ಯಲ್ಲಾಪುರ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಯೋಧ ನಾಪತ್ತೆ
ಕಾರವಾರ ಮೇ 4: ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರಕ್ಕೆ ನಿಯೋಜನೆಗೊಂಡಿದ್ದ ಅರೆ ಸೇನಾಪಡೆಯ ಯೋಧನೋರ್ವ ಕರ್ತವ್ಯದ ವೇಳೆಯೇ ಕಾಣೆಯಾಗಿದ್ದಾನೆ. ಮಹಾರಾಷ್ಟ್ರ ಮೂಲದ ಪ್ರಸ್ತುತ ಉತ್ತರ ಪ್ರದೇಶದ 49ನೇ ಬೆಟಾಲಿಯನ್ ನಲ್ಲಿ ಕಾನ್ಸ್ ಟೇಬಲ್ ಆಗಿರುವ ಗಣೇಶ್ ಕಾರಟ್ ಕಾಣೆಯಾದವರು.
ಬುಧವಾರ ಮಧ್ಯರಾತ್ರಿ ಶಿರಸಿ ತಾಲೂಕಿನ ದಾಸನಕೊಪ್ಪ ಚೆಕ್ ಪೋಸ್ಟ್ನಲ್ಲಿ ರಾತ್ರಿ ಪಾಳಿಯಲ್ಲಿ ಕಾವಲು ಕಾಯುತ್ತಿದ್ದ ಇವರು ಮಧ್ಯರಾತ್ರಿ ವೇಳೆ ಮೂತ್ರ ವಿಸರ್ಜನೆಗೆ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ.
ಯಲ್ಲಾಪುರ ಕ್ಷೇತ್ರ: ಹವ್ಯಕರ ಮತಗಳೇ ನಿರ್ಣಾಯಕ
ಕರ್ತವ್ಯದಲ್ಲಿದ್ದ ವೇಳೆ ಬಳಸುತ್ತಿದ್ದ ರೈಫಲ್ ಸಮೇತ ನಾಪತ್ತೆಯಾಗಿದ್ದು ಈ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನವಾಸಿ ಠಾಣೆಯ ಪೊಲೀಸರು ದಾಸನಕೊಪ್ಪಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಯೋಧನಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದಾರೆ.
ಯೋಧರು ಹೀಗೆ ನಾಪತ್ತೆಯಾಗುತ್ತಿರುವುದು ಇದೇ ಮೊದಲೇನಲ್ಲ. ಪ್ರತಿ ವರ್ಷ ಕರ್ತವ್ಯನಿರತ ಭಾರತೀಯ ಯೋಧರು ನಾಪತ್ತೆಯಾಗುತ್ತಲೇ ಇರುತ್ತಾರೆ. ಆದರೆ ಕೆಲವರು ನಾನಾ ಅವಘಡಗಳಿಗೆ ಸಿಲುಕಿ ನಾಪತ್ತೆಯಾದರೆ, ಇನ್ನು ಕೆಲವರ ಶೋಧ ಕಾರ್ಯ ನಿರಂತವಾಗಿ ನಡೆಯುತ್ತಲೇ ಇರುತ್ತದೆ ಎಂಬುದು ಗಮನಾರ್ಹ ಸಂಗತಿ.