ಸರಳವಾಗಿ ನೆರವೇರಿದ ಮದ್ಯ, ಸಿಗರೇಟು ಪ್ರಿಯ ಖಾಪ್ರಿ ದೇವರ ಜಾತ್ರೆ
ಕಾರವಾರ, ಏಪ್ರಿಲ್ 18: ಮದ್ಯ ಹಾಗೂ ಸಿಗರೇಟು ಪ್ರಿಯ ಕಾರವಾರದ ಕೋಡಿಭಾಗದ ಖಾಪ್ರಿ ದೇವರ ಜಾತ್ರಾ ಮಹೋತ್ಸವವು ಈ ಬಾರಿ ಕೋವಿಡ್ ಕಾರಣದಿಂದಾಗಿ ಸರಳವಾಗಿ ನೆರವೇರಿತು.
ಕೊರೊನಾ ಸೋಂಕು ಕಾರಣ ಧಾರ್ಮಿಕ ಆಚರಣೆಗಳನ್ನೂ ನಿಷೇಧಿಸಿ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದರೆ ಮಾರ್ಗಸೂಚಿ ಪ್ರಕಟಗೊಳ್ಳುವ ಮುನ್ನವೇ ಜಾತ್ರಾ ಮಹೋತ್ಸವಕ್ಕೆ ದಿನ ನಿಗದಿಯಾಗಿತ್ತು. ಹೀಗಾಗಿ ಸಾಂಪ್ರದಾಯಿಕ ವಾರ್ಷಿಕ ಜಾತ್ರೆಯನ್ನು ನಿಲ್ಲಿಸಬಾರದು ಎಂಬ ಕಾರಣಕ್ಕೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಜಾತ್ರೆಯನ್ನು ಅತೀ ಸರಳವಾಗಿ ಆಚರಿಸಲಾಯಿತು.
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ ಹೆಗಡೆ ಕೊರೊನಾಗೆ ಬಲಿ; ಸಿಎಂ ಸಂತಾಪ
ಪ್ರತಿವರ್ಷ ಉತ್ತರ ಕನ್ನಡ ಜಿಲ್ಲೆಯಿಂದಷ್ಟೇ ಅಲ್ಲದೇ ಗೋವಾ, ಮಹಾರಾಷ್ಟ್ರಗಳಿಂದಲೂ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸಿ, ಹರಕೆ, ಪೂಜೆ ಸಲ್ಲಿಸುತ್ತಿದ್ದರು. ಆದರೆ, ಈ ಬಾರಿ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಕಾರಣ ಜಿಲ್ಲೆಯ ಪ್ರವೇಶಕ್ಕೆ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳುತ್ತಿರುವುದರಿಂದ ಕಾರವಾರದವರನ್ನು ಬಿಟ್ಟರೆ ಬೇರೆ ತಾಲೂಕಾಗಲಿ, ಗೋವಾ, ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿಲ್ಲ. ಹೀಗಾಗಿ ಸ್ಥಳೀಯ ಕೇವಲ 30 ರಿಂದ 50 ಭಕ್ತರ ನಡುವೆ ಖಾಪ್ರಿ ದೇವರ ಜಾತ್ರಾ ವಿಧಿವಿಧಾನಗಳು ನೆರವೇರಿತು.
ಸಿಗರೇಟು, ಮದ್ಯ ಅರ್ಪಣೆ
ಸಾಮಾನ್ಯವಾಗಿ ದೇವರಿಗೆ ಹೂವು-ಹಣ್ಣು, ಕಾಯಿ, ಬಾಳೆಗೊನೆ, ಅಗರಬತ್ತಿ ಅರ್ಪಣೆ ಸಾಮಾನ್ಯ. ಆದರೆ ಹಣ್ಣು, ಕಾಯಿ, ಹೂವಿನ ಜತೆಗೆ ಹಲವರು ಮದ್ಯದ ಬಾಟಲಿ ಹಾಗೂ ಸಿಗರೇಟನ್ನು ನೈವೇದ್ಯವಾಗಿ ದೇವರಿಗೆ ಸಲ್ಲಿಸುತ್ತಾರೆ. ಸರ್ವಾಲಂಕೃತ ದೇವರ ವಿಗ್ರಹಕ್ಕೆ ಪೂಜೆ ಸಲ್ಲಿಸುವ ಅರ್ಚಕರು, ಮರೆಯಲ್ಲಿರುವ ದೇವರ ಚಿಕ್ಕ ಮೂರ್ತಿಗೆ ಮದ್ಯವನ್ನು ಅಭಿಷೇಕ ಮಾಡುತ್ತಾರೆ.
