ಆಳ ಸಮುದ್ರದ ಜೀವ ರಾಶಿಗಳ ಕಣ್ತುಂಬಿಕೊಳ್ಳಲು ಬನ್ನಿ ಸ್ಕೂಬಾ ಉತ್ಸವಕ್ಕೆ
ಕಾರವಾರ, ಡಿಸೆಂಬರ್ 24: ಸಮುದ್ರದ ಆಳದಲ್ಲಿ ಇಳಿದು ಅಪರೂಪದ ಜೀವ ರಾಶಿಗಳನ್ನು ಕಣ್ತುಂಬಿಕೊಳ್ಳುವ ಸ್ಕೂಬಾ ಡೈವಿಂಗ್ ಚಟುವಟಿಕೆಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದ ನೇತ್ರಾಣಿ ದ್ವೀಪ ಹೆಸರಾಗಿದೆ. ಇದೀಗ ಉತ್ತರಕನ್ನಡ ಜಿಲ್ಲಾಡಳಿತ ಇಲ್ಲಿಯೇ ಸ್ಕೂಬಾ ಡೈವಿಂಗ್ ಉತ್ಸವವನ್ನು ಆಯೋಜಿಸುತ್ತಿದೆ.
ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಜನವರಿ 6 ಮತ್ತು 7ರಂದು ಅಂತರರಾಷ್ಟ್ರೀಯ ಸ್ಕೂಬಾ ಡೈವಿಂಗ್ ಉತ್ಸವವನ್ನು ಮೊದಲ ಬಾರಿಗೆ ಈ ನೇತ್ರಾಣಿ ದ್ವೀಪದ ಕಡಲಿನಲ್ಲಿ ಆಯೋಜಿಸಲಾಗಿದೆ. ನೀಲಿ ಕಡಲಿನಾಳದ ವಿಸ್ಮಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಇದು ಮಾಡಿಕೊಡಲಿದೆ.
ನೀಲಿ ಸಮುದ್ರದಿಂದ ಸುತ್ತುವರೆದಿರುವ ನೇತ್ರಾಣಿ ದ್ವೀಪ ತನ್ನ ಒಡಲಲ್ಲಿ ಅದ್ಭುತ ಜಗತ್ತನ್ನೇ ಇರಿಸಿಕೊಂಡಿದೆ. ಸ್ಪಷ್ಟವಾಗಿ ಕಾಣುವ ನೀರಿನಾಳದಲ್ಲಿ ಚಿಟ್ಟೆ ಮೀನು, ಕ್ಯಾಟ್ ಫಿಶ್, ಟೈಗರ್ ಫಿಶ್, ಬಂದೂಕು ಮೀನು, ಗಿಳಿ ಮೀನು, ಹಾವು ಮೀನು, ಸ್ಟಿಂಗ್ ರೇ, ಕಡಲಾಮೆ ಸೇರಿದಂತೆ 35ಕ್ಕೂ ಅಧಿಕ ಪ್ರಭೇದದ ಜಲಚರಗಳು ಕಾಣಸಿಗಲಿದೆ. ಇಂಥ ಅಪರೂಪದ ಜೀವರಾಶಿಗಳು ಇಲ್ಲಿನ ಹವಳ ದಿಬ್ಬಗಳನ್ನೇ ಆಶ್ರಯಿಸಿದೆ.
ಜಗತ್ತಿನ ನಾನಾ ಕಡೆಗಳ ಜನ ಭಾಗಿ
ಸ್ಕೂಬಾ ಡೈವಿಂಗ್ ಉತ್ಸವಕ್ಕೆ ಜಗತ್ತಿನ ನಾನಾ ಕಡೆಗಳಿಂದ ಒಟ್ಟು 150 ಮಂದಿ ಭಾಗವಹಿಸುತ್ತಿದ್ದಾರೆ. ಅಳ ಸಮುದ್ರದೊಳಗೆ ಇಳಿದು ಹವಳದ ದಿಬ್ಬ ಹಾಗೂ ಜಲಚರಗಳನ್ನು ಕಣ್ತುಂಬಿಕೊಳ್ಳುವ ಜತೆಗೆ ಉತ್ಸವಕ್ಕೆ ಪೂರಕವಾದ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ರಿಯಾಯಿತಿ ದರದಲ್ಲಿ ಪ್ರವೇಶ
ಸ್ಥಳೀಯ ಸಮುದಾಯ, ಮೀನುಗಾರರು, ಆಳಸಮುದ್ರ, ಕಡಲತೀರದ ಕುರಿತು ಕಿರು ಚಿತ್ರ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಸ್ನೋರ್ಕಲಿಂಗ್ ಹಾಗೂ ಜಲ ಕ್ರೀಡೆಗಳನ್ನು ಈ ಉತ್ಸವದಲ್ಲಿ ಅಯೋಜಿಸಲಾಗಿದೆ. ಉತ್ಸವದಲ್ಲಿ ಭಾಗವಹಿಸುವವರಿಗೆ ಆಕರ್ಷಕ ಹಾಗೂ ರಿಯಾಯಿತಿ ದರದಲ್ಲಿ ಪ್ರವೇಶ ಅವಕಾಶ ಕಲ್ಪಿಸಲಾಗುತ್ತಿದೆ.
ಸೀಮಿತ ಟಿಕೆಟ್ ಲಭ್ಯ
ಉತ್ಸವದ ಸಂಪೂರ್ಣ ಜವಾಬ್ದಾರಿಯನ್ನು ಪುಣೆ ಮೂಲದ ಫಿನ್ಕಿಕ್ ಅಡ್ವೆಂಚರ್ಸ್ ಸಂಸ್ಥೆ ವಹಿಸಿಕೊಂಡಿದೆ. ಉತ್ಸವದ ಯಶಸ್ವಿಗೆ ಈಗಿನಿಂದಲೇ ತಯಾರಿ ಆರಂಭವಾಗಿದೆ. ಉತ್ಸವದ ಪ್ರವೇಶಕ್ಕೆ ಸೀಮಿತ ಟಿಕೆಟ್ಗಳು ಲಭ್ಯವಿದೆ.
ಬೆಂಗಳೂರಿನಿಂದ 500 ಕಿಲೋಮೀಟರ್
ಮಂಗಳೂರಿನಿಂದ ಮುರ್ಡೇಶ್ವರ 154 ಕಿ.ಮೀ ದೂರವಿದ್ದು, ಬೆಂಗಳೂರಿನಿಂದ ಬರಬೇಕೆಂದರೆ 500 ಕಿ.ಮೀ ಕ್ರಮಿಸಬೇಕು. ಅಂಡಮಾನ್- ನಿಕೋಬಾರ್, ಲಕ್ಷದ್ವೀಪ, ಪಾಂಡಿಚೇರಿ ಹಾಗೂ ಗೋವಾ ಹೊರತುಪಡಿಸಿದರೆ ಸ್ಕೂಬಾ ಡೈವಿಂಗ್ ಗೆ ಹೇಳಿ ಮಾಡಿಸಿದ ಜಾಗವಿರುವುದು ನೇತ್ರಾಣಿಯಲ್ಲಿ ಮಾತ್ರ.
ಟೀಸರ್ ಬಿಡುಗಡೆ
ಸ್ಕೂಬಾ ಡೈವಿಂಗ್ ಉತ್ಸವದ ಟೀಸರ್ ಹಾಗೂ ಪೋಸ್ಟರನ್ನು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಕುಮಟಾದಲ್ಲಿ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.