ಡಿಕೆಶಿಗೆ ಕಿರಿಕಿರಿ ಕೊಡಲು ಸಿದ್ದರಾಮಯ್ಯ ಹೀಗೆ ಮಾತನಾಡುತ್ತಿದ್ದಾರೆ- ಸಚಿವ ಹೆಬ್ಬಾರ್
ಕಾರವಾರ, ಸೆಪ್ಟೆಂಬರ್ 27: "ಸಿದ್ದರಾಮಯ್ಯನವರಿಗೆ ಮತ್ತೆ ಮುಖ್ಯಮಂತ್ರಿಯಾಗುವ ಹುಮ್ಮಸ್ಸು ಬಂದಿದೆ. ಹೀಗಾಗಿ ಅವರು ಮನಸ್ಸಿಗೆ ಬಂದಂತೆ ಮಾತನಾಡುತ್ತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ರಿಗೆ ತೊಂದರೆ ಕೊಡುತ್ತಿದ್ದಾರೆ," ಎಂದು ಕಾರ್ಮಿಕ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
'ಬಿಜೆಪಿಯವರು ತಾಲಿಬಾನ್ ಹಾಗೂ ಹಿಟ್ಲರ್ ಸಂಸ್ಕೃತಿಯವರು' ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಕಾರವಾರದಲ್ಲಿ ತಿರುಗೇಟು ನೀಡಿದ ಸಚಿವ ಶಿವರಾಮ್ ಹೆಬ್ಬಾರ್, "ಅವರ ಹೇಳಿಕೆಗಳಿಂದ ಏನೂ ಆಗಲ್ಲ. ಅವರು ವಿಧಾನಸಭೆಯಲ್ಲೂ ಇದನ್ನೇ ಹೇಳಿದ್ದರು. ಅದಕ್ಕೆ ಮುಖ್ಯಮಂತ್ರಿಯವರೂ ಅಲ್ಲಿ ಸರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೂ ಅವರಿಗೆ ಸಮಾಧಾನವಾದಂತೆ ಕಾಣುತ್ತಿಲ್ಲ,'' ಎಂದರು.
ಇನ್ನು ಭಾರತ್ ಬಂದ್ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಬ್ಬಾರ್, "ಭಾರತ ಬಂದ್ ಕರ್ನಾಟಕದಲ್ಲಿ ಯಶಸ್ವಿಯಾಗಿಲ್ಲ. ಅನೇಕ ಸ್ವಯಂಘೋಷಿತ ನಾಯಕರು ಭಾರತ ಬಂದ್ಗೆ ಕರೆಕೊಟ್ಟು ಸಂಪೂರ್ಣ ವಿಫಲತೆ ಕಂಡಿದ್ದಾರೆ. ಭಾರತ ಬಂದ್ನಿಂದ ಯಾವ ಸಾಧನೆಯೂ ಆಗಿಲ್ಲ. ಕಳೆದ ಒಂದು ವರ್ಷದಿಂದ ಭಾರತ ಬಂದಾಗಿಯೇ ಇದೆ. ಮತ್ತೆ ಬಂದ್ ಮಾಡುವುದರಿಂದ ಶಿಕ್ಷಣ, ವ್ಯಾಪಾರ- ಉದ್ಯಮದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ರಾಜ್ಯದ ಹಾಗೂ ದೇಶದ ಜನ ಈ ಭಾರತ ಬಂದ್ ಅನ್ನು ಒಪ್ಪಿಕೊಂಡಿಲ್ಲ, ಪ್ರಬಲವಾಗಿ ವಿರೋಧಿಸಿದ್ದಾರೆ," ಎಂದು ತಿರುಗೇಟು ನೀಡಿದರು.
"ಕೆಲವರು ನೈತಿಕವಾಗಿ ಬೆಂಬಲವನ್ನಷ್ಟೇ ನೀಡಿದ್ದಾರೆ. ಯಾವ ಉದ್ದೇಶಕ್ಕೆ ಭಾರತ ಬಂದ್ ಮಾಡಿದ್ದಾರೋ ಈ ಬಗ್ಗೆ ಸರ್ಕಾರ ವಿಧಾನಸಭೆಯ ಒಳಗೆ ಹಾಗೂ ಹೊರಗೆ ತನ್ನ ಪ್ರತಿಕ್ರಿಯೆ ನೀಡಿದೆ. ಒಟ್ಟಾರೆ ದೇಶದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ನಿಶ್ಚಿತ ಕೆಲಸ ಮಾಡಲಿದೆ," ಎಂದು ಹೇಳಿದರು.
