ಮೋದಿ ಗಮನ ಸೆಳೆಯುವಂತೆ ಸಂಸತ್ನಲ್ಲಿ ಸಂಚಲನ ಸೃಷ್ಟಿಸಿದ ಕನ್ನಡತಿ!
ಕಾರವಾರ, ಜನವರಿ 20: ಸಂಸತ್ ಭವನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವ ಸಂಸತ್ ಉತ್ಸವ 2021ರಲ್ಲಿ ಕನ್ನಡತಿಯೊಬ್ಬರು ದೇಶದ ಗಮನ ಸೆಳೆದಿದ್ದಾರೆ. ಕಂಚಿನ ಕಂಠದಿಂದ ಹೊಮ್ಮಿದ ಭವ್ಯ ಭಾರತದ ಭವಿಷ್ಯದ ಕುರಿತ ವಿಶ್ವಾಸಭರಿತ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಧಾನಿ ನರೇಂದ್ರ ಮೋದಿ ಭಾಷಣದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ಶರ್ವಾಣಿ ಟಿ. ಗೌಡ (23) ಜನವರಿ 12ರಂದು ಮಾಡಿದ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಉಂಟು ಮಾಡಿದೆ. ಈಕೆಯ ಭಾಷಣದ ವಿಡಿಯೋ ಕಂಡವರು ಒಮ್ಮೆ ಮೂಗಿನ ಮೇಲೆ ಬೆರಳಿಟ್ಟುಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶರ್ವಾಣಿ ಮಾತಿನ ಧಾಟಿಗೆ ತಲೆದೂಗಿದ್ದಾರೆ.
ವಿಶೇಷ ವರದಿ; ಬಜೆಟ್ನಲ್ಲಿ ಘೋಷಣೆಯಾಗಿದ್ದು, ಅನುಷ್ಠಾನವಾಗಿದ್ದು?
ಕರ್ನಾಟಕದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಶರ್ವಾಣಿ ಟಿ. ಗೌಡ ಹೊನ್ನಾವರ ತಾಲೂಕಿನ ಸಾಲ್ಕೋಡ ಮೂಲದವರು. ಬೆಂಗಳೂರಿನ ಎಂ. ಎಸ್. ರಾಮಯ್ಯ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿಯ ಅಂತಿಮ ವರ್ಷದಲ್ಲಿ ಶರ್ವಾಣಿ ವ್ಯಾಸಂಗ ಮಾಡುತ್ತಿದ್ದಾರೆ.
ಕಾರವಾರದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ: ದಶಕದ ಕನಸು ನನಸು?
ನೆಹರೂ ಯುವ ಕೇಂದ್ರ ಮತ್ತು ಎನ್.ಎಸ್.ಎಸ್ ಸಹಯೋಗದಲ್ಲಿ ನಡೆದ ಯುವ ಸಂಸತ್ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದಿದ್ದರು. ನಂತರ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದು ನವದೆಹಲಿಯ ಸಂಸತ್ ಭವನದಲ್ಲಿ ನಡೆದ ರಾಷ್ಟ್ರೀಯ ಯುವ ಸಂಸತ್ ಉತ್ಸವಕ್ಕೆ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು.
ಗಮನ ಸೆಳೆದ ಭಾಷಣ ಪ್ರಸ್ತುತಿ
ತಮಗೆ ಸಿಕ್ಕ ಮೂರುವರೆ ನಿಮಿಷದ ಅವಧಿಯನ್ನು ಸಂಪೂರ್ಣ ಉಪಯೋಗಿಸಿಕೊಂಡು ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ಶರ್ವಾಣಿ ಟಿ. ಗೌಡ ತಮ್ಮ ಭಾಷಣದುದ್ದಕ್ಕೂ ಪ್ರತಿಪಾದಿಸಿದರು. ವಿಚಾರವನ್ನು ಪ್ರಸ್ತುತ ಪಡಿಸಿದ ಶೈಲಿ ಈ ತರುಣಿ ಯಾರಿರಬಹುದು? ಎಂದು ಎಲ್ಲರೂ ಬೆರಗಿನಿಂದ ಹುಡುಕಾಡುವಂತೆ ಮಾಡಿದೆ.
