ಹಿರಿಯ ಸಾಹಿತಿ, ಪತ್ರಕರ್ತ ನಾ.ಸು ಭರತನಹಳ್ಳಿ ನಿಧನ
ಕಾರವಾರ, ಡಿಸೆಂಬರ್ 25: ಹಿರಿಯ ಸಾಹಿತಿ, ಪತ್ರಕರ್ತ ನಾರಾಯಣ್ ಸುಬ್ರಾಯ್ ಹೆಗಡೆ(ನಾ.ಸು ಭರತನಹಳ್ಳಿ 84) ಶುಕ್ರವಾರ ನಿಧನ ಹೊಂದಿದ್ದಾರೆ. ಇವರು ಸೊಸೆ, ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನಾ.ಸು ಕೇವಲ ಲೇಖಕ ಮಾತ್ರವಲ್ಲ. ಕೃಷಿಕ, ಸಂಘಟಕ, ರಂಗಕರ್ಮಿ, ಪತ್ರಕರ್ತ, ಪ್ರಕಾಶಕ ಎಲ್ಲವೂ ಹೌದು. 1954 ರಿಂದ ಬರೆಯಲು ಪ್ರಾರಂಭಿಸಿದ ಅವರು ಕೊನೆಯವರೆಗೂ ಬರವಣಿಗೆ ನಿಲ್ಲಿಸಿರಲಿಲ್ಲ. "ಬಯಲು ಬೆತ್ತಲೆ' ಕಥಾ ಸಂಕಲನ, ಭೂಮಿಕೆ, ಪರಿವೃತ ಕಾದಂಬರಿಗಳು, ಅವಾಂತರ ನಾಟಕ, ಆಕಾಶ ಹರಿದು ಬೀಳುತ್ತದೆ, ಪಂಜರದಲ್ಲಿ ಹುಲಿ, ರೊಬೊಟೊ ಮತ್ತು ಇತರ ಚಿಹ್ನೆಗಳು ಮಕ್ಕಳ ನಾಟಕಗಳುನ್ನು ಬರೆದಿದ್ದಾರೆ.
ಉತ್ತರ ಕನ್ನಡಕ್ಕೆ ಇಂಗ್ಲೆಂಡ್ನಿಂದ 12 ಮಂದಿ ಆಗಮನ
ತಾಲಿಬಾನ್ ಅಪಘಾನ್ ಮತ್ತು ನಾನು ಅನುವಾದ ಕೃತಿ, ಪೂರ್ವತಟದಿ ಪುಟ್ಟ ವಿಶ್ವ ಪ್ರವಾಸಿ ಕಥೆ, ಗೌರೀಶ ಕಾಯ್ಕಿಣಿ ಬದುಕು ಬರಹ ಸಾಹಿತ್ಯ ಪರಿಷತ್ತು ಪ್ರಕಟಣೆ, ಪರಂಪರೆ ಅಂಕಣ ಬರಹ ಸೇರಿದಂತೆ 30 ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ.
ಕಳೆದ ಎರಡು ದಶಕಗಳ ಹಿಂದೆ ರಾಜ್ಯದಲ್ಲೇ ಮೊದಲ ಬಾರಿಗೆ ತಾಲೂಕಾ ಕೇಂದ್ರವೊಂದರಲ್ಲಿ ಕನ್ನಡ ಸಾಹಿತ್ಯ ಭವನವನ್ನು ಕಟ್ಟಿ ನಿಲ್ಲಿಸಿದ ಹೆಗ್ಗಳಿಕೆ ಇವರದು. ತನ್ಮೂಲಕ ಯಲ್ಲಾಪುರದ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕಿದ್ದರು. ಪತ್ರಿಕಾ ಬರಹ, ಕಥಾ ಸಂಕಲನ, ಕಾದಂಬರಿ, ಅಂಕಣ ಬರಹ, ರಾಜ್ಯ ಮಟ್ಟದ ಪತ್ರಿಕೆಗಳಿಗೆ ವರದಿಗಾರಿಕೆ ಎಲ್ಲವನ್ನೂ ನಿಭಾಯಿಸಿದ್ದರು.
"ಮುನ್ನಡೆ' ವಾರಪತ್ರಿಕೆ, ದಿನಪತ್ರಿಕೆಯ ಸಂಪಾದಕರಾಗಿ, ಸ್ವರ್ಣವಲ್ಲಿ ಪ್ರಭಾದ ಸಂಪಾದಕತ್ವವನ್ನು 21 ವರ್ಷಗಳ ಕಾಲ ಯಶಸ್ವಿಯಾಗಿ ನಿರ್ವಹಿಸಿದ್ದರು. 70ನೇ ವರ್ಷದಲ್ಲಿ ಅವರಿಗೆ "ಸನ್ಮತಿ' ಎನ್ನುವ ಅಭಿನಂದನಾ ಗ್ರಂಥ ಅರ್ಪಿಸಲ್ಪಟ್ಟಿದೆ. ಪ್ರೊ.ಟಿ.ಜಿ.ಭಟ್ ಹಾಸಣಗಿ ಅವರು ನಾ.ಸು ಬಗ್ಗೆ "ಅವ್ಯಾಜ ಪ್ರೀತಿ' ಎಂಬ ಕೃತಿ ಬರೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ 14 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಯಲ್ಲಾಪುರ ತಾಲೂಕಾ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷ ಗೌರವ ಅವರಿಗೆ ಸಂದಿವೆ. ಯಲ್ಲಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 25 ವರ್ಷಗಳ ಕಾಲ ಅಧ್ಯಕ್ಷರಾಗಿ, ಸಾಹಿತ್ಯ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು.
Recommended Video
ನಾ.ಸು ಅವರಿಗೆ ಕೆ.ಶ್ಯಾಮರಾವ್ ದತ್ತಿ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಶ್ರೀ ಪ್ರಶಸ್ತಿ, ಕಾಸರಗೋಡಿನ ಕಯ್ಯಾರ ಕಿಂಞ್ಞಣ ರೈ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಗ್ರಂಥ ಪ್ರಶಸ್ತಿ, ಮುಂಬೈಯ ಸೂರಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ, ಶಿರಸಿಯ ಉಪಾಯನ ಪ್ರಶಸ್ತಿ, ಸ್ವರ್ಣವಲ್ಲೀ ಮಠದ ಸಾಹಿತ್ಯ ರತ್ನಾಕರ, ಸಾಹಿತ್ಯ ಅಕಾಡೆಮಿ ಸುವರ್ಣ ಗೌರವ ಸೇರಿದಂತೆ ವಿವಿಧ ಪ್ರಶಸ್ತಿಗಳು ಸಂದಿವೆ. ನೂರಾರು ಸಂಘಟನೆಗಳು ಅವರನ್ನು ಗುರುತಿಸಿ, ಗೌರವಿಸಿವೆ.