ಕಾರವಾರ ಕಡಲ ತೀರದಲ್ಲಿ ಕ್ಷೀಣಿಸುತ್ತಿವೆ "ಸೀಬರ್ಡ್' ಪಕ್ಷಿಗಳು
ಕಾರವಾರ, ಜನವರಿ 27: ಪ್ರತಿವರ್ಷ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ವಿದೇಶದಿಂದ ಕಾರವಾರ ಕಡಲತೀರಕ್ಕೆ ಸೀಬರ್ಡ್ ಪಕ್ಷಿಗಳು ವಲಸೆ ಬಂದು ಕಾರವಾರದ ಕಡಲತೀರಗಳಲ್ಲಿ ತುಂಬಿಕೊಳ್ಳುತ್ತಿದ್ದವು. ಆದರೆ ಈ ಬಾರಿ ಬೆರಳೆಣಿಕೆಯಷ್ಟು ಪಕ್ಷಿಗಳು ಮಾತ್ರ ಆಗಮಿಸಿದ್ದು, ಕಾರವಾರ ಕಡಲತೀರದಲ್ಲಿ ಸೀಬರ್ಡ್ ಪಕ್ಷಿಗಳ ಕಲರವ ಕಾಣದಂತಾಗಿದೆ.
ರಷ್ಯಾ ಮೂಲದ ಸೀಬರ್ಡ್ ಪಕ್ಷಿಗಳು ದಶಕಗಳಿಂದಲೂ ಕಾರವಾರದ ಕಡಲತೀರಕ್ಕೆ ಪ್ರತಿವರ್ಷ ವಲಸೆ ಬರುತ್ತಿದ್ದವು. ಕಡಲತೀರದ ಬಳಿ ನಿಲ್ಲುವ ನಾಡದೋಣಿಗಳ ಮೇಲೆ ಕುಳಿತುಕೊಳ್ಳುವ ಪಕ್ಷಿಗಳ ಸಾಲು, ಕಡಲತೀರಕ್ಕೆ ಬರುವ ಪ್ರವಾಸಿಗರನ್ನೂ ಆಕರ್ಷಿಸುತ್ತಿದ್ದವು.
ಸೀಬರ್ಡ್ 2ನೇ ಹಂತದ ಕಾಮಗಾರಿ; 5 ಸಾವಿರ ಉದ್ಯೋಗ ಸೃಷ್ಟಿ ಸಾಧ್ಯತೆ
ಅಲ್ಲದೇ ಹಚ್ಚ ಹಸಿರಿನ ಮರಗಳ ಮೇಲೆ ಸಾಲು ಸಾಲಾಗಿ ಕುಳಿತುಕೊಳ್ಳುವ ಬೆಳ್ಳಕ್ಕಿಗಳ ಹಿಂಡು, ಮರಕ್ಕೆ ಬೆಳ್ಳನೆಯ ಹೊದಿಕೆ ಹೊದಿಸಿದಂತೆ ಕಾಣುತ್ತಿತ್ತು. ಆದರೆ ಈ ಬಾರಿ ಕಡಲತೀರದ ಒಂದು ತುದಿಯಲ್ಲಿ ಮಾತ್ರ ಕೆಲವೇ ಕೆಲವು ಸೀಬರ್ಡ್ ಪಕ್ಷಿಗಳು ಆಗಮಿಸಿದ್ದು ಬೆಳ್ಳಕ್ಕಿಗಳ ಸಂಖ್ಯೆ ಸಹ ಕಡಿಮೆಯಾಗಿದೆ.
ಪಕ್ಷಿಗಳನ್ನು ವೀಕ್ಷಿಸಿ ಆನಂದಪಡುತ್ತಿದ್ದ ಪ್ರವಾಸಿಗರಿಗೂ ಇದರಿಂದ ಬೇಸರವಾಗಿದ್ದು, ಹಕ್ಕಿಗಳನ್ನು ನೋಡಲು ಕಡಲತೀರಕ್ಕೆ ಬರುತ್ತಿದ್ದವರು ಬೇಸರ ಪಟ್ಟುಕೊಂಡು ವಾಪಸ್ ಹೋಗುವಂತಾಗಿದೆ.