ಇನ್ಕ್ರಿಡಬಲ್ ಇಂಡಿಯಾ
ಸ್ವಾವಲಂಬಿ ಭಾರತ ನಿರ್ಮಾಣವು ಮಹಾತ್ಮ ಗಾಂಧಿಯವರ ಗುರಿಯಾಗಿತ್ತು ಎಂದು ಮಾತು ಆರಂಭಿಸಿದ ಶರ್ವಾಣಿ, "ನನಗೆ ನಮ್ಮವರ ಸಾಮರ್ಥ್ಯದ ಮೇಲೆ ವಿಶ್ವಾಸವಿದೆ. ನಾವು ನಮ್ಮ ಸಾಮರ್ಥ್ಯವನ್ನು ಪಣಕ್ಕಿಟ್ಟು ವೋಕಲ್ ಫಾರ್ ಲೋಕಲ್ ತತ್ವದಲ್ಲಿ ನಂಬಿಕೆಯಿಟ್ಟು ಮುಂದೆ ಹೆಜ್ಜೆ ಇಟ್ಟಿದ್ದೇ ಆದರೆ ಇಂಡಿಯಾ ಇನ್ಕ್ರಿಡಬಲ್ ಇಂಡಿಯಾ ಆಗುವುದು ನಿಸ್ಸಂಶಯ" ಎಂದು ಪ್ರತಿಪಾದಿಸಿದರು.
ದೇಶದ ಆರ್ಥಿಕತೆಯ ಪುನಶ್ಚೇತನ
"ಭಾರತ ನೈಸರ್ಗಿಕವಾಗಿ, ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ರಾಷ್ಟ್ರ. ಮಹಾತ್ಮ ಗಾಂಧೀಜಿಯವರ ದೃಷ್ಟಿಕೋನ, ಬಾಲಗಂಗಾಧರ ತಿಲಕರ ಸ್ವರಾಜ್ಯ ಕಲ್ಪನೆಯ ಮುಂದುವರಿದ ಭಾಗವೇ ಮಾನ್ಯ ಪ್ರಧಾನಿಯವರ ವೋಕಲ್ ಪಾರ್ ಲೋಕಲ್ ಘೋಷ ವಾಕ್ಯದ ಹಿನ್ನಲೆಯಾಗಿದೆ. ಕೊರೊನಾ ಹೊಡೆತಕ್ಕೆ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಯನ್ನು ಮೇಲಕ್ಕೆತ್ತಲು ನಮ್ಮಲ್ಲಿರುವ ಜನಸಂಖ್ಯೆಯನ್ನು ದುಡಿಯುವ ಶಕ್ತಿಯನ್ನಾಗಿ ಬಳಸಿಕೊಳ್ಳಬೇಕು. ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆದು ಇಲ್ಲಿಯೇ ಶಿಕ್ಷಣ ಪಡೆದು ದೊಡ್ಡ ಸಂಬಳದ ಆಸೆಗೆ ವಿದೇಶಗಳಿಗೆ ಹಾರುವ ಪ್ರತಿಭಾ ಪಲಾಯನಕ್ಕೆ ಕಡಿವಾಣ ಬೀಳಬೇಕು. ಕನಿಷ್ಠ ವೇತನವನ್ನು ಹೆಚ್ಚಿಸುವ ಜೊತೆಗೆ ಸಣ್ಣ ಪ್ರಮಾಣದ ಉದ್ದಿಮೆಗಳಲ್ಲಿ ಬಂಡವಾಳ ಹೂಡಲು ಉತ್ತೇಜನ ನೀಡಬೇಕು" ಎಂದು ಶರ್ವಾಣಿ ಸಲಹೆ ನೀಡಿದ್ದಾರೆ.