ಸರ್ವಧರ್ಮೀಯರ ಕೇಂದ್ರ
ಖಾಪ್ರಿ ದೇಗುಲ ಸರ್ವಧರ್ಮ ಸಮನ್ವಯ ಕೇಂದ್ರವೆಂದೂ ಗುರುತಿಸಿಕೊಂಡಿದೆ. ಜಾತ್ರೆಗೆ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮೀಯರೂ ಬರುತ್ತಾರೆ. ಕರ್ಪೂರ, ಸಕ್ಕರೆ, ಅಗರಬತ್ತಿ, ಮೇಣದಬತ್ತಿಯನ್ನು ಹರಕೆಯ ರೂಪದಲ್ಲಿ ಅರ್ಪಿಸುತ್ತಾರೆ. ಅಲ್ಲದೇ ಕೋಳಿ ಬಲಿಯೂ ನೀಡುತ್ತಾರೆ.
ಖಾಪ್ರಿ ದೇವರ ಇತಿಹಾಸ
ಸುಮಾರು ಒಂದು ಶತಮಾನಗಳ ಹಿಂದೆ ದಕ್ಷಿಣ ಆಫ್ರಿಕಾ ದೇಶದ ಖಾಪ್ರಿ ಹೆಸರಿನ ಪ್ರಜೆ ಇಲ್ಲಿ ಗುಡಿಸಲೊಂದರಲ್ಲಿ ವಾಸವಾಗಿದ್ದನಂತೆ. ಆತ ಪರೋಪಕಾರಿ ವ್ಯಕ್ತಿಯಾಗಿದ್ದ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದನಂತೆ. ಹಾಗಾಗಿ ಅವನಿಗೆ ಬಡವರ ರಕ್ಷಕ ಎಂದು ಕರೆಯಲಾಗುತ್ತಿತ್ತು. ಕೆಲವರ ಪಾಲಿಗೆ ಆತನೆ ದೇವಮಾನವ. ಹೀಗಿರುವಾಗ ಆತ ಇದ್ದಕ್ಕಿದ್ದಂತೆ ಕಣ್ಮರೆಯಾದ. ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ. ಆದರೂ ಜನಗಳಿಗೆ ಆತನ ಮೇಲೆ ಅಪಾರವಾದ ಭಯ -ಭಕ್ತಿ ಹೊಂದಿದ್ದರು. ಒಂದು ದಿನ ಗ್ರಾಮದ ಪರಸಪ್ಪ ಎಂಬಾತನಿಗೆ ಕಣ್ಮರೆಯಾದ ಖಾಫ್ರಿ ಕನಸಿನಲ್ಲಿ ಬಂದು ತನಗೊಂದು ಗುಡಿಯನ್ನು ಕಟ್ಟುವಂತೆ ಹಾಗೂ ತನಗೆ ಇಷ್ಟವಾದ ಸಾರಾಯಿ, ಸಿಗರೇಟು ಮಾಂಸದ ಭಕ್ಷಾದಿಗಳನ್ನು ನೀಡುವಂತೆ ಸೂಚಿಸಿದನಂತೆ ಎನ್ನಲಾಗುತ್ತದೆ. ಇದರಿಂದ ಪರಸಪ್ಪ ಖಾಫ್ರಿಯ ಒಂದು ಕಲ್ಲಿನ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ ಪೂಜಿಸಲು ಪ್ರಾರಂಭಿಸಿದ.
Recommended Video
ಸಾಕ್ಷಾತ್ ದೇವನಾಗಿ ಇಲ್ಲಿ ನೆಲೆ ನಿಂತಿದ್ದಾನೆ
ಖಾಪ್ರಿಯ ಮೇಲೆ ಭಯ-ಭಕ್ತಿಯಿದ್ದವರು ಆಗಾಗ ಬಂದು ಆತನ ಕಲ್ಲಿನ ಮೂರ್ತಿಗೆ ಸೇವೆಯನ್ನು ಸಲ್ಲಿಸಲು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಖಾಪ್ರಿ ಭಕ್ತರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಬರುವಾಗ ಇದನ್ನು ಕಡ್ಡಾಯವಾಗಿ ಸಾರಾಯಿ, ಸಿಗರೇಟು ತಂದು ದೇವರಿಗೆ ಸಲ್ಲಿಸುತ್ತಾರೆ. ಸ್ಥಳೀಯರ ಪ್ರಕಾರ ಖಾಪ್ರಿ ಎನ್ನುವ ಸಂತ ಇಂದು ಜನರ ನಮ್ಮ ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸುವ, ಇಷ್ಟಾರ್ಥ ಬೇಡಿಕೆಗಳನ್ನು ಈಡೇರಿಸುವ ಸಾಕ್ಷಾತ್ ದೇವನಾಗಿ ಇಲ್ಲಿ ನೆಲೆ ನಿಂತಿದ್ದಾನೆ. ಭಕ್ತಾದಿಗಳು ಅವನ ಮೇಲೆ ಭಕ್ತಿ ಇರಿಸಿಕೊಂಡು ಬಂದು ತಮ್ಮ ಯತಾರ್ಥವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.