ಶಿವರಾಮ ಹೆಬ್ಬಾರ್ ಗೆ ಉತ್ತರ ಕನ್ನಡ, ಜೊಲ್ಲೆಗೆ ವಿಜಯಪುರದ ಜವಾಬ್ದಾರಿ
ಕಾರವಾರ, ಏಪ್ರಿಲ್ 10: ಕೊರೊನಾ ವೈರಸ್ ಸೋಂಕಿನ ನಿಯಂತ್ರಣದಲ್ಲಿ ರಾಜ್ಯದ ಸಚಿವ ಸಂಪುಟ ವಿಸ್ತರಣೆ ನಂತರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿರಲಿಲ್ಲ. ಕೊರೊನಾ ನಿಯಂತ್ರಣ, ಮುಂಜಾಗ್ರತೆ ಕ್ರಮದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯನಿರತರಾಗಿದ್ದರು. ಆದರೆ, ಇದೀಗ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಮಾಡಲಾಗಿದೆ.
ಕೆಲವು ಸಚಿವರಿಗೆ ಎರಡು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ ನೀಡಲಾಗಿದ್ದು, ಇದರಿಂದ ಸರಿಯಾಗಿ ಕೆಲಸ ನಡೆಯುತ್ತಿಲ್ಲ ಎಂಬುದಾಗಿ ಕೇಳಿ ಬರುತ್ತಿತ್ತು. ಹೀಗಾಗಿ ಕೋವಿಡ್- 19 ಸಂಕಷ್ಟದ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಸುಲಭವಾಗುವಂತೆ ಎಲ್ಲಾ ಸಚಿವರುಗಳಿಗೆ ಉಸ್ತುವಾರಿ ಹಂಚಿಕೆ ಮಾಡಲಾಗಿದೆ.
ಶಿವರಾಮ ಹೆಬ್ಬಾರ್ ಗೆ ಉ.ಕ. ಜಿಲ್ಲೆ ಉಸ್ತುವಾರಿ
ಅದರಂತೆ ಜಿಲ್ಲೆಯಲ್ಲಿ ಯಲ್ಲಾಪುರ ಶಾಸಕ, ಕಾರ್ಮಿಕ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಹೊಣೆ ನೀಡಲಾಗಿದೆ. ಹೀಗಾಗಿ, ಉತ್ತರ ಕನ್ನಡದ ಹೊಣೆ ಹೊತ್ತಿದ್ದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಶಾಸಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಕೊರೊನಾ ಪರಿಸ್ಥಿತಿಯಲ್ಲಿ ಜೊಲ್ಲೆಗೆ ಕಷ್ಟವಾಗಿತ್ತು
ಈ ಕೊರೊನಾ ಪರಿಸ್ಥಿತಿಯಲ್ಲಿ ತಮ್ಮ ತವರು ಜಿಲ್ಲೆಯಿಂದ ಉಸ್ತುವಾರಿ ಜಿಲ್ಲೆಗೆ ಪದೇ ಪದೇ ಬಂದು ಹೋಗುತ್ತಿರಲು ಶಶಿಕಲಾ ಜೊಲ್ಲೆ ಅವರಿಗೆ ಕಷ್ಟ ಸಾಧ್ಯವಾಗಿತ್ತು. ಜಿಲ್ಲೆಗೆ ಜಿಲ್ಲೆಯವರನ್ನೇ ಉಸ್ತುವಾರಿಗಳನ್ನಾಗಿ ನೇಮಿಸಬೇಕೆಂದು ಸಾರ್ವಜನಿಕರಿಂದಲೂ ಒತ್ತಾಯ ಕೇಳಿ ಬಂದಿತ್ತು. ಜೊಲ್ಲೆ ಅವರು ಕೊರೊನಾ ಪರಿಸ್ಥಿತಿಯಲ್ಲೂ ಜಿಲ್ಲೆಗೆ ಕಾಲಿಟ್ಟಿರಲಿಲ್ಲ ಎಂಬ ಆರೋಪವೂ ಇತ್ತು. ಈ ನಡುವೆ ಒಮ್ಮೆ ಜಿಲ್ಲೆಗೆ ಬಂದಿದ್ದ ಅವರು, ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸಲಹೆಗಳನ್ನು ನೀಡಿ ತೆರಳಿದ್ದರು. ಇದೀಗ ಈ ಪರಿಸ್ಥಿತಿಯಲ್ಲಿ ಜಿಲ್ಲೆಯವರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವುದರಿಂದ ರಾಜ್ಯ ಮಟ್ಟದಲ್ಲಿ ಜಿಲ್ಲೆಗೆ ಸಂಬಂಧಿಸಿದ ವರದಿಗಳನ್ನು ಸಲ್ಲಿಸಿ, ಅಗತ್ಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ.