ಮಲೆನಾಡಿನ ಹಸಿರಿನ ಮಧ್ಯೆ ಪಾತರಗಿತ್ತಿಗಳ ಚಿತ್ತಾರ ಲೋಕ
ಪ್ರತಿ ವರ್ಷ ನವೆಂಬರ್ ತಿಂಗಳಿನಿಂದ ಈ "ಸೀ ಈಗಲ್' ಎಂದು ಕರೆಯುವ ಸೀಬರ್ಡ್ ಪಕ್ಷಿಗಳು ಹಾಗೂ ಬೆಳ್ಳಕ್ಕಿಗಳು ಕಡಲತೀರಕ್ಕೆ ವಲಸೆ ಬರುತ್ತಿದ್ದವು. ರಷ್ಯಾದಿಂದ ಹಾರಿಬರುವ ಈ ಪಕ್ಷಿಗಳು ಚಳಿಗಾಲದ ಎರಡು ಮೂರು ತಿಂಗಳ ಕಾಲ ಕಾರವಾರದಲ್ಲಿ ಬೀಡು ಬಿಟ್ಟು ಮರಿಗಳನ್ನು ಮಾಡಿಕೊಂಡ ಬಳಿಕ ಮತ್ತೆ ತಮ್ಮ ಮೂಲ ಸ್ಥಳಕ್ಕೆ ವಾಪಸ್ ತೆರಳುತ್ತಿದ್ದವು.
ಹೀಗಾಗಿ ಈ ಅವಧಿಯಲ್ಲಿ ಬಾನಾಡಿಗಳಿಂದ ತುಂಬಿರುತ್ತಿದ್ದ ಕಾರವಾರ ಕಡಲತೀರವು ಪಕ್ಷಿ ಪ್ರೇಮಿಗಳಿಗೆ, ವೈಲ್ಡ್ ಲೈಫ್ ಛಾಯಾಗ್ರಾಹಕರಿಗೆ ಈ ವಿಶಿಷ್ಟ ಪಕ್ಷಿಗಳ ಚಿತ್ರಪಟ ತೆಗೆಯಲು ಉತ್ತಮ ಅವಕಾಶ ದೊರೆಯುತ್ತಿತ್ತು ಅನ್ನೋದು ಸ್ಥಳೀಯರ ಅಭಿಪ್ರಾಯ.
ಇನ್ನು ಈ ಬಾರಿ ಉಂಟಾಗಿರುವ ಮತ್ಸ್ಯ ಕ್ಷಾಮ ಸೀಬರ್ಡ್ ಪಕ್ಷಿಗಳ ಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣ ಎನ್ನಲಾಗಿದ್ದು, ಆಹಾರ ಸಿಗುವ ಪ್ರಮಾಣ ಕಡಿಮೆಯಾಗಿರುವುದರಿಂದ ಬೇರೆಡೆಗೆ ತೆರಳಿವೆ ಅನ್ನೋದು ಕಡಲ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕರ ಅಭಿಪ್ರಾಯವಾಗಿದೆ. ಈ ಹಿಂದೆ ಸಾವಿರ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದ ಈ ಸೀಬರ್ಡ್ ಪಕ್ಷಿಗಳನ್ನು ನೋಡಿಯೇ ಕಾರವಾರದ ಅರಗಾ ಗ್ರಾಮದಲ್ಲಿರುವ ಕದಂಬ ನೌಕಾನೆಲೆ ಯೋಜನೆಗೆ "ಸೀಬರ್ಡ್ ನೌಕಾನೆಲೆ' ಎಂದು ಹೆಸರಿಡಲಾಗಿತ್ತು.
ಅಲ್ಲದೇ ಈ ಪಕ್ಷಿಗಳು ಹಾರಾಡುತ್ತಿದ್ದ ಪ್ರದೇಶದಲ್ಲೇ ಬಲೆಯನ್ನು ಹಾಕಿ ಮೀನುಗಾರರು ಹೆಚ್ಚಿನ ಮೀನು ಬೇಟೆಯನ್ನೂ ನಡೆಸುತ್ತಿದ್ದರು. ಆದರೆ ಇದೀಗ ಪಕ್ಷಿಗಳು ಆಗಮಿಸುವುದೇ ಕಡಿಮೆಯಾಗಿರುವುದರಿಂದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದ್ದು, ಮೀನುಗಾರರಿಗೂ ಆತಂಕವನ್ನು ಉಂಟುಮಾಡಿದೆ.