ಗೋಕರ್ಣ ಶಾಲೆಯ ಮಕ್ಕಳಿಗೆ ಬೂಟುಕಾಲಿನಿಂದ ಒದ್ದ ಶಿಕ್ಷಕ
ಕಾರವಾರ, ಜನವರಿ 23: ಗೋಕರ್ಣ ಹಾಗೂ ಯಲ್ಲಾಪುರದ ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕವಾಗಿ ಕಿರುಕುಳ ನೀಡಿ, ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಗೋಕರ್ಣದ ಮಾಡರ್ನ್ ಎಜುಕೇಶನ್ ಟ್ರಸ್ಟ್ ಅವರ ರಾಘವೇಶ್ವರ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರೊಬ್ಬರು ಇಬ್ಬರು ವಿದ್ಯಾರ್ಥಿಗಳಿಗೆ ಬೂಟು ಕಾಲಿನಿಂದ ಒದ್ದಿದ್ದಾರೆ. ಶಾಲೆಯ ಶೌಚಾಲಯದ ಬಾಗಿಲು ಒಡೆದ ಆರೋಪದಡಿ ಮಕ್ಕಳಿಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಶಾಲೆಯ ಅಧ್ಯಕ್ಷರು ಕೂಡಾ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ.
ಒಂದು ದಿನ ಶಾಲೆಗೆ ಬರಲಿಲ್ಲವೆಂದು ಇಂಥ ಶಿಕ್ಷೆ ಕೊಡುವುದಾ ಶಿಕ್ಷಕ?
ಶೌಚಾಲಯವನ್ನು ಸರಿ ಪಡಿಸಿಕೊಡುವುದಾಗಿ ಮಕ್ಕಳ ಪಾಲಕರು ತಿಳಿಸಿದ್ದರೂ, ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೆ ಸಂಬಂಧಿಸಿದಂತೆ ಮಕ್ಕಳಿಂದ ಪೊಲೀಸ್ ದೂರು ನೀಡಲಾಗಿದೆ. ಆದರೆ, ಪೊಲೀಸರು ದೂರು ಸ್ವೀಕರಿಸಿಲ್ಲ. ಹೀಗಾಗಿ ಮಕ್ಕಳ ಪಾಲಕರು ಮಕ್ಕಳ ರಕ್ಷಣಾ ಘಟಕಕ್ಕೆ ದೂರು ಸಲ್ಲಿಸಿದ್ದಾರೆ.
ಅದೇ ರೀತಿ ಯಲ್ಲಾಪುರದ ವೈಟಿಎಸ್ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳನ್ನು ಒಂಟಿಗಾಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 8 ವಿದ್ಯಾರ್ಥಿಗಳನ್ನು ಬಿಸಿಲಿನಲ್ಲಿ ಸಾಲಾಗಿ ನಿಲ್ಲಿಸಿದ ವಿಡಿಯೋ ಹರಿದಾಡುತ್ತಿದೆ.
ಹಾವು ಕಚ್ಚಿದರೂ ಪಾಠ ಮುಂದುವರಿಸಿದ ಶಿಕ್ಷಕ: ಬಾಲಕಿ ಸಾವು
ಈ ಕುರಿತು ಗುರು ಬಾಗೇವಾಡಿ ಎಂಬಾತರು ಟ್ವೀಟ್ ಮಾಡಿದ್ದು, ವೈಟಿಎಸ್ಎಸ್ ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗುವ ದೈಹಿಕ ಹಾಗೂ ಮಾನಸಿಕ ಹಿಂಸೆಯ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಶಾಲೆ ಆರಂಭ ಆಗುವ ಮುನ್ನ ನಡೆಯುವ ಪ್ರಾರ್ಥನೆಗೆ ಹಾಜರಾಗದ ಮಕ್ಕಳಿಗೆ ನೀಡಲಾದ ಶಿಕ್ಷೆ ಇದಾಗಿದೆ.
ಮೊದಲಿನಿಂದಲೂ ಈ ರೀತಿ ಮಕ್ಕಳಿಗೆ ಶಿಕ್ಷೆ ವಿಧಿಸಲಾಗುತ್ತಿತ್ತು, ನಾಲ್ಕು ತಿಂಗಳಿನಿಂದ ಇದನ್ನು ನಿಲ್ಲಿಸಲಾಗಿದೆ. ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ನಡೆದ ಘಟನೆ ಇದಾಗಿದ್ದು, ಮಕ್ಕಳ ಸಹಾಯವಾಣಿಯವರು ಪ್ರಕರಣದ ವಿಚಾರಣೆ ನಡೆಸಿದ್ದರು. ಈ ಬಗ್ಗೆ ತಪ್ಪೊಪ್ಪಿಗೆ ಪತ್ರ ನೀಡಲಾಗಿದೆ. ಅದಾದ ನಂತರ ಮತ್ತೆ ಮಕ್ಕಳಿಗೆ ಈ ರೀತಿ ಶಿಕ್ಷೆ ನೀಡಿಲ್ಲ ಎಂದು ಶಾಲಾ ಮುಖ್ಯಾಧ್ಯಾಪಕಿ ಶೈಲಜಾ ಮಾಪ್ಸೇಕರ್ ತಿಳಿಸಿದ್ದಾರೆ.
ಇತ್ತೀಚಿಗಷ್ಟೆ, ಶಾಲೆಗೆ ಹಾಜರಾಗದ ಕಾರಣಕ್ಕೆ ಜೊಯಿಡಾ ತಾಲೂಕಿನ ಬಿರಂಪಾಲಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬನನ್ನು ಕೈಕಾಲು ಕಟ್ಟಿ ಬಾರಿಸುವ ಮೂಲಕ ಸಹ ಶಿಕ್ಷಕರೊಬ್ಬರು ಅಮಾನವೀಯ ವರ್ತನೆ ತೋರಿದ್ದರು. ವಿಷಯ ಗೊತ್ತಾಗಿ ಸ್ಥಳೀಯರೂ ಶಿಕ್ಷನ ಮೇಲೆ ಹಲ್ಲೆ ನಡೆಸಿ, ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ಘಟನೆಯಿಂದಾಗಿ ಶಿಕ್ಷಕನನ್ನು ಡಿಡಿಪಿಐ ಅಮಾನತು ಮಾಡಿದ್ದರು.