ಕೊರೊನಾಗೆ ಚಿಕಿತ್ಸೆ ಕೊಡುವ ವೈದ್ಯರಿಂದಾಗಿ ಬೆಚ್ಚಿದ ಶಿರಸಿ!
ಶಿರಸಿ, ಏಪ್ರಿಲ್ 03: ಮಹಾರಾಷ್ಟ್ರದ ಪೂನಾದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯರು ಶಿರಸಿಗೆ ಬಂದು ತಿರುಗಾಡಿರುವ ವಿಷಯ ಇದೀಗ ಇಡೀ ನಗರವನ್ನು ಬೆಚ್ಚಿ ಬೀಳಿಸಿದೆ.
ಕೊರೊನಾ ಮಹಾಮಾರಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶಿರಸಿ ಮೂಲದ ಕುಟುಂಬದ ಮೂವರು ವೈದ್ಯರು ಪೂನಾದ ಆಸ್ಪತ್ರೆಯೊಂದರಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಅವರು ಶಿರಸಿಗೆ ಬಂದಿರುವುದು ಸ್ಥಳೀಯರು ಆತಂಕಗೊಳ್ಳುವಂತೆ ಮಾಡಿದೆ.
ಹಳಿಯಾಳದಲ್ಲಿ ಲಾಕ್ ಡೌನ್ ನಡುವೆ ನಮಾಜ್; 20 ಮಂದಿ ಬಂಧನ
ವೈದ್ಯರಿಗೂ ಹೋಂ ಕ್ವಾರಂಟೈನ್
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಕೊಡುವ ವೈದ್ಯರು ಬೇರೆ ರೋಗಿಗಳಿಗೆ ಚಿಕಿತ್ಸೆ ಕೊಡಬಾರದು, ಅವರೂ ಹೋಂ ಕ್ವಾರಂಟೈನ್ ನಲ್ಲಿರಬೇಕು ಎನ್ನಲಾಗಿದೆ. ಆದರೆ, ಶಿರಸಿ ಮೂಲದ ಮೂವರು ವೈದ್ಯರ ತಂದೆಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಂದೆಯನ್ನು ಕರೆದುಕೊಂಡು ಹೋಗಲು ಶಿರಸಿಗೆ ಬರುವುದಾಗಿ ತಿಳಿಸಿದ್ದರು.
ಮಹಾರಾಷ್ಟ್ರದ ಪೊಲೀಸರ ಅನುಮತಿ ಪತ್ರ
ತಂದೆಯನ್ನು ಕರೆದುಕೊಂಡು ಹೋಗಲು ತಾವು ಊರಿಗೆ ಬರುವುದಾಗಿ ಶಿರಸಿ ಪೊಲೀಸರ ಬಳಿ ವೈದ್ಯರು ತಿಳಿಸಿದಾಗ ಇದಕ್ಕೆ ಅವರು ಒಪ್ಪಿಗೆ ಕೊಟ್ಟಿರಲಿಲ್ಲ. ಆದರೂ ಮಹಾರಾಷ್ಟ್ರದ ಪೊಲೀಸ್ ಅಧಿಕಾರಿ ಕೊಟ್ಟ ಅನುಮತಿ ಪತ್ರ ಹಿಡಿದು ಶಿರಸಿಗೆ ಬುಧವಾರ ಸಂಜೆ ಮೂವರು ವೈದ್ಯರು ಆಗಮಿಸಿದ್ದರು. ಬೆಳಿಗ್ಗೆ ತಂದೆ ನೋಡಲು ಖಾಸಗಿ ಆಸ್ಪತ್ರೆಗೆ ಬಂದಾಗ ವಿಷಯ ತಿಳಿದ ಆಸ್ಪತ್ರೆಯ ವೈದ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ತಂದೆಯನ್ನು ಕರೆದುಕೊಂಡು ಹೋದ ವೈದ್ಯರು
ಆದರೂ ಕೆಲವರ ಒತ್ತಡವನ್ನು ಮಹಾರಾಷ್ಟ್ರ ಮೂಲದ ವೈದ್ಯರು ತಂದು ಬುಧವಾರ ಅಂತಿಮವಾಗಿ ಸಂಜೆ ವೇಳೆ ಪೊಲೀಸರ ಅನುಮತಿ ಪಡೆದು ಪೂನಾಕ್ಕೆ ತಂದೆಯನ್ನು ಕರೆದುಕೊಂಡು ಹೋಗಲು ಮುಂದಾದರು. ಪೊಲೀಸರು ಪೂನಾ ಮೂಲದ ವೈದ್ಯರಿಗೂ ಕೈಗೆ ಸೀಲನ್ನು ಹಾಕಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಆತಂಕ ತಂದ ವೈದರ ಸುದ್ದಿ
ಶಿರಸಿ ನಗರದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು ಇಡೀ ಪಟ್ಟಣದಲ್ಲಿ ತಿರುಗಾಟ ಮಾಡಿದ್ದಾರೆ ಎನ್ನುವ ವಿಷಯ ಹಬ್ಬಿದ್ದು, ಇದು ಎಲ್ಲರಲ್ಲೂ ಆತಂಕ ಸೃಷ್ಟಿ ಮಾಡಿದೆ. ಇಷ್ಟು ದಿನ ಕೊರೊನಾ ನಮ್ಮೂರಿಗೆ ಕಾಲಿಟ್ಟಿಲ್ಲ ಎಂದು ನೆಮ್ಮದಿಯಿಂದ ಇದ್ದೆವು. ಆದರೆ, ಈಗ ಭಯ ಕಾಡುತ್ತಿದೆ ಎಂದು ಸ್ಥಳೀಯರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.