ಕಾರವಾರದ ಪ್ರವಾಹ ಪೀಡಿತ ಸ್ಥಳಕ್ಕೆ ಸಿದ್ದರಾಮಯ್ಯ ಭೇಟಿ; ಸರ್ಕಾರಕ್ಕೆ ತರಾಟೆ
ಕಾರವಾರ, ಆಗಸ್ಟ್ 02: ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ ವಿಪಕ್ಷ ನಾಯಕ ಸಿದ್ದರಾಮಯ್ಯ, "ಕದ್ರಾ ಹಾಗೂ ಮಲ್ಲಾಪುರ ನೆರೆ ಹಾವಳಿ ಪ್ರದೇಶವನ್ನು ವೀಕ್ಷಣೆ ಮಾಡಿದ್ದೇನೆ, ಮಳೆ ಬಂದಾಗ ಪ್ರವಾಹ ಉಂಟಾಗುತ್ತದೆ ಎಂದು ಗೊತ್ತಿದ್ದರೂ, ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ,'' ಎಂದು ಆರೋಪಿಸಿದರು.
"ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರನ್ನು ಸ್ಥಳಾಂತರ ಮಾಡುವುದೇ ಶಾಶ್ವತ ಪರಿಹಾರ. ಸಂತ್ರಸ್ತರ ಪರವಾಗಿ ರಾಜ್ಯ ಸರಕಾರದ ಗಮನ ಎರಡು ಬಾರಿ ಸೆಳೆದಿದ್ದೇವೆ. 2019ರ ಬಳಿಕ ಈ ಬಾರಿಯೂ ಅದೇ ರೀತಿಯ ಪ್ರವಾಹ ಬಂದಿದೆ,'' ಎಂದು ತಿಳಿಸಿದರು.
"ಈ ಬಾರಿಯೂ ಅದೇ ಪರಿಸ್ಥಿತಿ ಮುಂದುವರೆದಿದ್ದು, ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಸರಕಾರದ ಮೇಲೆ ಒತ್ತಾಯ ಮಾಡಲಾಗುವುದು. ಕಾಂಗ್ರೆಸ್ ಪಕ್ಷದಿಂದ ಎಷ್ಟು ಪರಿಹಾರ ಕೊಡೊಕಾಗುತ್ತದೋ ಅಷ್ಟು ಕೊಡುತ್ತೇವೆ,'' ಎಂದರು.
"ರಾಜ್ಯದಲ್ಲಿ ನಮ್ಮ ಸರಕಾರ ಇದ್ದಿದ್ದರೆ ಜಿಲ್ಲೆಯ ಪ್ರವಾಹ ಪೀಡಿತ ಜನರಿಗೆ ಶಾಶ್ವತ ಪರಿಹಾರ ಒದಗಿಸುತ್ತಿದ್ದಿವಿ. ಕೈಗಾ ಹಾಗೂ ಕೆಪಿಸಿಎಲ್ ಅಧಿಕಾರಿಗಳು ಜತೆ ಮಾತನಾಡಿದ್ದು, ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಸೂಚನೆ ನೀಡಿದ್ದೇನೆ,'' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
"ಪ್ರವಾಹ ಪೀಡಿತ ಸ್ಥಳಗಳನ್ನು ಹಾಗೂ ಸಂತ್ರಸ್ತರನ್ನು ನಿರ್ಲಕ್ಷಿಸಿದ್ದರಿಂದ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತೇನೆ,'' ಎಂದು ವಿಪಕ್ಷ ನಾಯಕ ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಕದ್ರಾ ಜಲಾಶಯವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಣೆ ಮಾಡಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾದ ಪ್ರವಾಹದ ಭೀಕರತೆಯ ಬಗ್ಗೆ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ರಿಂದ ಮಾಹಿತಿ ಪಡೆದುಕೊಂಡರು.
ಕದ್ರಾ ಜಲಾಶಯದಿಂದ ನೀರು ಹೊರ ಬಿಟ್ಟ ಪರಿಣಾಮವಾಗಿ ಕಾರವಾರ ತಾಲ್ಲೂಕಿನಲ್ಲಿ ಏನೆಲ್ಲ ಸಮಸ್ಯೆ ಆಯ್ತು ಎಂಬ ಬಗ್ಗೆಯೂ ಮಾಹಿತಿ ಪಡೆದ ಸಿದ್ದರಾಮಯ್ಯ, ಕದ್ರಾ ಮತ್ತು ಮಲ್ಲಾಪುರದ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅತಿಯಾಗಿ ಹಾನಿ ಆಗಿದ್ದ ಕದ್ರಾ ಮಲ್ಲಾಪುರ ಗ್ರಾಮದ ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರದಿದ್ದ ನೆರೆ ಪೀಡಿತ ಸ್ಥಳಕ್ಕೆ ಸಿದ್ದರಾಮಯ್ಯ ಆಗಮಿಸಿ, ಜನರ ಸಂಕಷ್ಟ ತಿಳಿದುಕೊಂಡರಲ್ಲದೇ, ಸರಕಾರದ ಗಮನ ಸೆಳೆಯುವ ಭರವಸೆ ನೀಡಿದರು.
Recommended Video
ಇನ್ನು ಕೆಪಿಸಿ ಅಧಿಕಾರಿಗಳ ನಿರ್ಲಕ್ಷದಿಂದಲೇ ಪದೇ ಪದೇ ಪ್ರವಾಹ ಎದುರಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಅಂಕೋಲಾಕ್ಕೆ ಆಗಮಿಸಿದ್ದಾಗ, ಕಾರವಾರಕ್ಕೆ ಆಗಮಿಸಿ ಕಾಳಿ ನದಿ ಪ್ರವಾಹದಿಂದ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿದ್ದರೆ ಇದಕ್ಕೆ ಶಾಶ್ವತ ಪರಿಹಾರವಾದರೂ ಸಿಗುತ್ತಿತ್ತು. ಆದರೆ ಸಿಎಂ ಬೊಮ್ಮಾಯಿ ಆಗಮಿಸದೇ ನಿರ್ಲಕ್ಷ ತೋರಿದ್ದಾರೆ ಎನ್ನುವ ಆರೋಪ ಕೇಳಿ ಸಹ ಬಂದಿದೆ. ಸಿಎಂ ಆಗಮಿಸದೇ ಇರುವುದಕ್ಕೆ ವಿರೋಧ ಸಹ ಕೇಳಿ ಬಂದಿತ್ತು.
ಇದರ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಕದ್ರಾ ಜಲಾಶಯದಿಂದ ನೀರು ಹೊರಬಿಟ್ಟಿದ್ದರಿಂದ ಹಾನಿಗೊಳಗಾದ ಹಲವು ಗ್ರಾಮಗಳಿಗೆ ಭೇಟಿ ನೀಡಿದ್ದು, ಇದಲ್ಲದೇ ಕೆಪಿಸಿ, ಕೈಗಾ ಅಧಿಕಾರಿಗಳ ಜೊತೆ ಸಹ ಸಭೆ ನಡೆಸುವ ಮೂಲಕ ಸಿಎಂ ಆಗಮಿಸದೇ ಸೃಷ್ಟಿಯಾಗಿರುವ ವಿರೋಧದ ಲಾಭವನ್ನು ಕಾಂಗ್ರೆಸ್ ಪಡೆಯಲು ಮುಂದಾಗಿದೆ ಎನ್ನಲಾಗಿದೆ.