ದುಬೈನಿಂದ ವಾಪಸ್ಸಾದವರು ಸ್ವಯಂ ಪ್ರೇರಿತವಾಗಿ ತಪಾಸಣೆಗೆ
ಕಾರವಾರ, ಮಾರ್ಚ್ 15: ಅರಬ್ ರಾಷ್ಟ್ರದಿಂದ ವಾರದ ಹಿಂದೆ ವಾಪಸ್ಸಾಗಿದ್ದ ಇಬ್ಬರು ಸ್ವಯಂಪ್ರೇರಿತವಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರಿಂದ, ಆರೋಗ್ಯ ಅಧಿಕಾರಿಗಳ ತಂಡ ಅವರ ಆರೋಗ್ಯ ತಪಾಸಣೆ ನಡೆಸಿ, ಕಫದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದೆ.
ಶಿರಸಿ ಹಾಗೂ ಭಟ್ಕಳ ಮೂಲದ ಈ ಇಬ್ಬರು ದುಬೈನಿಂದ ವಾರಗಳ ಹಿಂದಷ್ಟೇ ತಮ್ಮ ಮನೆಗೆ ವಾಪಸ್ಸಾಗಿದ್ದರು. ಈ ಪೈಕಿ ಓರ್ವರಲ್ಲಿ ಬೇಧಿ ಕಾಣಿಸಿಕೊಂಡಿದ್ದು, ಇನ್ನೊಬ್ಬರು ವೈರಸ್ನ ಬಗ್ಗೆ ಆತಂಕಗೊಂಡಿದ್ದಾರೆ. ಇದರಿಂದಾಗಿ ಇಬ್ಬರೂ ಸ್ವಯಂಪ್ರೇರಿತವಾಗಿ ಜಿಲ್ಲಾಡಳಿತದಿಂದ ತಪಾಸಣೆಗಾಗಿ ಕೋರಿದ್ದರು.
ಕೊರೊನಾ ಭೀತಿಯಿಂದ ಜಪಾನ್ ನಲ್ಲಿ ಜಲದಿಗ್ಬಂಧನದಲ್ಲಿದ್ದ ಕಾರವಾರಿಗ ವಾಪಸ್
ಅದರಂತೆ ಆರೋಗ್ಯ ಅಧಿಕಾರಿಗಳ ತಂಡ ಇಬ್ಬರ ಮನೆಗೂ ಭೇಟಿ ನೀಡಿ, ತಪಾಸಣೆ ನಡೆಸಿದೆ. ಅಲ್ಲದೇ, ಇಬ್ಬರ ಕಫದ ಮಾದರಿಗಳನ್ನು ಸಂಗ್ರಹಿಸಿ ಮಣಿಪಾಲ ಹಾಗೂ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಇಬ್ಬರಲ್ಲೂ ಕೊರೋನಾ ವೈರಸ್ಗೆ ಸಂಬಂಧಿಸಿದ ಯಾವುದೇ ಲಕ್ಷಣ ಕಂಡುಬಂದಿಲ್ಲ. ಆದರೆ, ವಿದೇಶದಿಂದ ಬಂದಿದ್ದ ಕಾರಣ ಹಾಗೂ ಅವರೇ ಕೇಳಿಕೊಂಡಿದ್ದರಿಂದ ವೈದ್ಯರ ತಂಡವನ್ನು ಕಳುಹಿಸಿ ತಪಾಸಣೆ ನಡೆಸಲಾಗಿದೆ.
ಹಳಿಯಾಳದಲ್ಲಿ ಮೆಕ್ಕಾ-ಮದೀನಾದಿಂದ ವಾಪಸ್ಸಾದ 14 ಮಂದಿಗೆ ಗೃಹಬಂಧನ
ಇದು ಈ ಅವಧಿಯಲ್ಲಿ ಸಾಮಾನ್ಯ ಪ್ರಕ್ರಿಯೆ ಕೂಡ ಆಗಿದೆ. ಕೊರೊನಾದ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಯಾವುದೇ ಆತಂಕ ಬೇಡ. ಜಿಲ್ಲೆಯಲ್ಲಿ ಎಲ್ಲ ರೀತಿಯ ಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು.