ಸರ್ಕಾರದ ದಿನಕ್ಕೊಂದು ಆದೇಶದಿಂದ ಸಚಿವ ಹೆಬ್ಬಾರ್, ಜಿಲ್ಲಾಡಳಿತದ ಅಧಿಕಾರಿಗಳಲ್ಲೇ ಗೊಂದಲ!
ಕಾರವಾರ, ಏಪ್ರಿಲ್ 22; ಸರ್ಕಾರ ಇಂದು ಹೊರಡಿಸಿರುವ ಪರಿಷ್ಕೃತ ಆದೇಶದ ಕುರಿತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಮಾಹಿತಿ ಕೊರತೆ ಉಂಟಾಗಿದ್ದು, ಜಿಲ್ಲಾಡಳಿತದ ಅಧಿಕಾರಿಗಳಿಗೂ ಗೊಂದಲ ಮೂಡಿಸಿದೆ.
ರಾತ್ರಿ ಕರ್ಫ್ಯೂ ಕುರಿತು ಆದೇಶ ಹೊರಡಿಸಿದ್ದ ಸರ್ಕಾರ, ಕರ್ಫ್ಯೂ ಅವಧಿಯಲ್ಲಿ ಅಂದರೆ ರಾತ್ರಿ 9ರಿಂದ ಬೆಳಿಗ್ಗೆ 6 ಹಾಗೂ ಶನಿವಾರ ಮತ್ತು ಭಾನುವಾರ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸಂಪೂರ್ಣವಾಗಿ ಅಂಗಡಿ- ಮುಂಗಟ್ಟು, ಸೇವೆಗಳಿಗೆ ನಿರ್ಬಂಧಿಸಿತ್ತು.
ಸ್ಪಷ್ಟತೆಯಿಲ್ಲದ ಪರಿಷ್ಕೃತ ದಿಢೀರ್ ಮಾರ್ಗಸೂಚಿ: ಶೇ.90 ಲಾಕ್ಡೌನ್ನತ್ತ ರಾಜ್ಯ
ಆದರೆ ಇಂದು ಮಧ್ಯಾಹ್ನ ಪರಿಷ್ಕೃತ ಆದೇಶ ಹೊರಡಿಸಿ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ, ಮುಂಗಟ್ಟುಗಳನ್ನು ಮೇ 4ರವರೆಗೆ ಮುಚ್ಚುವಂತೆ ಆದೇಶಿಸಲಾಗಿದೆ.
ಕೊರೊನಾ ಕರ್ಫ್ಯೂ: ಹೊಸ ಕಠಿಣ ಮಾರ್ಗಸೂಚಿ ಪ್ರಕಟ, ಏನಿರುತ್ತೆ? ಏನಿರಲ್ಲ?
ಹೀಗಾಗಿ ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಂಗಡಿಗಳನ್ನು ಏಕಾಏಕಿ ಮುಚ್ಚಿಸಿದ್ದಾರೆ. ಇದರಿಂದಾಗಿ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದ್ದು, ಅಂಗಡಿಕಾರರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ರಂಜಾನ್ ಆಚರಣೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ
ಎರಡು ವಾರಗಳ ಕಾಲ ಅಂಗಡಿಗಳನ್ನು ಮುಚ್ಚಿದರೆ ಜೀವನ ನಿರ್ವಹಣೆ ಹೇಗೆ? ಎಂಬ ಚಿಂತೆ ಎದುರಾಗಿದೆ. ಈ ಬಗ್ಗೆ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಶಿವರಾಮ ಹೆಬ್ಬಾಳ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನಿಸಿದರೆ, "ಆ ರೀತಿಯ ಯಾವ ಆದೇಶವೂ ಇಲ್ಲ. ಕರ್ಫ್ಯೂ ಅವಧಿಯಲ್ಲಿ ಮಾತ್ರ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆಲ್ಲವೂ ಬಂದ್ ಇರಲಿದೆ. ಅಧಿಕಾರಿಗಳು ಕೂಡ ಆದೇಶ ಮೀರಿ ವರ್ತಿಸಬಾರದು" ಎಂದು ಹೇಳಿದರು.
ತಾಲೂಕೊಂದರ ಅಧಿಕಾರಿಗಳು ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಪ್ರಕಟಣೆ ನೀಡಿದ್ದನ್ನು ತೋರಿಸಿದಾಗಿಯೂ ಕೂಡ ಒಪ್ಪದ ಹೆಬ್ಬಾರ್, ಈ ರೀತಿಯದ್ದೆಲ್ಲ ಸರಿಯಲ್ಲ. ಸರ್ಕಾರದ ಆದೇಶವೇ ಅಂತಿಮ ಎಂದು ಡಿಸಿ ನೀಡಿದ ನಿನ್ನೆ ರಾತ್ರಿಯ ಆದೇಶ ತೋರಿಸಿ ಮರು ನುಡಿದರು. ಇನ್ನು ಇದೇ ವೇಳೆ ಜಿಲ್ಲಾಡಳಿತದ ಅಧಿಕಾರಿಗಳಿಗೂ ಅಂಗಡಿಗಳನ್ನೆಲ್ಲ ಮುಚ್ಚಬೇಕೆ ಎಂದು ಕೇಳಿದ್ದಕ್ಕೆ, ಆ ರೀತಿಯ ಯಾವುದೇ ಆದೇಶ ನಮಗೆ ಬಂದಿಲ್ಲ ಎಂದಿದ್ದಾರೆ.
ಒಟ್ಟಾರೆಯಾಗಿ ಸರ್ಕಾರ ಗಂಟೆಗೊಂದರಂತೆ ಹೊರಡಿಸುತ್ತಿರುವ ಆದೇಶಗಳು ಜನರನ್ನಷ್ಟೇ ಅಲ್ಲ, ಜನಪ್ರತಿನಿಧಿಗಳು, ಅಧಿಕಾರಿಗಳನ್ನೂ ಗೊಂದಲಕ್ಕೆ ನೂಕುತ್ತಿದೆ. ಸರ್ಕಾರ ತನ್ನ ಪರಿಷ್ಕೃತ ಆದೇಶದಲ್ಲಿ, ಅಗತ್ಯ ಸೇವೆಗಳು ಹಾಗೂ ಆದೇಶದಲ್ಲಿ ನಮೂದಿಸಿದ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಕ್ಕೂ ನಿರ್ಬಂಧ ಹೇರಿದೆ.