ಗುಣಮಟ್ಟದ ವಸ್ತುಗಳ ಉತ್ಪಾದನೆ
"ಸಾವಯ ಪದ್ಧತಿಯಲ್ಲಿ ಕೃಷಿ ಮಾಡಲು ಪ್ರೋತ್ಸಾಹಿಸಿ. ಬೆಳೆದ ಬೆಳೆಗೆ ಗುಣಮಟ್ಟದ ಬೆಲೆ ದೊರಕುವವರೆಗೆ ಶೇಖರಿಸಿಡಲು ಉಗ್ರಾಣಗಳ ವ್ಯವಸ್ಥೆ ಮಾಡಿಕೊಡಬೇಕು. ಅತೀ ಉದ್ದದ ಕರಾವಳಿಯನ್ನು ಹೊಂದಿರುವ ದೇಶ ಅದರ ಪ್ರಯೋಜನ ಪಡೆಯಬೇಕು ಸೋಲಾರ್ ಮತ್ತು ಗಾಳಿ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಬೇಕು. ಜ್ಞಾನ, ಕೌಶಲ್ಯ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡು ಗುಣಮಟ್ಟದ ವಸ್ತುಗಳ ಉತ್ಪಾದನೆಯಾಗುವಂತಾಗಬೇಕು. ವಿಶ್ವದ ಖರೀದಿದಾರರ ಬ್ರಾಂಡ್ ಆಗಿ ಭಾರತ ಬದಲಾಗಬೇಕು. ರಾಷ್ಟ್ರ ಪ್ರೇಮವನ್ನು ಉದ್ದೀಪನಗೊಳಿಸಿ ಸ್ವದೇಶಿ ಉತ್ಪನ್ನಗಳ ಬಳಸುವ ನಿರ್ಧಾರದೊಂದಿಗೆ ಬಲಿಷ್ಠ ರಾಷ್ಟ್ರ ನಿರ್ಮಾಣದ ಸಂಕಲ್ಪ ತೊಡಬೇಕು" ಎಂದು ಹೇಳಿದ್ದಾರೆ.
Recommended Video
ಹುಟ್ಟಿದ್ದು ಹೊನ್ನಾವರ
ಶರ್ವಾಣಿ ಹುಟ್ಟಿದ್ದು ಹೊನ್ನಾವರದಲ್ಲಾದರೂ ಬೆಳೆದಿದ್ದು ಬೆಂಗಳೂರು. ಅವರ ತಂದೆ ತಿಮ್ಮಪ್ಪ ಗೌಡ ಬೆಂಗಳೂರಿನ ವಿಧಾನಸೌಧದಲ್ಲಿ ಉದ್ಯೋಗದಲ್ಲಿದ್ದಾರೆ. ತಾಯಿ ಮಧುಮಾಲತಿ ಪಡುವಣಿ ಅವರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯದಲ್ಲಿದ್ದಾರೆ. ತಂದೆ- ತಾಯಿಯ ಉದ್ಯೋಗದ ಕಾರಣಕ್ಕೆ ಶರ್ವಾಣಿ ಕುಟುಂಬ ಹುಟ್ಟೂರು ಬಿಟ್ಟು ಬೆಂಗಳೂರು ಸೇರಿದ್ದಾರೆ. ಸೇಂಟ್ ಕ್ಲಾರೆಟ್ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಸೋಫಿಯಾ ಹೈ ಸ್ಕೂಲ್ನಲ್ಲಿ ಪ್ರೌಢ ಶಿಕ್ಷಣವನ್ನು, ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪೂರೈಸಿ ಪ್ರಸ್ತುತ ಎಂ. ಎಸ್. ರಾಮಯ್ಯ ಲಾ ಕಾಲೇಜಿನಲ್ಲಿ ಕಾನೂನು ಪದವಿ ಅಭ್ಯಾಸ ಮಾಡುತ್ತಿದ್ದಾರೆ.
|
ಭಾಷಣ ಟ್ವೀಟ್ ಮಾಡಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಸಹ ಕೂಡ ಶರ್ವಾಣಿ ಟಿ. ಗೌಡ ಭಾಷಣ ಮೆಚ್ಚಿದ್ದಾರೆ. ಭಾಷಣದ ವಿಡಿಯೋ ಲಿಂಕ್ ಅನ್ನು ಟ್ವೀಟ್ ಮಾಡಿದ್ದಾರೆ. ಸ್ವಾವಲಂಬಿ ಭಾರತ ನಿರ್ಮಾಣದ ವಿಚಾರವಾಗಿ ಮಾತನಾಡಿರುವ ಸುಂದರ ಕರ್ನಾಟಕದ ಶ್ರಾವಣಿ ಗೌಡ ಅವರ ಮಾತುಗಳನ್ನು ಕೇಳಿ ಎಂದು ಹೇಳಿದ್ದಾರೆ.
ಭಾಷಣದ ವಿಡಿಯೋ
ಯುವ ಸಂಸತ್ ಉತ್ಸವ 2021ರಲ್ಲಿ ಶರ್ವಾಣಿ ಟಿ. ಗೌಡ ಮಾಡಿದ ಭಾಷಣದ ವಿಡಿಯೋ