿಯ ಪ್ರಿಯ ಶಿಷ್ಯರಲ್ಲಿ ಪುತ್ತು ಪೈ ಒಬ್ಬರಾಗಿದ್ದರು. ಗೋಕರ್ಣ ಪರ್ತಗಾಳಿ ಮಠಕ್ಕಾಗಿ ಹಗಲಿರುಳು ಸೇವೆ ಸಲ್ಲಿಸಿದ್ದಾರೆ.
ಬದರಿನಾಥ ಚಾತುರ್ಮಾಸ ವ್ರತ ಸೇರಿದಂತೆ ವಿವಿಧೆಡೆ ಸ್ವಾಮೀಜಿಯವರ ಚಾತುರ್ಮಾಸದಲ್ಲಿ ಅವರೊಂದಿಗೆ ವಾಸ್ತವ್ಯ ಹೂಡಿದ್ದರು. ಭಟ್ಕಳ ಶ್ರೀಶಾಂತೇರಿ ಕಾಮಾಕ್ಷೀ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅಭಿವೃದ್ಧಿಗೆ ತನ್ನದೆ ಕೊಡುಗೆ ನೀಡಿದ್ದರು. ಪುತ್ತು ಪೈ ಅಕಾಲಿಕ ಮರಣದಿಂದ ಉತ್ತರ ಕನ್ನಡ ಜಿಲ್ಲೆಯ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಶೋಕ ಸಾಗರದಲ್ಲಿ ಮುಳುಗಿದ್ದು, ಭಟ್ಕಳ ಜಿಎಸ್ಬಿ ಸಮಾಜದ ಅಂಗಡಿ ಮಳಿಗೆಗಳು ಬಂದ ಮಾಡಿ ಗೌರವ ಸೂಚಿಸಿದೆ.
ಮೃತರ ಅಂತಿಮ ದರ್ಶನಕ್ಕಾಗಿ ಭಟ್ಕಳದ ಅವರ ನಿವಾಸದಲ್ಲಿ ೧೨ ಗಂಟೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಂತಿಮ ಸಂಸ್ಕಾರವನ್ನು ಭಟ್ಕಳದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Recommended Video