ಅಂಗವಿಕಲರ ಐಪಿಸಿಎ ವಿಶ್ವ ಚೆಸ್ ಚಾಂಪಿಯನ್ ಷಿಪ್ ನಲ್ಲಿ ಸಮರ್ಥ ಭಾಗಿ
ಕಾರವಾರ, ಜೂನ್.22: ಜೆಕ್ ಗಣರಾಜ್ಯದ ಪ್ರೇಗ್ ನಲ್ಲಿ ಆಯೋಜನೆಯಾಗಿರುವ ಅಂಗವಿಕಲರ ಐಪಿಸಿಎ ವಿಶ್ವ ಚೆಸ್ ಚಾಂಪಿಯನ್ ಷಿಪ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಮರ್ಥ ಜಿ. ರಾವ್ ಪಾಲ್ಗೊಂಡಿದ್ದಾರೆ.
ಈ ಟೂರ್ನಿಯಲ್ಲಿ ಭಾರತದ ಒಟ್ಟು ಮೂವರು ಸ್ಪರ್ಧಿಗಳು ಭಾಗವಹಿಸಿದ್ದಾರೆ. ಸಮರ್ಥ ಜೊತೆ ಪುಣೆಯ ಶಶಿಕಾಂತ ಕುತ್ವಾಲ್ ಹಾಗೂ ತಮಿಳುನಾಡಿನ ತಿರು ಚಿರಾಪಳ್ಳಿಯ ಕೆ.ಜೆನ್ನಿತಾ ಆಯಂಟೊ ತೆರಳಿದ್ದಾರೆ.
ಓಡಾಡಲು,ಮಾತನಾಡಲು ಅಸಮರ್ಥ, ಚದುರಂಗದಲ್ಲಿ ಈತ ಸಮರ್ಥ
ಟೂರ್ನಿ ಜೂ. 21ರಂದು ಆರಂಭವಾಗಿದ್ದು 30ರ ವರೆಗೆ ನಡೆಯಲಿದೆ. ದೈಹಿಕವಾಗಿ ಓಡಾಡಲು ಹಾಗೂ ಸ್ಪಷ್ಟವಾಗಿ ಮಾತನಾಡಲು ಬರದ ಸಮರ್ಥ ಚದುರಂಗದ ಆಟದಲ್ಲಿ ಎಲ್ಲರಿಗಿಂತಲೂ ಸಮರ್ಥ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಎಂ.ಪಿ.ಇ ಸೊಸೈಟಿಯ ಎಸ್.ಡಿ.ಎಂ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಸಮರ್ಥ ಜೆ.ರಾವ್ ಎಂಥವರಿಗೂ ಕೂಡ ಸ್ಪೂರ್ತಿಯ ಮೂರ್ತಿ.
ಹುಟ್ಟಿದ ಬಳಿಕ ಸೆಲೆಬ್ರಲ್ ಪಾಲ್ಸಿಯಿಂದ ವಿಕಲಚೇತನಕ್ಕೆ ತುತ್ತಾದ ಸಮರ್ಥ, ಸರಾಗವಾಗಿ ನಡೆಯಲಾರ ಹಾಗೂ ಸ್ಪಷ್ಟವಾಗಿ ಮಾತನಾಡಲು ಕೂಡ ಈತನಿಂದ ಅಸಾಧ್ಯ. ಇದರಿಂದ ತಂದೆ ಅಥವಾ ತಾಯಿಯೇ ಈತನನ್ನು ಹೊತ್ತುಕೊಂಡೇ ಹೋಗ ಬೇಕು. ಶಾಲೆ, ಕಾಲೇಜಿಗೂ ಕೂಡ ಹೊತ್ತು ಕೊಂಡೇ ಹೋಗಿ ಬಿಟ್ಟುಬರಬೇಕು.
ಆದರೆ, ಚದುರಂಗದಲ್ಲಿ ಮಾತ್ರ ಈತ ಅಸಾಮಾನ್ಯ ಆಟಗಾರ. ಇದೀಗ ಅಂಗವಿಕಲರ ಐಪಿಸಿಎ ವಿಶ್ವ ಚೆಸ್ ಚಾಂಪಿಯನ್ ಷಿಪ್ ನಲ್ಲಿ ಸಮರ್ಥ ಪಾಲ್ಗೊಂಡಿದ್ದು, ಅವರು ಗೆದ್ದು ಬರಲಿ ಎಂಬುದೇ ಎಲ್ಲರ ಆಶಯ.