ಇನ್ನು ಬನವಾಸಿ ವಿಶ್ವವಿದ್ಯಾಲಯ ಸ್ಥಾಪನೆಯ ಕುರಿತು ಮಾತನಾಡಿದ ಅವರು, "ಬನವಾಸಿ ಕೇವಲ ನಂದೊಬ್ಬನ ಕ್ಷೇತ್ರವಲ್ಲ. ನಾನು ಆ ಕ್ಷೇತ್ರದ ಶಾಸಕನಾಗಿರಬಹುದು. ಆದರೆ ಆದಿಕವಿ ಪಂಪ 'ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ' ಎಂದಿದ್ದಾನೆ. ಬನವಾಸಿ ದೇಶದ ಮೊದಲ ಕನ್ನಡದ ರಾಜಧಾನಿಯಾಗಿತ್ತು. ಹಾಗಾಗಿ ಬನವಾಸಿಯನ್ನು ಅಭಿವೃದ್ಧಿ ಮಾಡಬೇಕೆಂಬ ಆಸೆ ಕುಮಾರ್ ಬಂಗಾರಪ್ಪನವರದ್ದಾಗಿದ್ದರೆ ಅದು ತಪ್ಪಿಲ್ಲ," ಎಂದು ತಿಳಿಸಿದರು.
"ದಿ. ಬಂಗಾರಪ್ಪನವರು ತಮ್ಮಿಬ್ಬರ ಮಕ್ಕಳಿಗೆ ಉಪನಯನ ಮಾಡಿಸಿದ್ದು ಕೂಡ ಬನವಾಸಿ ಪಕ್ಕದ ಗುಡ್ನಾಪುರದ ಬಳಿ. ಹೀಗಾಗಿ ಕುಮಾರ್ ಬಂಗಾರಪ್ಪನವರು ನನ್ನೊಂದಿಗೂ ಈ ಬಗ್ಗೆ ಮಾತನಾಡಿದ್ದರು, ಒಗ್ಗಟ್ಟಾಗಿ ಬನವಾಸಿಯನ್ನು ಅಭಿವೃದ್ಧಿಪಡಿಸೋಣ ಎಂದಿದ್ದೇನೆ," ಎಂದರು.
ಇನ್ನು ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮದ ಕುರಿತು ಮಾತನಾಡಿದ ಅವರು, "ಉತ್ತರ ಕನ್ನಡ ಪ್ರವಾಸೋದ್ಯಮದಲ್ಲಿ ಸಾಕಷ್ಟು ಅವಕಾಶ ಹೊಂದಿರುವ ಜಿಲ್ಲೆ. ಪಕ್ಕದ ಗೋವಾ ರಾಜ್ಯಕ್ಕೆ ಹೋಲಿಸಿದಾಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಾವು ಗಣನೀಯ ಪ್ರಮಾಣದ ಸಾಧನೆ ಮಾಡಲಿಕ್ಕಾಗಲಿಲ್ಲ."
"ಇಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ರವರು ಮುಖ್ಯಮಂತ್ರಿ ಬೊಮ್ಮಾಯಿಯವರ ಸಲಹೆಯಂತೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವವನ್ನು ತಂದು ಈ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವನ್ನು ಸೀಮಂತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲೆ ಮತ್ತು ಘಟ್ಟದ ಕೆಳಗೆ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವನ್ನು ಶ್ರೀಮಂತ ಕ್ಷೇತ್ರವನ್ನಾಗಿ ಮಾಡಲಾಗುವುದು," ಎಂದರು.
"ಕಳೆದ ಒಂದೂವರೆ ವರ್ಷದಿಂದ ಕೇವಲ ಉತ್ತರ ಕನ್ನಡ ಮಾತ್ರವಲ್ಲ, ಇಡೀ ರಾಜ್ಯ, ದೇಶದ ಪ್ರವಾಸೋದ್ಯಮ ಅಭಿವೃದ್ಧಿಗೆ ಕೋವಿಡ್ನಿಂದ ಹಿನ್ನಡೆಯಾಗಿದೆ. ಯಾವ ಪರಿಸ್ಥಿತಿಯಲ್ಲೂ ಯಾರೂ ಕೆಲಸ ಮಾಡುವಂತಿರಲಿಲ್ಲ. ಇಂದು ದೇಶ ಸಹಜ ಸ್ಥಿತಿಗೆ ಬರುತ್ತಿದ್ದು, ಇದೀಗ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಮಳೆ ಕೂಡ ಇನ್ನೂ ನಿಂತಿಲ್ಲ. ಮಳೆಯಿಂದ ಕೆಲಸಗಳನ್ನೂ ನಡೆಸಲಾಗುತ್ತಿಲ್ಲ. ಕೋವಿಡ್ನಿಂದ ಉಂಟಾದ ಹಿನ್ನಡೆಗಳನ್ನು ಈಗ ಸರಿಪಡಿಸಿಕೊಳ್ಳುತ್ತಿದ್ದೇವೆ," ಎಂದು ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು.
Recommended Video