ಲಾರಿ ಚಾಲಕನಿಂದ ಸಚಿವನಾಗಿ ಹೆಬ್ಬಾರ್ ನಡೆದು ಬಂದ ದಾರಿ...
ಹೆಬ್ಬಾರ್ ಎಚ್ಚರಿಸಿದ್ದ ಅಸ್ನೋಟಿಕರ್
ಕಾರ್ಮಿಕ ಸಚಿವರಾದರೂ ಶಿವರಾಮ ಹೆಬ್ಬಾರ್ ಅವರು ತಮ್ಮ ಯಲ್ಲಾಪುರ- ಮುಂಡಗೋಡ ಬಿಟ್ಟು ಹೊರಕ್ಕೆ ಬರುತ್ತಿಲ್ಲ ಎಂದು ಕೆಲವರು ಆರೋಪಿಸಿದ್ದರು. ಮಾಜಿ ಸಚಿವ ಆನಂದ ಅಸ್ನೋಟಿಕರ್ ಕೂಡ ಇತ್ತೀಚಿಗೆ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಹೆಬ್ಬಾರ್ ಅವರನ್ನು ಎಚ್ಚರಿಸಿದ್ದರು. ಹೀಗಾಗಿ, ಕೊರೊನಾ ಪರಿಸ್ಥಿತಿಯ ಸಂದರ್ಭದಲ್ಲಿ ಜಿಲ್ಲೆಯ ವಸ್ತು ಸ್ಥಿತಿಯನ್ನು ತಿಳಿಯಲು ಹೆಬ್ಬಾರ್ ಅವರು ಜಿಲ್ಲೆಯ ಉದ್ದಗಲಕ್ಕೂ ಸಂಚರಿಸಬೇಕಿದೆ. ಕೊರೊನಾ ನಿಯಂತ್ರಣಕ್ಕೆ ಜಿಲ್ಲೆಗೆ ಏನು ಅವಶ್ಯಕತೆ ಇದೆ ಎನ್ನುವುದನ್ನು ಇದೀಗ ಉಸ್ತುವಾರಿ ಸಚಿವರಾಗಿ ತಾವೇ ತೀರ್ಮಾನಿಸಿ, ಸರ್ಕಾರಕ್ಕೆ ತಿಳಿಸಬೇಕಿದೆ.
ಉಸ್ತುವಾರಿ ಕಾರ್ಯದರ್ಶಿಯಾಗಿ ಘೋಷ್ ನೇಮಕ
ಜಿಲ್ಲೆಯ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳ ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಹಾಗೂ ಯಾವುದೇ ಜಾರಿ ಕುರಿತು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಮಾಡಲು ಜಿಲ್ಲೆಗೆ ಖಜಾನೆ ಇಲಾಖೆಯ ಆಯುಕ್ತ ಉಜ್ವಲ್ ಕುಮಾರ ಘೋಷ್ ಅವರನ್ನು ಉಸ್ತುವಾರಿ ಕಾರ್ಯದರ್ಶಿಯಾಗಿ ನೇಮಕ ಮಾಡಿ, ಮುಂದಿನ ಆದೇಶದವರೆಗೆ ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ. ಪ್ರಸ್ತುತ ಕೊರೊನಾ ವೈರಾಣು ವ್ಯಾಪಕವಾಗಿ ಹರಡುತ್ತಿರುವುದರಿಂದ ಕೋವಿಡ್ ವಾರ್ ರೂಮ್ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದ್ದು, ಈ ತಂಡದಲ್ಲಿ ಕೆಲ ಹಿರಿಯ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. ಕೋವಿಡ್ ವಾರ್ ರೂಮ್ನ ಕಾರ್ಯವು ಮೇ ತಿಂಗಳಿನವರೆಗೆ ಅಥವಾ ಮುಂದಿನ ಆದೇಶದವರೆಗೆ ಮುಂದುವರಿಯಲಿದೆ. ಈ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.