ಸಂಕ್ರಾಂತಿ ವಿಶೇಷ: ಉತ್ತರ ಕನ್ನಡದಲ್ಲಿ ಜಾತ್ರೋತ್ಸವಗಳ ಆರಂಭದ ಪುಣ್ಯಕಾಲ
ಕಾರವಾರ, ಜನವರಿ 13: ರಾಜ್ಯದಲ್ಲಿ ದೊಡ್ಡ ಹಬ್ಬಗಳಲ್ಲಿ ಒಂದಾದ ಮಕರ ಸಂಕ್ರಾಂತಿ ಇನ್ನೇನು ಬಂದೇ ಬಿಟ್ಟಿದೆ. ಎಳ್ಳು-ಬೆಲ್ಲ ಹಂಚುವ ಮೂಲಕ, ಸಿಹಿ-ಕಹಿಯನ್ನು ಒಟ್ಟಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳುವಂತೆ ಕರೆ ನೀಡುವ ಹಬ್ಬ ಇದು. ಪ್ರತಿವರ್ಷ ಅತೀ ವಿಜೃಂಭಣೆಯಿಂದ ನಡೆಯುತ್ತಿದ್ದ ಈ ಹಬ್ಬ, ಈ ಬಾರಿ ಕೊರೊನಾದಿಂದಾಗಿ ಮಂಕಾಗಿದೆ. ಈ ವರ್ಷ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಬ್ಬದ ರಂಗು ಹೇಗಿರುತ್ತೆ, ಮುಂದೆ ಓದಿ...
ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ಸಂಕ್ರಾಂತಿಯ ದಿನ ವಿಶೇಷ ಆಚರಣೆ ಏನೂ ಇರುವುದಿಲ್ಲ. ಹಳ್ಳಿಗಳಲ್ಲಿ ಒಂದಷ್ಟು ಸಾಂಪ್ರದಾಯಿಕ ಆಚರಣೆ ನಡೆಯುತ್ತದಾದರೂ, ವಿವಿಧೆಡೆ ವಿವಿಧ ಜಾತ್ರೆಗಳಿಗೆ ಸಂಕ್ರಾಂತಿಯ ದಿನ ಚಾಲನೆ ನೀಡಲಾಗುತ್ತದೆ. ಉತ್ತರಾಯಣ ಈ ಶುಭ ದಿನದಿಂದ ಪ್ರಾರಂಭವಾಗಲಿದ್ದು, ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆಂದು ಹೇಳಲಾಗುತ್ತದೆ. ಹೀಗಾಗಿ ಅನೇಕ ಶುಭ ಕಾರ್ಯಗಳು ಈ ದಿನದಂದು ಆರಂಭಗೊಳ್ಳಲಿದೆ.
ಮುರುಡೇಶ್ವರ ಜಾತ್ರೋತ್ಸವಕ್ಕೆ ಚಾಲನೆ
ಪ್ರಸಿದ್ಧ ಮ್ಹಾತೋಬಾರ ಮುರುಡೇಶ್ವರನ ಜಾತ್ರೋತ್ಸವ ಕಾರ್ಯಕ್ರಮಗಳು ಒಂಬತ್ತು ದಿನಗಳವರೆಗೆ ನಡೆಯಲಿದ್ದು, ಕೊನೆಯಲ್ಲಿ ಬ್ರಹ್ಮರಥೋತ್ಸವ ನಡೆದು ಜಾತ್ರೋತ್ಸವದ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಈ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಸಂಕ್ರಾಂತಿಯಂದು ಆರಂಭಗೊಳ್ಳಲಿದೆ. ವರ್ಷಾರಂಭದ ಮೊದಲ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಾಗೂ ಹತ್ತಾರು ಹಳ್ಳಿ, ಪಟ್ಟಣದಲ್ಲಿ ಅಪಾರ ಭಕ್ತ ಸಮೂಹ ಹೊಂದಿರುವ ಮುಂಡಗೋಡದ ಬಾಣಂತಿ ದೇವಿ ಜಾತ್ರೆಯು ಸಂಕ್ರಾಂತಿ ಹಬ್ಬದಂದು ವಿದ್ಯುಕ್ತವಾಗಿ ಆರಂಭಗೊಳ್ಳಲಿದೆ.
