ಜಾತ್ರಾ ಗದ್ದುಗೆಯಲ್ಲಿ ವಿರಾಜಮಾನಳಾದ ಮಾರಿಕಾಂಬೆ; ನಾಳೆಯಿಂದ ದರ್ಶನ
ಕಾರವಾರ, ಮಾರ್ಚ್ 04: ಶಿರಸಿಯ ಶ್ರೀಮಾರಿಕಾಂಬಾ ದೇವಿಯು ಇಂದು ಜಾತ್ರಾ ಗದ್ದುಗೆಯಲ್ಲಿ ವಿರಾಜಮಾನವಾದಳು. ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಯೆಂಬ ಹೆಗ್ಗಳಿಕೆ ಹೊಂದಿರುವ ಶಿರಸಿ ಮಾರಿಕಾಂಬಾ ಜಾತ್ರೆಯು ಎರಡು ವರ್ಷಕ್ಕೊಮ್ಮೆ ಅದ್ದೂರಿಯಾಗಿ ನಡೆಯುತ್ತದೆ.
ಜಾತ್ರಾ ಮಹೋತ್ಸವದ ಮಹತ್ವದ ಘಟ್ಟವಾದ ಇಂದು ಬೆಳಿಗ್ಗೆ 7.17 ರ ಸುಮಾರಿಗೆ ರಥಾರೂಢಳಾದ ದೇವಿಯು, ಲಕ್ಷಾಂತರ ಸಂಖ್ಯೆಯ ಭಕ್ತರ ಉದ್ಘಾರದ ನಡುವೆ ಶೋಭಾಯಾತ್ರೆ ಹೊರಟಳು. ವಿದ್ಯುಕ್ತವಾಗಿ ವಿಧಿ ವಿಧಾನಗಳ ನಂತರ ಭಕ್ತರು ಬೆಳಿಗ್ಗೆ 8 ರ ಸುಮಾರಿಗೆ ರಥವನ್ನು ಎಳೆಯಲಾರಂಭಿಸಿದರು.
ಶ್ರೀರಾಮಚಂದ್ರಾಪುರ ಮಠದಿಂದ ವಿಷ್ಣುಗುಪ್ತ ವಿವಿ: ರಾಘವೇಶ್ವರ ಶ್ರೀ
ದೇವಾಲಯದ ಎದುರಿನಿಂದ ಪ್ರಾರಂಭವಾಗಿ ಸುಮಾರು ಒಂದೂವರೆ ಕಿಲೋಮೀಟರ್ ದೂರದ ಬಿಡಕಿ ಬಯಲಿನ ಜಾತ್ರಾ ಗದ್ದುಗೆಯನ್ನು ರಥ ತಲುಪಲು ಸುಮಾರು ನಾಲ್ಕೂವರೆ ತಾಸು ತಗೆದುಕೊಂಡಿತು. ಮಧ್ಯಾಹ್ನ 1.35 ರೊಳಗಿನ ಮುಹೂರ್ತದಲ್ಲಿ ಜಾತ್ರಾ ಗದ್ದುಗೆಯಲ್ಲಿ ದೇವಿಯ ಪ್ರತಿಷ್ಠಾಪನಾ ಕಾರ್ಯ ವಿಧ್ಯುಕ್ತವಾಗಿ ನೆರವೇರಿತು.
ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ದೇವಿಯ ದರ್ಶನ ಮತ್ತು ಪೂಜಾ ಹರಕೆ ಸೇವೆ ಸಮರ್ಪಣಾ ಕಾರ್ಯವು ನಾಳೆಯಿಂದ (ಗುರುವಾರ) ಬೆಳಿಗ್ಗೆ 5 ರಿಂದ ಪ್ರಾರಂಭವಾಗಲಿದೆ. ನಂತರದ ಎಂಟು ದಿನಗಳ ಕಾಲ ಮುಂಜಾನೆಯಿಂದ ರಾತ್ರಿ 10 ರವರೆಗೆ ಲಕ್ಷಾಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯಲಿದ್ದಾರೆ.