Sankranti Special; ಹಬ್ಬದ ಕಳೆ ಹೆಚ್ಚಿಸುವ ಚನ್ನಪಟ್ಟಣದ ಕರಿ ಕಬ್ಬು
ಕರಾವಳಿ ಜಿಲ್ಲೆಯಲ್ಲಿ ಜಾತ್ರೆಗಳ ಆರಂಭ
ಸಾಲಗಾಂವ, ಚಿಗಳ್ಳಿ, ಅಜ್ಜಳ್ಳಿ, ಕಾವಲಕೊಪ್ಪ, ತುಂಬರಗಿ, ಹಿರೇಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆಯುತ್ತಾರೆ. ಹತ್ತಾರು ಹಳ್ಳಿಗಳ ಭಕ್ತರನ್ನು ಒಗ್ಗೂಡಿಸುವ ಈ ಜಾತ್ರೆಯು, ಗ್ರಾಮೀಣ ಜನಜೀವನದಲ್ಲಿ ಹಬ್ಬದ ಸಡಗರವನ್ನು ಇಮ್ಮಡಿಗೊಳಿಸುತ್ತಿದೆ. ಕೆರೆ ನಿರ್ಮಾಣ ಸಂದರ್ಭದಲ್ಲಿ ಎಷ್ಟೇ ಆಳವಾಗಿ ಅಗೆದರೂ ನೀರು ಬರಲಿಲ್ಲವಂತೆ. ನೀರು ಏಕೆ ಬರುತ್ತಿಲ್ಲ ಎಂದು ಗ್ರಾಮಸ್ಥರು ಚರ್ಚೆಯಲ್ಲಿ ತೊಡಗಿದ ಸಂದರ್ಭದಲ್ಲಿಯೇ, ತವರು ಮನೆಗೆ ಬಾಣಂತನಕ್ಕೆ ಬಂದಿದ್ದ ಊರ ಮನೆಮಗಳು ಕೆರೆಯ ದಡಕ್ಕೆ ಹೋಗಿ ನೋಡುತ್ತಿರುವ ಸಂದರ್ಭದಲ್ಲಿ ಒಮ್ಮಿಂದೊಮ್ಮೆಲೆ ಕೆರೆಯಲ್ಲಿ ನೀರು ಉಕ್ಕಿ ಬಾಣಂತಿ ಮಗಳನ್ನು ಬಲಿ ತೆಗೆದುಕೊಂಡಿತು. ಈ ಹಿನ್ನೆಲೆಯಲ್ಲಿ ಕೆರೆಗೆ ಬಾಣಂತಿ ದೇವಿ ಕೆರೆ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ.
ಅಳ್ವೆಕೋಡಿ ಮಾರಿ ಜಾತ್ರೆ ರದ್ದು
ಶಕ್ತಿದೇವತೆ ಎಂದೇ ಪ್ರಸಿದ್ಧ ಪಡೆದಿರುವ ಭಟ್ಕಳ ತಾಲ್ಲೂಕಿನ ಶಿರಾಲಿ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಸಂಕ್ರಾಂತಿಯಂದು ಆರಂಭವಾಗಿ, ವಿಜೃಂಭಣೆಯಿಂದ ಜರುಗುತ್ತಿದ್ದ ದುರ್ಗಾಪರಮೇಶ್ವರಿ ಮಾರಿಜಾತ್ರಾ ಮಹೋತ್ಸವ ಈ ಬಾರಿ ಕೋವಿಡ್ ಕಾರಣದಿಂದಾಗಿ ರದ್ದಾಗಿದೆ. ಇಲ್ಲಿ ಸಾವಿರಾರು ಜನ ಜಾತ್ರಾ ಸಮಯದಲ್ಲಿ ಭೇಟಿ ನೀಡಿ ಹರಕೆ, ಪೂಜೆ ಸಲ್ಲಿಸುತ್ತಿದ್ದರು. ಈ ಬಾರಿ ಚಂಡಿಕಾ ಹವನ ಹಾಗೂ ಪೂಜೆಗಳನ್ನು ದೇವಸ್ಥಾನದ ಆಡಳಿತ ಮಂಡಳಿಯವರ ಪಾಲ್ಗೊಳ್ಳುವಿಕೆಯಲ್ಲಿ ಸಾಂಪ್ರದಾಯಿಕವಾಗಿ ನಡೆಸಲಾಗುತ್ತದೆ.
Recommended Video
ಶೇಡಬರಿ ಜಾತ್ರೆಯಲ್ಲಿ ಶೇಡಿ ಮರ ಹತ್ತುವ ಹರಕೆ
ಭಟ್ಕಳ ತಾಲ್ಲೂಕಿನ ಹೆಬಳೆಯ ಶೇಡಬರಿ ಜಟಕಾ ಮಹಾಸತಿ ದೇವಿಯ ಜಾತ್ರೆಯು ಮಕರ ಸಂಕ್ರಮಣದ ದಿನದಂದು ವಿದ್ಯುಕ್ತವಾಗಿ ಆರಂಭವಾಗಲಿದೆ. ಈ ಜಾತ್ರೆಯಲ್ಲಿ ಭಕ್ತರು ಶೇಡಿ ಮರವನ್ನು ಏರುವ ಹರಕೆ ವಿಶೇಷವಾಗಿದೆ. ತಮ್ಮ ಕಷ್ಟ ಕಾಲದಲ್ಲಿ ಶೇಡಬರಿ ಮಹಾಸತಿ ದೇವಿಯ ಬಳಿ ಶೇಡಿಮರ ಏರುವುದಾಗಿ ಹೇಳಿಕೆ ಮಾಡಿಕೊಂಡರೆ, ಆ ಕಷ್ಟಗಳು ಪರಿಹಾರವಾಗಿ ಸುಖ, ಸಮೃದ್ಧಿ ಲಭಿಸುತ್ತದೆ ಎಂಬ ನಂಬಿಕೆ ಮಹಾಸತಿ ದೇವಿಯ ಭಕ್ತರಲ್ಲಿ ಇದೆ. ಆ ಹರಕೆಯನ್ನು ಜಾತ್ರೆಯ ಸಂದರ್ಭದಲ್ಲಿ ಸಲ್ಲಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ.